ಪ್ರಧಾನಿ ನರೇಂದ್ರ ಮೋದಿ ಮಹಾ ಸುಳ್ಳಗಾರ. ಕಳೆದ ಹತ್ತು ವರ್ಷಗಳಲ್ಲಿ ಸುಳ್ಳು ಹೇಳಿದ್ದಾರೆ ಹೊರತು ದೇಶದ ಅಭಿವೃದ್ದಿಯನ್ನೇ ಕಡೆಗಣಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಟೀಕಿಸಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಪ್ರಕಟಿಸಿದ ಪ್ರಣಾಳಿಕೆ ಬದ್ದತೆಯಿಲ್ಲ. ಕಾಂಗ್ರೆಸ್ ಸರ್ಕಾರ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಐದು ನ್ಯಾಯಪತ್ರ, 20 ಗ್ಯಾರಂಟಿಗಳನ್ನು ದೇಶದ ಜನರಿಗೆ ನೀಡಿದೆ. ಮಹಿಳೆಯರು, ಯುವಕರು, ರೈತರು, ಕಾರ್ಮಿಕರು, ಅಸ್ತಿ ಸಮಾನ ಹಂಚಿಕೆ ನ್ಯಾಯಪತ್ರ ಕಾಂಗ್ರೆಸ್ ನೀಡಿದೆ” ಎಂದರು.
30 ಲಕ್ಷ ಖಾಲಿ ಹುದ್ದೆಗಳ ಭರ್ತಿ, ನಿರುದ್ಯೋಗ ಭತ್ಯೆ, ಕಾರ್ಮಿಕರಿಗೆ ಕನಿಷ್ಟವೇತನ, ರೈತರಿ ಬೆಂಬಲಬೆಲೆ ಹಾಗೂ ಮೀಸಲಾತಿಯನ್ನು ಶೇ.50 ಮೀಸಲು ತೆಗೆದುವಿಸ್ತರಿಸಲು ಉದ್ದೇಶಿಸಲಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಬರಿ ಸುಳ್ಳು ಹೇಳುತ್ತಿದೆ. ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಸಿಲೆಂಡರ್ ಬೆಲೆ 400 ರೂ. ಆಗಿದ್ದಾಗ ನರೇಂದ್ರ ಮೋದಿಯವರು ಕಣ್ಣಲ್ಲಿ ನೀರು ಬರುತ್ತಿದೆ ಎಂದು ಹೇಳಿದ್ದರು. ಆದರೀಗ ರಕ್ತ ಬರುತ್ತಿದೆ. ಅವರ ಮನ ಮಿಡಿಯುತ್ತಿಲ್ಲ ಎಂದರು.
ಮುಸ್ಲಿಂ ಸಮೂದಾಯಕ್ಕೆ ಮೀಸಲು ಮೊದಲಿನಿಂದಲೂ ಹಿಂದುಳಿದ ವರ್ಗದಲ್ಲಿಯೇ ಇದೆ. ಗುಜರಾತನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗಲೂ ಗುಜರಾತನಲ್ಲಿ ಮುಸ್ಲಿಂರು ಹಿಂದುಳಿದ ವರ್ಗದಲ್ಲಿಯೇ ಇದ್ದಾರೆ. ಆದರೀಗ ಮುಸ್ಲಿಂ ಸಮೂದಾಯ ಮೀಸಲಾತಿ ರದ್ದುಗೊಳಿಸುವದಾಗಿ ಹೇಳುತ್ತಿದೆ ಎಂದರು.
ರಾಷ್ಟ್ರೀಯ ಹಿಂದುಳಿದ ಆಯೋಗದ ಅಧ್ಯಕ್ಷರ ಹೇಳಿಕೆ ಅಪ್ಪಟ್ಟ ಸುಳ್ಳು ಅಸಂವಿಧಾನಿಕವಾಗಿ ಮಾತನಾಡಿರುವ ಅವರ ವಿರುದ್ದ ಹಕ್ಕುಚ್ಯುತಿ ಮಂಡಿಸಲು ಯೋಚಿಸಲಾಗುತ್ತಿದೆ ಎಂದರು.
ಮಹಿಳೆಯರಿಗೆ ವರ್ಷಕ್ಕೆ ಹಣ ನೀಡುವ ಕುರಿತು ಸುಳ್ಳು ಹೇಳಿಲ್ಲ. 1947ರಲ್ಲಿ ಕೇಂದ್ರದಬಜೆಟ್ 247 ಲಕ್ಷಕೋಟಿ ಮಾತ್ರ ಇತ್ತು. ಆದ್ದರಿಂದು 46 ಲಕ್ಷ 64 ಸಾವಿರ ಲಕ್ಷ ಕೋಟಿಆಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ರೈಟ್ ಆಫ್ ಮಾಡಿದ ಹಣದಲ್ಲಿಯೇ ಮಹಿಳೆರಿಗೆ ವಾರ್ಷಿಕ ಹಣ ನೀಡಬಹುದು ಎಂದರು.
ಹಿಂದುಳಿದ ವರ್ಗ ಮೀಸಲಾತಿ ಕಸಿದುಕೊಂಡಿದ್ದೇ ಬಿಜೆಪಿಯವರು. ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಗೆ ವಾರಂಟಿಯಿಲ್ಲ. ಚೀನಿ ಗ್ಯಾರಂಟಿ ಅದು. ದೇಶದಲ್ಲಿ ಆಹಾರ ಭದ್ರತೆ, ಮಾಹಿತಿ ಹಕ್ಕು, ಉಚಿತ ಮತ್ತು ಕಡ್ಡಾಯ ಕಾಯ್ದೆ, ಉದ್ಯೋಗ ಖಾತ್ರಿ ಸೇರಿದಂತೆ ಎಲ್ಲವನ್ನು ಕಾಯ್ದೆಗಳ ಮೂಲಕ ಖಾತ್ರಿ ನೀಡಲಾಗಿದೆ. ಆದರೆ, ನರೇಂದ್ರ ಮೋದಿಯವರು ನೀಡಿರುವ ಭರವಸೆಗಳಿಗೆ ಯಾವುದೇ ಖಾತ್ರಿಯಿಲ್ಲ ಎಂದರು.
ಮುಸ್ಲಿಂ ಸಮೂದಾಯವರಿಗೆ ಆಸ್ತಿ ನೀಡುವುದಾಗಿ ಸುಳ್ಳು ಹೇಳಲಾಗುತ್ತದೆ. ಸಂವಿಧಾನದಡಿ ಸಮಾನ ಆಸ್ತಿ ಹಂಚಿಕೆಗೆ ಅವಕಾಶ ನೀಡಿದೆ. ಬೇರೆಯವರ ಆಸ್ತಿ ಕಸಿದುಕೊಂಡು ಹಂಚಿಕೆ ಮಾಡುವುದಿಲ್ಲ. ಬದಲಾಗಿ ಸಮಾನ ಆಸ್ತಿ ಹಂಚಿಕೆ ಮಾಡಲಾಗುತ್ತದೆ ಎಂದರು. ಕಾಂಗ್ರೆಸ್ ಖಾಸಗೀಕರಣ, ಉದಾರೀಕರಣ ನೀತಿ ಜಾರಿಗೊಳಿಸಿರಬಹುದು. ಆದರೆ, ದೇಶ ಸಂಪತ್ತು ಮಾರಾಟ ಮಾಡಿಲ್ಲ. ಮೋದಿ ಸರ್ಕಾರ ರೈಲ್ವೆ, ವಿಮಾನ ನಿಲ್ದಾಣ ಸೇರಿ ಎಲ್ಲವೂ ಮಾರಾಟ ಮಾಡಿದೆ ಎಂದರು.
ಸ್ಯಾಮ ಪಿತ್ರೋಟಾ ಹೇಳಿಕೆ ವೈಯಕ್ತಿಕವಾಗಿದೆ. ಅವರ ಹೇಳಿಕೆಯನ್ನು ತಿರುಚುವ ಕೆಲಸವಾಗಿದೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಎಂದರು. ದೇಶದಲ್ಲಿ ಕಳೆದ ಬಾರಿಗಿಂದ ನೂರಕ್ಕೂ ಹೆಚ್ಚು ಸ್ಥಾನ ಬಿಜೆಪಿ ಕಳೆದುಕೊಳ್ಳಲಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕುಮಾರನಾಯಕವರನ್ನು ಜನತೆ ಆಶೀರ್ವದಿಸಬೇಕೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಪಾರಸಮಲ್ ಸುಖಾಣ, ಕೆ. ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ಮಹ್ಮದ ಶಾಲಂ, ಅಮರೇಗೌಡ ಹಂಚಿನಾಳ, ತಾಯಣ್ಣನಾಯಕ, ಜಿ.ಶಿವಮೂರ್ತಿ, ಆರ್ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಸೇರಿದಂತೆ ಅನೇಕರಿದ್ದರು.