ಮೈಸೂರು | ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ʼವೇಶ್ಯಾವಾಟಿಕೆಯ ಕಥೆ-ವ್ಯಥೆ’ ಕೃತಿ ಆಯ್ಕೆ

Date:

Advertisements

ಲೇಖಕಿ, ಸಂಶೋಧಕಿ ಬಿ.ಎಂ ರೋಹಿಣಿ ಅವರ  ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’ ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ) ನೀಡಲಾಗುವ ‘ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ 2019-2022ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಲಾಗಿತ್ತು. 46 ಮಂದಿ ಲೇಖಕಿಯರು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಅವುಗಳನ್ನು ಅವಲೋಕಿಸಿದ ಡಾ. ಎಂ.‌ ಉಷಾ, ಡಾ.ಸೆಲ್ವಕುಮಾರಿ ಮತ್ತು ಡಾ. ಆರ್ ಸುನಂದಮ್ಮ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸಂಶೋಧನೆಯ ವಸ್ತು, ವ್ಯಾಪ್ತಿ, ವಿಷಯ ಮತ್ತು ಒಳನೋಟಗಳನ್ನು ಪರಿಗಣಿಸಿ ರೋಹಿಣಿಯವರ ಕೃತಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ₹25,000 ನಗದು ಬಹುಮಾನ, ಫಲಕವನ್ನು ಒಳಗೊಂಡಿದೆ.

“ಎಪ್ಪತ್ತೊಂಬತ್ತರ ಹರೆಯದಲ್ಲೂ ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ರೋಹಿಣಿಯವರನ್ನು ಹಲವು‌ ಸಂಘ ಸಂಸ್ಥೆಗಳು‌ ಗೌರವಿಸಿವೆ. ಸಮತಾ ಅಧ್ಯಯನ ‌ಕೇಂದ್ರವು ʼವಿಜಯಾ ದಬ್ಬೆʼ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಮೊದಲನೆಯ ವರ್ಷವೇ ಈ ಹಿರಿಯಕ್ಕನಿಗೆ ನೀಡಲು ಹೆಮ್ಮೆ ಪಡುತ್ತದೆ. ಜೂನ್  1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ” ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಗೆ ತಿಳಿಸಿದ್ದಾರೆ.

Advertisements

ಬಿ.ಎಂ.ರೋಹಿಣಿ ಪರಿಚಯ:

ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ ಸರಳ ಸ್ವಭಾವದ ಬಿ.ಎಂ.ರೋಹಿಣಿ ಮಂಗಳೂರು ತಾಲೂಕು ಬಂಟ್ವಾಳ ಹತ್ತಿರದ ತುಂಬೆಯ ಕಾಣೆಮಾರಿನಲ್ಲಿ 1944 ಏಪ್ರಿಲ್ 6 ರಂದು ಜನಿಸಿದರು. ತಾಯಿ ದೇವಕಿ, ತಂದೆ ಕೊಗ್ಗಪ್ಪ.

ಕಪ್ಪು ಬಣ್ಣದ ಹುಡುಗಿಗೆ ಶಾಲೆ ಕಲಿವ ಆಸೆ. ಬಡತನ ಇವರಿಗೆ 6ನೇ ತರಗತಿಯಿಂದಲೇ ಬೀಡಿ ಕಟ್ಟಲು ಕಲಿಸಿತು. ತಂದೆಯಿಂದ ಸಾಹಿತ್ಯ-ಸಂಗೀತದ ಆಸಕ್ತಿ ಬಳುವಳಿಯಾಗಿ ಬಂದಿತ್ತಾದರೂ ವಿದ್ಯೆಗೆ ಬೆಂಗಾವಲಾಗಿದ್ದು ತಾಯಿ. ಬಾಲ್ಯದಿಂದಲೇ ಬರೆವಣಿಗೆ  ಕೈ ಹಿಡಿದಿತ್ತು. ಆದರೆ, ಇತರರಿಗೆ ತೋರಿಸುವ ಧೈರ್ಯವಿರಲಿಲ್ಲ. ಬಡತನ, ಅವಮಾನಗಳು, ಮೈಬಣ್ಣ ಇವರನ್ನು ಕೀಳರಿಮೆಯ ಕೂಪಕ್ಕೆ ನೂಕಿತ್ತು. ಇವೆಲ್ಲದರ ಮಧ್ಯೆ ಬದುಕನ್ನು ಹಿಡಿದಿಟ್ಟು ನಡೆಸುವ ಛಲಕ್ಕೆ ಕೊರತೆ ಇರಲಿಲ್ಲ.

ಓದು ಮುಗಿಸಿ ಶಾಲಾ ಶಿಕ್ಷಕಿಯಾದರು.  ಹಲವು ಏಳು ಬೀಳುಗಳೊಂದಿಗೆ ಜೀವನ ಅನುಭವಿಸುತ್ತಾ, ಓದು-ಬರಹ ರೂಢಿಸಿಕೊಂಡರು. ಅನುಭವಗಳ ಆಧಾರದ ಮೇಲೆ ನೇರವಾಗಿ, ಸರಳವಾಗಿ ಬರೆದರು. ಅವರಿಗೆ ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ. ಅಸಾಧ್ಯವಾದ ಆದರ್ಶಗಳನ್ನು ಅವರು ಬರೆದಿಲ್ಲ. ಇದುವೇ ಪರಮ ಸತ್ಯ ಎನ್ನುವುದಕ್ಕಿಂತ, ಬೇರೆಬೇರೆ ಆಲೋಚನೆಗಳಿಗೆ ತೆರೆದುಕೊಳ್ಳುವ ಪ್ರಯತ್ನ ಮಾಡಿದ್ದು ಅವರ ಬರೆವಣಿಗೆಯಲ್ಲಿ ಎದ್ದುಕಾಣುತ್ತದೆ. ಶಿಕ್ಷಕಿಯಾಗಿ ಅವರ ಸಾಧನೆ ಅಪಾರ.

ಪ್ರಕಟಿತ ಕೃತಿಗಳು: ಕರ್ತವ್ಯ , ಗರಿಕೆಯ ಕುಡಿಗಳು, ʼಒಂದು ಹಿಡಿ ಮಣ್ಣುʼ ಇವರ ಕಥಾ ಸಂಕಲನಗಳು. ʼಸ್ತ್ರೀ-ಸಂವೇದನೆʼ, ʼಸ್ತ್ರೀ ಶಿಕ್ಷಣ ಸಂಸ್ಕೃತಿʼ, ʼಸ್ತ್ರೀ ಭಿನ್ನ ಮುಖಗಳುʼ, ʼಸಾಮಾಜಿಕ ತಲ್ಲಣಗಳುʼ, ʼಆರಾಧನಾ ರಂಗದಲ್ಲಿ ಸ್ತ್ರೀʼ, ʼಪ್ರತಿಸ್ಪಂದನ ಮತ್ತು  ಸಮೀಕ್ಷೆʼ ಅವರ ಲೇಖನ, ವಿಮರ್ಶಾ ಕೃತಿಗಳು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಹೆಚ್ಚಿದ ಮಳೆ, ಕುಸಿದ ಬೆಲೆ; ಕಂಗಾಲಾದ ಹೂ ಬೆಳೆಗಾರರು

ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ವಿಶಿಷ್ಟ. ಅವಿವಾಹಿತ ಮಹಿಳೆ- ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ ಇವು  ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳು. ʼವೇಶ್ಯಾವಾಟಿಕೆಯ ಕಥೆ-ವ್ಯಥೆʼ(2022) ಅವರದೇ ಸಂಶೋಧನಾ ಕೃತಿ. ‘ಅಧ್ಯಾಪಕಿಯ ಅಧ್ವಾನಗಳು’ ಅನುಭವ ಕಥನ. ‘ನಾಗಂದಿಗೆಯೊಳಗಿನಿಂದ’ ಜೀವನ ಕಥನ.

ಬರೆವಣಿಗೆ, ಓದಿಗಷ್ಟೆ ಸೀಮಿತವಾಗದೆ ವಿಭಿನ್ನ ಸಾಮಾಜಿಕ ಚಟುವಟಿಕೆಗಳ ಒಡನಾಟವನ್ನು ಸದಾ ಇಟ್ಟುಕೊಂಡವರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಡೀಡ್ಸ್, ವೆಲೊರೆಡ್, ಸಂಚಲನ, ಶಿಕ್ಷಕ-ಸಂಗತಿ ಮುಂತಾದ ಹಲವು ಸಂಘ ಸಂಸ್ಥೆಗಳ ಜೊತೆ ಸಕ್ರಿಯವಾಗಿದ್ದಾರೆ.  ಹೊರನೋಟಕ್ಕೆ ಅತ್ಯಂತ ಸರಳವಾಗಿ, ನಮ್ರವಾಗಿ ಕಾಣುವ ಅವರ ಬದುಕಿನ ತುಂಬ ದಿಟ್ಟ ನಿರ್ಧಾರಗಳೇ ತುಂಬಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X