ತಾನು ಸಾಕಿದ್ದ ನಾಯಿ ಸಾನ್ನಪ್ಪಿದ ಬೇಸರದಲ್ಲಿದ್ದ ಯುವಕ, ತನ್ನ ನಾಯಿಗೆ ಹಾಕುತ್ತಿದ್ದ ಚೈನ್ನಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಬಳಿಕ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಹೆಗ್ಗಡದೇವನಪುರದ ನಿವಾಸಿ ರಾಜಶೇಖರ್ ಮೃತ ದುರ್ದೈವಿ. ಅವರು ಜರ್ಮನ್ ಶಫರ್ಡ್ ತಳಿಯ ನಾಯಿಯನ್ನು 9 ವರ್ಷಗಳಿಂದ ಸಾಕಿದ್ದರು. ಅದಕ್ಕೆ ‘ಬೌನ್ಸಿ’ ಎಂದೂ ಹೆಸರನ್ನೂ ಇಟ್ಟಿದ್ದರು. ಆ ನಾಯಿ ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿತ್ತು.
ತಮ್ಮ ಜಮೀನಿನಲ್ಲಿ ನಾಯಿಯ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದಿದ್ದ ರಾಜಶೇಖರ್ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಶೇಖರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
