ರಾಯಚೂರು ನಗರದ ಮಾವಿನಕೆರೆಯಲ್ಲಿ ದಿಢೀರ್ ಮೊಸಳೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂದೀಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕೆರೆಯ ದಡದಲ್ಲಿ ಬುಧವಾರ ಬೆಳಿಗ್ಗೆ ಬೃಹದಾಕಾರದ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಸುತ್ತಮುತ್ತಲಿನ ಜನರು ಭಯ ಭೀತರಾಗಿದ್ದರು. ಕೆರೆಯಲ್ಲಿ ಟಾರ್ಪಲ್ ಬಿಸಾಡಿದ್ದು ಅದರ ಮೇಲೆ ಮೊಸಳೆ ಮಲಗಿದ ದೃಶ್ಯ ಮೊಬೈಲ್ ಕ್ಯಾಮರಾಗೆ ಸೆರೆಯಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಳಿಕ ಸ್ಥಳೀಯ ನಿವಾಸಿಗಳು ಮೊಸಳೆ ಇರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸಾರ್ವಜನಿಕರ ಕರೆಗೆ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾವಿನಕೆರೆಗೆ ದೌಡಾಯಿಸಿ, ಕೆಲವೇ ನಿಮಿಷಗಳಲ್ಲಿ ಮೊಸಳೆ ಹಿಡಿಯಲು ಯಶಸ್ವಿಯಾದರು.
ನಗರದ ಹೃದಯ ಭಾಗದಲ್ಲಿರುವ ಮಾವಿನ ಕೆರೆಯಲ್ಲಿ ಮೊಸಳೆ ಹೇಗೆ ಪತ್ತೆಯಾಗಿದೆ ಎಂದು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಕೊನೆಗೆ ನಿಟ್ಟುಸಿರು ಬಿಟ್ಟರು.
