ಮರಳು ದಂಧೆಯಲ್ಲಿ ತೊಡಗಿದ್ದ ಜೆಸಿಬಿ ಚಾಲಕನ ನಿರ್ಲಕ್ಷ್ಯದಿಂದ ಮೂವರು ಅಮಾಯಕರು ಬಲಿಯಾಗಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡಿಗರ ರಕ್ಷಣಾ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶುಕ್ರವಾರ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದಲ್ಲಿ ರಾತ್ರಿ ವೇಳೆ ಕೊಳವೆಭಾವಿ ಕೊರೆದು ಛತ್ತಿಸಗಡ ರಾಜ್ಯದ ಮೂವರು ಕಾರ್ಮಿಕರು ಮಲಗಿರುವಾಗ ಅಕ್ರಮ ಮರಳು ದಂಧೆ ಮಾಡುವವವರು ಜೆಸಿಬಿ ಹರಿಸಿದ ಕಾರಣ ಮೃತಪಟ್ಟಿದ್ದರು. ಅಕ್ರಮ ಮರಳುದಂಧೆಗೆ ಅಮಾಯಕರು ಬಲಿಯಾಗಿದ್ದು ಖಂಡನೀಯ. ಅಕ್ರಮ ಮರಳುದಂಧೆಗೆ ಹಿರಿಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಶಾಲಾ ಬಾಲಕಿ ಸಾವು ಪ್ರಕರಣ; ಆರೋಪಿಗೆ ಷರತ್ತುಬದ್ಧ ಜಾಮೀನು
“ಕಳೆದ ಡಬಲ್ ಎಂಜಿನ್ ಸರ್ಕಾರ ಜಿಲ್ಲೆಯ ಅಕ್ರಮ ಮರಳುಗಾರಿಕೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಧಿಕಾರಿಗಳಿಗೆ ವರವಾಗಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ಮರಳುಗಾರಿಕೆಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಇಮ್ರಾನ್ ಬಡೇಸಾಬ್, ನಜೀರ್ ಅಹ್ಮದ್, ಸೈಯದ್ ರಶೀದ್, ಇಮಾಮ್ ಹುಸೇನ್, ಮನ್ಸೂರ್ ಇದ್ದರು.