ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ರಾಜ್ಯ ನುಡಿಯಾಗಿರುವಾಗ, ಒಕ್ಕೂಟ ಸರ್ಕಾರದಿಂದ ಹಿಂದಿ ಹೇರಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಮಂಡ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಹಾಗೂ ಶಿವರಾಮೇಗೌಡ ಬಣ ಮತ್ತು ಕರುನಾಡ ಸೇವಕರು ಸಂಘಟನೆ ಸೇರಿಕೊಂಡು ‘ಹಿಂದಿ ತಿಥಿ ದಿನ’ ಆಚರಿಸಿ, ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದರು.
ಎಂ.ಬಿ.ನಾಗಣ್ಣಗೌಡ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಮಂಡ್ಯ ನಗರದ ಅಂಚೆ ಕಚೇರಿ ಎದುರು ಹಿಂದಿ ನುಡಿ ಹೇರಿಕೆಯನ್ನು ಖಂಡಿಸಿ “ಹಿಂದಿ ತಿಥಿ ದಿವಸವಾಗಿದೆ. ಮತ್ತೆ ಹುಟ್ಟಿ ಬರಲೇ ಬೇಡ” ಎಂಬ ಬ್ಯಾನರ್ಗಳನ್ನು ಪ್ರದರ್ಶಿಸಿದರು. ಕನ್ನಡಿಗರ ಮೇಲೆ ಒಕ್ಕೂಟ ಸರ್ಕಾರ ಹಿಂದಿ ನುಡಿಯನ್ನು ಬಲವಂತವಾಗಿ ಹೇರಿದೆಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್, ಅಂಚೆ ಮತ್ತು ವಿಮಾ ಸಂಸ್ಥೆಗಳು ಕನ್ನಡ ನುಡಿಗೆ ಆದ್ಯತೆ ನೀಡದೆ, ಹಿಂದಿ ನುಡಿಯಲ್ಲಿ ವ್ಯವಹರಿಸುವ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದಲ್ಲಿಯೇ ಎಲ್ಲಾ ಅರ್ಜಿ, ಪತ್ರ ವ್ಯವಹಾರಗಳು, ಎಟಿಎಂ ಯಂತ್ರದ ಮೆನುಗಳು ಮತ್ತು ಸಾರ್ವಜನಿಕ ಪ್ರಕಟಣೆಗಳು ನಡೆಯಬೇಕು. ಕನ್ನಡ ಭಾಷೆಯ ಅಸ್ತಿತ್ವಕ್ಕೆ ಮಾರಕವಾಗುವ ಹಿಂದಿ ದಿವಸ ಆಚರಣೆ ಮತ್ತು ಹಿಂದಿ ಕಲಿಕೆಗೆ ಪ್ರೋತ್ಸಾಹ ನೀಡುವ ಚಟುವಟಿಕೆಯನ್ನು ನಾಡಿನಲ್ಲಿ ನಡೆಸಬಾರದು. ನಾಡಿನಲ್ಲಿ ಸೃಷ್ಟಿಯಾಗುವ ಉದ್ಯೋಗ ಭರ್ತಿಗೆ ಪ್ರತ್ಯೇಕ ನಿಯಮ ರೂಪಿಸಿ ಲಿಖಿತ ಪರೀಕ್ಷೆಗಳಲ್ಲಿ ಕನ್ನಡ ನುಡಿ ಕಡ್ಡಾಯಗೊಳಿಸಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, “ಕನ್ನಡಿಗರು ಕಟ್ಟಿ ಬೆಳೆಸಿರುವ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ಗಳ ವಿಲೀನವನ್ನು ರದ್ದುಪಡಿಸಿ ಕನ್ನಡಿಗರಿಗೆ ಹಿಂದಿರುಗಿಸಬೇಕು” ಎಂದು ಆಗ್ರಹಿಸಿದರು.
ಹಿಂದಿ ನುಡಿಯನ್ನು ಹೇರಿಕೆ ಮಾಡುವುದಿಲ್ಲ ಎಂದು ಬಹಿರಂಗ ಪ್ರಕಟಣೆ ಮಾಡಲು ಮುಖ್ಯಮಂತ್ರಿಗಳು ಆದೇಶಿಸಬೇಕು. ಕನ್ನಡಿಗರ ಬೇಡಿಕೆಗಳ ಬಗ್ಗೆ ಚರ್ಚಿಸಲು ಬ್ಯಾಂಕ್, ಅಂಚೆ, ವಿಮಾ ಕಚೇರಿಗಳ ಮುಖ್ಯಸ್ಥರು, ಕನ್ನಡಪರ ಸಂಘಟನೆಗಳು, ಜನಪರ ಹೋರಾಟಗಾರರ ಸಭೆ ಕರೆದು ತೊಡಕು ಬಗೆ ಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಹೆಚ್ ಡಿ ಜಯರಾಮ್, ಮಣಿಗೆರೆ ರಾಮಚಂದ್ರಗೌಡ, ಅಬಿಗವುಡ ಹನಕೆರೆ, ಜೋಸೆಫ್, ಶಿವರಾಮು, ಮುದ್ದೇಗೌಡ, ಸುಕುಮಾರ್, ಕೃಷ್ಣೇಗೌಡ ಕರವೇ (ನಾರಾಯಣಗೌಡ ಬಣ) ರಾಜ್ಯ ಸಮಿತಿ ಸದಸ್ಯ ಮಾ.ಸೋ.ಚಿದಂಬರ್, ಜಿಲ್ಲಾಧ್ಯಕ್ಷ ಕೆ ಟಿ ಶಂಕರೇಗೌಡ, ಅಶೋಕ್, ಎಂ.ಪಿ.ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
