ಭರವಸೆಗಳೆಲ್ಲ ಹುಸಿಯಾಗಿ, ನಿರಾಶೆಯ ಮೊತ್ತವೇ ಆವರಿಸಿಕೊಂಡಿದೆ ಎನ್ನುವಂತಹ ಸಂದರ್ಭದಲ್ಲೂ ಮನುಷ್ಯನೊಳಗೊಂದು ಭರವಸೆಯ ಕಿಡಿ ಮಿನುಗುತ್ತದಲ್ಲ, ಅಂಥದೊಂದು ಆಸೆ ಭರವಸೆಯ ಮಿನುಗಿನ ಕೃತಿ ‘ನನ್ನ ಅರಿವಿನ ಪ್ರವಾದಿ’ ಎಂದು ಸಾಹಿತಿ ಹಾಗೂ ಚಿಂತಕ ಯೋಗೇಶ್ ಮಾಸ್ಟರ್ ಹೇಳಿದರು.
ಮೈಸೂರಿನ ಹೋಟೆಲ್ ಪ್ರೆಸಿಡೆಂಟ್ನಲ್ಲಿ ಸಮಾನತೆಯ ಸಮಾಜದ ಶಿಲ್ಪಿ, ಪ್ರವಾದಿ ಮಹಮ್ಮದ್ (ಸ) ರಾಜ್ಯವ್ಯಾಪಿ ಸೀರತ್ ಅಭಿಯಾನದ ಅಂಗವಾಗಿ ಶನಿವಾರ ಜಮಾಅತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನನ್ನ ಅರಿವಿನ ಪ್ರವಾದಿ ಕೃತಿಯ ಉದ್ದೇಶವೂ, ಪ್ರವಾದಿ ಮುಹಮ್ಮದರೆಂಬ ಅಪೂರ್ವ ಹಣತೆಯ ಬೆಳಕಿನಲ್ಲಿ, ನಮ್ಮನ್ನು ನಮಗೇ ಕಾಣಿಸುವ ಹಂಬಲವಾಗಿದೆ. ಅಂತರಂಗ ಹಾಗೂ ಬಹಿರಂಗ ಶುದ್ಧಿಯುಳ್ಳ ಮಹಾತ್ಮರ ರೂಪದಲ್ಲಿ ಪ್ರವಾದಿ ಮುಹಮ್ಮದರನ್ನು ಲೇಖಕನೊಬ್ಬನ ಸಾಮಾಜಿಕ ಹೊಣೆಗಾರಿಕೆಯ ರೂಪದಲ್ಲಿ ನೋಡಬಹುದಾದ ಈ ಕೃತಿಯಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿವೆ” ಎಂದು ತಿಳಿಸಿದರು.
“ಇಸ್ಲಾಂ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಪ್ರಚಾರ ಮಾಡಿ, ‘ಇಸ್ಲಾಮೋಫೋಬಿಯಾ’ವನ್ನು ಉಂಟು ಮಾಡುವ ಒಂದು ವರ್ಗದ ಪ್ರಯತ್ನಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಮುಸಲ್ಮಾನ ಧರ್ಮದ ಅಂತರ್ಜಲದಂತಿರುವ ಜೀವನ ಮೌಲ್ಯಗಳನ್ನು ಜನರ ಗಮನಕ್ಕೆ ತರುವುದು ಈ ಕೃತಿ ರಚನೆಯ ಮೊದಲ ಉದ್ದೇಶವಾಗಿದೆ. ಎರಡನೆಯದು, ಧಾರ್ಮಿಕ ಸಂಗತಿಗಳ ಬಗ್ಗೆ ಆಸಕ್ತಿ ಇಲ್ಲದೆ ಹೋದರೂ, ಜೀವನವನ್ನು ಹಸನುಪಡಿಸಲು ಬೇಕಾದ ಆದರ್ಶಗಳನ್ನು ಸಹೃದಯನೊಬ್ಬ ಎಲ್ಲ ಧರ್ಮಗಳಿಂದಲೂ ಸ್ವೀಕರಿಸುವುದು ಸಾಧ್ಯವಿದೆ ಎನ್ನುವುದು, ಈ ಎರಡೂ ಕಾರಣಗಳಿಂದಾಗಿ ಈ ಕೃತಿ ಮುಖ್ಯವಾಗಿದೆ” ಎಂದು ತಿಳಿಸಿದರು.
“ಹಿಂದೂ, ಕ್ರೈಸ್ತ, ಬೌದ್ಧ, ಜೈನ ಧರ್ಮಗಳು ಸೇರಿದಂತೆ ಹಲವು ಧರ್ಮಗಳಲ್ಲಿನ ಸದಾಶಯಗಳು ಇಸ್ಲಾಂ ಧರ್ಮದಲ್ಲೂ, ಪ್ರವಾದಿಯ ಬೋಧನೆಯಲ್ಲೂ ಇರುವುದನ್ನು ಈ ಕೃತಿಯ ಮೂಲಕ ತರಲಾಗಿದೆ. ಇತರ ಧರ್ಮಗಳಂತೆಯೇ ಇಸ್ಲಾಂ ಧರ್ಮ ಕೂಡ ಸದಾಶಯಗಳ ಮಟ್ಟಿಗೆ ಭಿನ್ನವಲ್ಲ ಎನ್ನುವುದನ್ನು ಓದುಗರಿಗೆ ವಿವರಿಸಿದ್ದು, ಮುಸ್ಲಿಂ ಧರ್ಮದ ಕುರಿತ ಅಪವ್ಯಾಖ್ಯಾನಗಳನ್ನು ಹೋಗಲಾಡಿಸುವ ಪ್ರಯತ್ನ ಇದಾಗಿದೆ. ಇಸ್ಲಾಂ ಧರ್ಮದ ಅನುಸರಣೆ ಮಾಡದೆಯೂ, ಮುಹಮ್ಮದರನ್ನು ಅರಿಯುವುದರಿಂದ ನಮ್ಮ ಬದುಕಿನ ಸತ್ವ ಹಾಗೂ ಮೌಲ್ಯ ಹೆಚ್ಚುತ್ತದೆ” ಎಂದು ಪುನರುಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗುತ್ತಿಗೆ ಪೌರಕಾರ್ಮಿಕರ ಕಾಯಮಾತಿಗೆ ಆಗ್ರಹ; ಡಿ.1ರಂದು ರಾಜ್ಯಾದ್ಯಂತ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಜಮಾಅತೆ ಇಸ್ಲಾಮ್ ಮುಖಂಡ ಮೊಹಮ್ಮದ್ ಕುಂಞಿ, ಮರ್ಚೆಂಟ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಾಲ್, ಅಸದುಲಾ ಸೇರಿದಂತೆ ಪ್ರಮುಖರು ಇದ್ದರು.