ಮಾರುಕಟ್ಟೆಯಲ್ಲಿ ಜಾಗ ಇಲ್ಲದಷ್ಟು ಹೂಗಳನ್ನು ಮಾರಾಟ ಮಾಡಲು ಬಂದಿರುವ ರೈತರು, ತಂದ ಹೂ ಮಾರಾಟವಾಗದೆ ಬೀದಿಗೆ ಸುರಿದು ಬರುತ್ತಿರುವ ದೃಶ್ಯಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂಡುಬಂದಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹೂ ಹೊಳಪು ಕಳೆದುಕೊಂಡಿದ್ದರೆ, ಇನ್ನೊಂದೆಡೆ ಹೂವಿನ ಇಳುವರಿ ದುಪ್ಪಟ್ಟಾಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ರಫ್ತಾಗುತ್ತಿದ್ದ ಹೂಗಳನ್ನು ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಕೇಳೋರು ಇಲ್ಲದಂತಾಗಿದ್ದು, ಹೂಗಳು ಬೀದಿಪಾಲಾಗುತ್ತಿವೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಹೂಗಳು ಮಾರಾಟವಾಗದ ಹಿನ್ನೆಲೆಯಲ್ಲಿ ಹೂ ಬೆಳೆಗಾರರು ಹೂಗಳನ್ನು ಬೀದಿಗೆ ಸುರಿದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೇಸರದಿಂದ ಬರಿಗೈಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಮಳೆ | ಮನೆಗಳಿಗೆ ನುಗ್ಗಿದ ಚರಂಡಿ ನೀರು; ಜನಜೀವನ ಅಸ್ತವ್ಯಸ್ಥ
ಜಿಲ್ಲೆಯಲ್ಲಿ ಬಹುತೇಕ ರೈತರು ಹೂ ಬೆಳೆಯುತ್ತಿದ್ದು, ವಿವಿಧ ಬಗೆಯ ಹೂಗಳನ್ನು ಬೆಳೆದು ಇಡೀ ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದರು. ಜಿಲ್ಲೆಯಲ್ಲಿ ನೂರಕ್ಕೆ ಶೇ. 70ರಷ್ಟು ರೈತರು ಹೂ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾಗಿ ಹೂ ಬೆಳೆ ದುಪ್ಪಟ್ಟಾಗಿದ್ದು, ಮಾರುಕಟ್ಟೆಯಲ್ಲಿ ಜಾಗ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂ ಬೆಲೆ ಪಾತಾಳಕ್ಕೆ ಕುಸಿದಿದೆ ಎನ್ನಲಾಗಿದೆ.
ಸೆಂಟ್ ಹಳದಿ ಸೇವಂತಿ ಹೂ ₹200ರಿಂದ ₹100ಕ್ಕೆ ಕುಸಿದಿದೆ. ಮೆರಾಬುಲ್ ಹೂ ಕೇವಲ ₹10ಕ್ಕೆ ಮಾರಾಟವಾಗುತ್ತಿದೆ. ಸೇವಂತಿ ಚಾಕಲೇಟ್ ₹120 ರಿಂದ ₹70ಕ್ಕೆ ಕುಸಿದಿದ್ದು, ಐಶ್ವರ್ಯ ₹250ರಿಂದ ₹100ಕ್ಕೆ ಇಳಿದಿದೆ. ಇನ್ನು ಚೆಂಡು ಹೂ ₹70 ರಿಂದ ₹10ಕ್ಕೆ ಕುಸಿದಿದೆ. ಗುಲಾಬಿಯನ್ನು ಕೇಳುವವರೇ ಇಲ್ಲದಂತಾಗಿತ್ತು, ತಿಪ್ಪೆಗೆ ಸುರಿಯುವಂತಾಗಿದೆ.