ಮೈಸೂರು ಜಿಲ್ಲೆಯ ಕೈಲಾಸಪುರ ಗ್ರಾಮದ ಜಮೀನಿನಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ನೇಪಾಳಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನೇಪಾಳ ಮೂಲದ ನಿರ್ಮಲಾ ತನ್ನ ಪತಿ ಗೋಪಾಲ್ ಮತ್ತು ಇಬ್ಬರು ಮಕ್ಕಳೊಂದಿಗೆ ಈರೇಗೌಡ ಎಂಬವರ ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದರು. ಅವರು ಕಳೆದ ಒಂದೂವರೆ ವರ್ಷಗಳಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.
ಈರೇಗೌಡ ಎಂಬಾತ ಗೋಪಾಲ್ಗೆ ₹300 ಮತ್ತು ನಿರ್ಮಲಾಗೆ ₹200ರಂತೆ ದಿನಗೂಲಿ ನಿಗದಿಪಡಿಸಿದ್ದರು. ಅವರು ಪ್ರತಿದಿನ ಬೆಳಿಗ್ಗೆ 4 ರಿಂದ ರಾತ್ರಿ 8 ರವರೆಗೆ ಕೆಲಸ ಮಾಡಲು ಒತ್ತಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ದಂಪತಿಗಳನ್ನು ಬೇರ್ಪಡಿಸಿದ್ದ ಈರೇಗೌಡ, ಅವರನ್ನು ಬೇರೆ ಬೇರೆ ಊರುಗಳಲ್ಲಿ ಇಟ್ಟು ದುಡಿಸುತ್ತಿದ್ದ. ಗೋಪಾಲ್ ಅವರನ್ನು ಕೊಡಗಿನಲ್ಲಿ ಇರಿಸಿದ್ದರು. ಕುಟುಂಬದೊಂದಿಗೆ ಸಂವಹನ ನಡೆಸಲು ಮತ್ತು ನಿರ್ಮಲಾಗೆ ಅವನೊಂದಿಗೆ ದೂರವಾಣಿಯಲ್ಲಿ ಮಾತನಾಡಲೂ ಅವಕಾಶವಿರಲಿಲ್ಲ.
“ತನ್ನ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದು, ಆಹಾರವನ್ನು ನೀಡದೆ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಗೌಡರು ನಮ್ಮ ಮಕ್ಕಳಿಂದಲೂ ದುಡಿಮೆ ಮಾಡಿಸಿಕೊಳ್ಳುತ್ತಿದ್ದಾರೆ. ನಾವು ನಮ್ಮ ಊರಿಗೆ ಮರಳದಂತೆಯೂ ತಡೆದಿದ್ದಾರೆ” ಎಂದು ಸಂತ್ರಸ್ತೆ ನಿರ್ಮಲಾ ಆರೋಪಿಸಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಡುಗಡೆಯಾಗದ ಅನುದಾನ; ತಾತ್ಕಾಲಿಕ ಶೆಡ್ನಲ್ಲಿ ಕುಟುಂಬ
ತಹಶೀಲ್ದಾರ್ ಶ್ರೀನಿವಾಸ್, ಸಿಡಿಪಿಒ ಆಶಾ ಮತ್ತು ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡವು ಜಮೀನಿನ ಮೇಲೆ ದಾಳಿ ನಡೆಸಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಿದೆ.
ನಿರ್ಮಲಾ ಮತ್ತು ಅವರ ಮಕ್ಕಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವಶಕ್ಕೆ ಒಪ್ಪಿಸಿದ್ದು, ಅಧಿಕಾರಿಗಳು ಆರೋಪಿ ಭೂಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.