ಕೋಮುವಾದಿ ಬಿಜೆಪಿ ಶಾಸಕ ಮುನಿರತ್ನ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ನಿಂದಿಸಿರುವುದು ಖಂಡನೀಯ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು, ಕಠಿಣ ಕಾನೂನು ಕ್ರಮ ಕೈಗೊಂಡು ದಲಿತರ ಕ್ಷಮೆ ಕೋರಬೇಕು ಎಂದು ಅಹಿಂದ ಮುಖಂಡ ಜವರಪ್ಪ ಆಗ್ರಹಿಸಿದರು.
ಮೈಸೂರು ನಗರದ ಟೌನ್ ಹಾಲ್ ಬಳಿಯ ಬಾಬಾ ಸಾಹೇಬರ ಪುತ್ಥಳಿ ಎದುರು ದಲಿತ ಸಂಘರ್ಷ ಸಮಿತಿ(ದಸಂಸ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿದ್ದರೂ ದಲಿತರ ಮೇಲಿನ ದೌರ್ಜನ್ಯ, ನಿಂದನೆ, ಅವಹೇಳನಕಾರಿ ಘಟನೆಗಳು ಮಾತ್ರ ನಿಲ್ಲುತ್ತಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿ, ಆಯ್ಕೆ ಮಾಡಿದ ಆದೇ ದಲಿತರನ್ನು ಅವಹೇಳನ ಮಾಡುವುದು ಖಂಡನೀಯ. ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತಹದ್ದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೋಮುವಾದಿ ಬಿಜೆಪಿಗರು ದಲಿತರನ್ನು ನಿಂದಿಸುವುದು, ದೌರ್ಜನ್ಯ ನಡೆಸುವುದನ್ನು ರಾಜಕೀಯದ ಭಾಗವಾಗಿ ಮಾಡಿಕೊಂಡಿದ್ದಾರೆ. ಅಧಿಕಾರದ ಲಾಲಸೆಗೆ ದಲಿತರನ್ನು ಅಸ್ತ್ರವಾಗಿ ಬಳಸಿ ತನ್ನ ನೀಚ ಪ್ರವೃತ್ತಿಯನ್ನು ಮುಂದುವರಿಸಿದೆ” ಎಂದು ವಿಷಾದಿಸಿದರು.
“ಇತ್ತೀಚೆಗೆ ನಾಮುಂದು ತಾಮುಂದು ಎನ್ನುವಂತೆ ಎಲುಬಿಲ್ಲದ ನಾಲಿಗೆ ಹರಿಬಿಡುತ್ತಿರುವ ಅನಾಚಾರಿಗಳು ಜನಪ್ರತಿನಿಧಿಗಳೇ ಆಗಿರುವುದು ನಿಜಕ್ಕೂ ಶೋಚನೀಯ ಸಂಗತಿ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದ್ದ ಜನಪ್ರತಿನಿಧಿಗಳು ಬೇಲಿಯೇ ಎದ್ದು ಹೊಲ ಮೇಯ್ದಂತೆ ನಾಲಿಗೆ ಹರಿಬಿಟ್ಟು ಕೋಮುದಳ್ಳುರಿಗೆ ಕಾರಣರಾಗುತ್ತಿರುವುದು ಆತಂಕವನ್ನುಂಟು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಚಳವಳಿ ನವನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ ಮಾತನಾಡಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ನಡೆದದ್ದೇ ದಾರಿ ಎಂಬ ಅಹಂಕಾರದಲ್ಲಿ ಇಂದಿನ ಜನಪ್ರತಿನಿಧಿಗಳು ಆಯ್ಕೆ ಮಾಡಿದ ಜನತೆಯನ್ನು ಮರೆತು ಮೆರೆಯುತ್ತಿದ್ದಾರೆ. ಮತ ಕೇಳುವಾಗ ಅಣ್ಣ, ಅಪ್ಪ, ಅವ್ವ, ಅಕ್ಕ ಅನ್ನುವ ಹೇಡಿಗಳಿಗೆ ಅಧಿಕಾರಕ್ಕೆ ಬಂದಕೂಡಲೇ ಮದ ನೆತ್ತಿಗೇರಿ ತಲೆ ತಿರುಗುವಂತೆ ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇದಕ್ಕೆ ಪೂರಕವಾಗಿ ಕೋಮುವಾದಿ ಪಕ್ಷದ ಶಾಸಕ ಮುನಿರತ್ನ ತನ್ನ ದುಡ್ಡು ಮತ್ತು ಅಧಿಕಾರದ ಅಮಲಿನಿಂದ ದಲಿತ ಗುತ್ತಿಗೆದಾರರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಂಡು, ಜಾತಿ ಹೆಸರಿಡಿದು ಬಾಯಿಗೆ ಬಂದಂತೆ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಇತರೆ ಸಮಾಜದವರನ್ನು ಕೀಳಾಗಿ ಜರಿದಿರುವುದು ಅಸಹ್ಯವನ್ನುಂಟುಮಾಡಿದೆ” ಎಂದರು.
“ಮತಕ್ಕಿರದ ಮೇಲು ಕೀಳು, ಬದುಕುವಾಗ ಮಗ್ಗುಲಿನ ಮುಳ್ಳಿನಂತೆ ಕಾಣುವ ನೀಚತನ ಮನೆಮಾಡಿದ್ದು, ಸಮಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಮೂಲಕ ಜನರ ಮನಸ್ಸಿಗೆ ಘಾಸಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇಂಥವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಆಗಬೇಕು. ಕಠಿಣ ಕ್ರಮದ ಮೂಲಕ ಶಾಸಕ ಸ್ಥಾನದಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಪತ್ರಕರ್ತ ದಿ.ಮೋಹನ್ ಕುಮಾರ್ ಮಗನ ಮೇಲೆ ಮಾರಣಾಂತಿಕ ಹಲ್ಲೆ; ಕೊಲೆ ಯತ್ನ ಆರೋಪ
ಪ್ರತಿಭಟನೆಯಲ್ಲಿ ದೇವಗಳ್ಳಿ ಸೋಮಶೇಖರ್, ವಕೀಲ ಅರ್ಜುನಳ್ಳಿ ಕಾಂತರಾಜು, ಬೆಲವತ್ತ ರಾಮಚಂದ್ರ, ಪ್ರಸನ್ನ ತಳೂರು, ಶ್ಯಾದನಹಳ್ಳಿ ನಾರಾಯಣ, ಬೊಕ್ಕಳ್ಳಿ ನಿಂಗಯ್ಯ, ನಾರಾಯಣ ಸ್ವಾಮಿ, ಆರ್ಟಿಸ್ಟ್ ನಾಗರಾಜು, ಶಿವಬುದ್ಧಿ, ವೆಂಕಟೇಶ್, ನಟರಾಜ, ರವೀಂದ್ರ, ಚಿಕ್ಕ ಚಲುವ, ರಾಜು, ಶಂಕರ್, ಬಾಬು, ಮಹೇಶ್, ಪರಮೇಶ್ ಸೇರಿದಂತೆ ಇತರರು ಇದ್ದರು.