ಸರ್ಕಾರ, ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡುವಂತೆ ಹೋಬಳಿ ಕೇಂದ್ರಸ್ಥಾನದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಪದವಿ ಹಾಸ್ಟೆಲ್ ಮಂಜೂರು ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಒತ್ತಾಯಿಸಲಾಯಿತು.
“ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಲ್ಲದೆ ಅತಿ ಹಿಂದುಳಿದಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ಕೇಂದ್ರಸ್ಥಾನದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಪದವಿ ಹಾಸ್ಟೆಲ್ ಮಂಜೂರು ಮಾಡಬೇಕು ಮತ್ತು ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು” ಎಂದು ಸಂಘಟನಾಕಾರರು ಒತ್ತಾಯಿಸಿದರು.
“ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ 40 ಹಳ್ಳಿಗಳನ್ನು ಒಳಗೊಂಡು ಬಹುದೊಡ್ಡ ಹೋಬಳಿ ಕೇಂದ್ರಸ್ಥಾನ 97,000 ಹೆಕ್ಟೇರ್ ವಿಶಾಲವಾದ ಭೂಪ್ರದೇಶ ಹೊಂದಿದ್ದು, ಸರ್ಕಾರಕ್ಕೆ ಅತಿಹೆಚ್ಚಿನ ಕಂದಾಯಕರ ಸಂದಾಯ ಮಾಡಿದರೂ ಮೂಲಭೂತ ಸೌಕರ್ಯಕ್ಕಾಗಿ ಜನಸಮಾನ್ಯರು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕಿಗಾಗಿ ನಿತ್ಯವೂ ಹರಸಹಾಸ ಪಡುತ್ತಿದ್ದಾರೆ. ಇನ್ನೂ ವಿದ್ಯಾರ್ಥಿಗಳ ಪಾಡು ತಮ್ಮ ಉನ್ನತ ವ್ಯಾಸಾಂಗಕ್ಕಾಗಿ ಗ್ರಾಮಗಳಿಂದ ಗಬ್ಬೂರು ಕೇಂದ್ರಸ್ಥಾನಕ್ಕೆ ಬರಲು 30ಕಿಮೀ ಪ್ರಯಾಣ ಮತ್ತೆ ಇಲ್ಲಿಂದ ರಾಯಚೂರು ಅಥವಾ ದೇವದುರ್ಗಕ್ಕೆ ಹೋಗಬೇಕಾದರೆ ಮತ್ತೆ 30ಕಿಮೀ ಒಟ್ಟು 60ಕಿಮೀ ದೂರ ಬಸ್ ಪ್ರಯಾಣ ಮಾಡಿ ತಮ್ಮ ಉಜ್ವಲ ಬದುಕು ಕಟ್ಟಿಕೊಳ್ಳಲು ದಿನಂಪ್ರತಿ ಹೆಣಗಾಡುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನಿಲ್ಲದ ಬಸ್ಗಳು; ರಸ್ತೆಯಲ್ಲೇ ಧರಣಿ ಕುಳಿತು ಪ್ರತಿಭಟಿಸಿದ ವಿದ್ಯಾರ್ಥಿಗಳು
“ಗಬ್ಬೂರು ಹೋಬಳಿ ಹಾಗೂ ಹಳ್ಳಿಗಳಲ್ಲಿ 19ಕ್ಕೂ ಹೆಚ್ಚು ಪ್ರೌಢಶಾಲೆಗಳು, 1 ಸರ್ಕಾರಿ ಹಾಗೂ 4ರಿಂದ 5 ಖಾಸಗಿ ಪಿಯು ಕಾಲೇಜುಗಳಿವೆ. ಪದವಿ ಮತ್ತು ಉನ್ನತ ವ್ಯಾಸಾಂಗಕ್ಕಾಗಿ ನಿತ್ಯ ರಾಯಚೂರಿಗೆ ಹೋಗಬೇಕು. ಪ್ರಯಾಣ ಮಾಡಲು ಸಾಧ್ಯವಾಗದ ವಿದ್ಯಾರ್ಥಿನಿಯರ ಪಾಡು ಹೇಳತೀರದು. ಗಬ್ಬೂರಲ್ಲಿ ಸರ್ಕಾರಿ ಪದವಿ ಕಾಲೇಜು ಇಲ್ಲದ ಕಾರಣ ಎಷ್ಟೋ ಮಂದಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಾಲ್ಯವಿವಾಹಕ್ಕೆ ಬಲಿಯಾಗುತ್ತಿದ್ದಾರೆ” ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆರೋಪಿಸಿದರು.
ವರದಿ : ಸಿಟಿಜ಼ನ್ ಜರ್ನಲಿಸ್ಟ್- ಶಿವರಾಮ್ ಕಟ್ಟಿಮನಿ