ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದು, ಹಲವು ಬಾರಿ ಹೋರಾಟ ನಡೆಸಿದರೂ ಪಂಚಾಯತಿ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರಾಯಚೂರಿನ ದೇವದುರ್ಗ ತಾಲೂಕು ಚಿಂಚೋಡಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಗ್ರಾಮದಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು ಹಲವು ಬಾರಿ ಪಂಚಾಯತಿ ಗಮನಕ್ಕೆ ತಂದಿದ್ದರೂ ಇಂದು ನಾಳೆಯೆಂದು ಆಶ್ವಾಸನೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದರಿಂದ ಬೇಸತ್ತು ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಕೆಲ ಕಾಲ ಪರಿಸ್ಥಿತಿ ಬಿಗಡಾಯಿಸಿತ್ತು.
ಗ್ರಾಮದ ಪಕ್ಕದಲ್ಲಿ ಕೃಷ್ಣಾ ನದಿ ಹರಿದರೂ ಚಿಂಚೋಡಿ, ಬುಂಕಲದೊಡ್ಡಿ, ಲಿಂಗದಹಳ್ಳಿ, ಯರಗುಡ್ಡ ಗ್ರಾಮದ ಜನರಿಗೆ ನೀರು ಸಿಗುತ್ತಿಲ್ಲ. ಅಲ್ಲಿ ಇಲ್ಲಿ ಬೋರ್ವೆಲ್ ನೀರು ತಂದು ಕುಡಿಯುವುದಾಗಿದೆ. ಶುದ್ಧ ಕುಡಿಯುವ ನೀರಿಲ್ಲದೆ ಹಲವಾರು ಜನ ರೋಗಗಳಿಗೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಮಧ್ಯಾಹ್ನ ವೇಳೆ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ತಾಲೂಕು ಪಂಚಾಯತಿ ಅಧಿಕಾರಿಗಳು ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ?:ರಾಯಚೂರು | ರಕ್ತದಾನಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ: ಲಾಲ್ ಪೀರ್
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಶಬ್ಬೀರ್ ಜಾಲಹಳ್ಳಿ, ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಬುಂಕಲದೊಡ್ಡಿ ಗ್ರಾಮ ಘಟಕ ಅಧ್ಯಕ್ಷ ಹನುಮಂತ ಬುಂಕಲದೊಡ್ಡಿ, ಬಸವರಾಜ ಲಿಂಗದಹಳ್ಳಿ, ಚಂದ್ರು ಲಿಂಗದಹಳ್ಳಿ, ಗ್ರಾಮಸ್ಥರು ಇತರರು ಇದ್ದರು.
