ಪ್ರಕೃತಿ ಒಲವು ತೋರಿದ ಸಂದರ್ಭದಲ್ಲಿ ಕಾವೇರಿ ವಿವಾದವಾಗದೆ ಒಬ್ಬರಿಗೊಬ್ಬರು ನೆಮ್ಮದಿ ಕಂಡುಕೊಂಡಿದ್ದೇವೆ. ಸಮಸ್ಯೆ ಇರುವುದು ಬರಗಾಲದ ಸಂದರ್ಭದಲ್ಲಿ ನಮಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಬೆಳೆಗೆ ನೀರು ಕೊಡಿ ಎಂದಾಗ ನಮಗೆ ಧರ್ಮ ಸಂಕಟವಾಗುತ್ತದೆ. ಉದ್ದೇಶಿತ ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ನಾಲ್ಕು ರಾಜ್ಯಗಳ ಬೇಡಿಕೆ ಬಗೆ ಹರಿದು ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ. ಇದಕ್ಕೆ ಕಾವೇರಿ ಕುಟುಂಬ ಒಟ್ಟಾಗಿ ಪ್ರಯತ್ನಿಸಿದರೆ ದಶಕಗಳ ಸಮಸ್ಯೆ ಪರಿಹಾರವಾಗಲಿದೆ ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಹೇಳಿದರು.
ಅವರು ಅ.22ರ ಮಂಗಳವಾರ ಮೈಸೂರಿನ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ಕರ್ನಾಟಕ-ತಮಿಳುನಾಡು-ಕೇರಳ-ಪಾಂಡಿಚೇರಿ ರಾಜ್ಯಗಳ ರೈತ ಸಂಘಗಳ ನಿಯೋಗದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾವೇರಿ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಇದರಲ್ಲಿ ತಮಿಳುನಾಡಿನ ತಮಿಜಗ ಕಾವೇರಿ ಫಾರ್ಮರ್ಸ್ ಅಸೋಸಿಯೇಷನ್ ಸಂಘಟನೆಯ ಪಿ.ಆರ್ ಪಾಂಡೊಯನ್ , ಕೇರಳದ ಬಿಜು ನೇತೃತ್ವದ ರೈತ ಸಂಘಟನೆಯ ರೈತರು ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ರೈತರು ಭಾಗವಹಿಸಿದ್ದರು.
ರಾಮನಗರ ಜಿಲ್ಲೆಯ ರೈತರ ನಿಯೋಗದ ಪರವಾಗಿ ಭಾಗವಹಿಸಿದ್ದ ಪ್ರಶಾಂತ್ ಹೊಸದುರ್ಗ ಮಾತನಾಡಿ ನಮ್ಮ , ನೆಲ, ಜೀವರಾಶಿ, ಅರಣ್ಯ ಸಂಪತ್ತು, ಧನ ಸಂಪತ್ತು, ಜನ ಜೀವನ ಎಲ್ಲವನ್ನೂ ನಾವು ನಿಮಗಾಗಿ ಕಳೆದುಕೊಂಡು ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಿದರೆ , ವ್ಯರ್ಥವಾಗಿ ಹೋಗುವ ನೀರನ್ನು ಸಂರಕ್ಷಿಸಿಕೊಂಡು ನಿಮಗೆ ನೀಡಲು ಸಿದ್ದವಿದ್ದೇವೆ. ಇದರ ಬಹುಪಾಲು ಫಲಾನುಭವಿಗಳು ನೀವೇ ಆಗಿರುವಿರಿ. ನಮ್ಮ ತಾತ, ತಂದೆ ಕಾಲದಲ್ಲಿ ಪರಿಹಾರ ಕಾಣದೆ ಬಸವಳಿದು ನಾವು ಉಂಡ ನೋವನ್ನು ನಮ್ಮ ಮಕ್ಕಳಿಗೆ ಉಳಿಸಿ ಹೋಗಲು ಸಾಧ್ಯವಿಲ್ಲ. ದಯವಿಟ್ಟು ಈ ಸೌಹಾರ್ದ ಸಭೆಯಲ್ಲಿ ಮೇಕೆದಾಟು ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದರೆ ಅದು ಕೇವಲ ಅಣೆಕಟ್ಟು ಎನಿಸಿಕೊಳ್ಳದೆ ಎರಡು ರಾಜ್ಯಗಳ ಶಾಂತಿ ಸೌಹಾರ್ದತೆಯ ಸೇತುವೆಯಾಗುತ್ತದೆ ಎಂದು ಪ್ರಾರ್ಥಿಸಿದರು.

ಹಲವು ವರ್ಷಗಳ ಹಿಂದೆ ಕಾವೇರಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾವೇರಿ ಕುಟುಂಬ ಎಂಬ ಹೆಸರಿನಲ್ಲಿ ಒಂದುಗೂಡಿದ್ದ ನಾಲ್ಕು ರಾಜ್ಯಗಳ ರೈತರು ನಂತರದ ದಿನಗಳಲ್ಲಿ ಕಾವೇರಿ ವಿವಾದದ ಬಗ್ಗೆ ದೂರ ಉಳಿದಿದ್ದರು. ಈಗ ಸೌಹಾರ್ದ ವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎರಡನೇ ಬಾರಿ ಸಭೆ ಸೇರಲಾಗಿತ್ತು.
ಸಭೆಯಲ್ಲಿ ಕರ್ನಾಟಕದ ಪರ ರೈತ ನಾಯಕರು ಮೇಕೆದಾಟು ಯೋಜನೆ ಬಗ್ಗೆ ಸಹಕಾರ ಕೋರಿದರೆ, ತಮಿಳುನಾಡು ಹಾಗೂ ಪಾಂಡಿಚೆರಿಯ ರೈತ ನಾಯಕರು ಮೇಕೆದಾಟು ನಿರ್ಮಾಣ ಬೇಡ ಗಡಿಭಾಗದಲ್ಲಿ ರಾಶಿ ಮನಾಲ್ ಡ್ಯಾಮ್ ನಿರ್ಮಾಣಕ್ಕೆ ಸಹಕಾರ ಕೋರಿದರು. ಕೇರಳದ ರೈತರು ಹೆಚ್ಚಿನ ಟಿಎಂಸಿ ನೀರಿಗಾಗಿ ಬೇಡಿಕೆಯಿತ್ತರು. ಬುಧವಾರ ಈ ರೈತರ ನೇತೃತ್ವದ ನಿಯೋಗವು ಕನಕಪುರ ತಾಲೂಕಿನ ಉದ್ದೇಶಿತ ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ರಾಜ್ಯ ರೈತ ಸಂಘ ಕಗ್ಗಲೀಪುರ ವೃತ್ತದ ಅಧ್ಯಕ್ಷ ನದೀಂ ಪಾಷ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಬಿ.ಎಂ ಪ್ರಕಾಶ್, ಗಜೇಂದ್ರ ಸಿಂಗ್, ಶ್ರೀನಿವಾಸ್, ಬಡಗಲಪುರ ನಾಗರಾಜು, ಮುಂತಾದವರು ಹಾಜರಿದ್ದರು.

