ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹಿರೇಕೂಡ್ಲಿಗಿ ಮಾದಿಗ ಸಮೂದಾಯದವರ ಮೇಲೆ ಎಸ್ಟಿ ಜನಾಂಗದವರು ವಿನಾಕಾರಣ ಹಲ್ಲೆ ಮಾಡಿರುವುದನ್ನು ಖಂಡಿಸಿ, ಪ್ರತಿ ದೂರು ರದ್ದಿಗೆ ಆಗ್ರಹಿಸಿ ಸೆಪ್ಟೆಂಬರ್ 18ರಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಚಲೋ ಹಿರೇಕೂಡ್ಲಿಗಿ ಪ್ರತಿಭಟನಾ ಸಮಾವೇಶ ನಡೆಸಲಾಗುತ್ತದೆ ಎಂದು ಹೋರಾಟಗಾರ ಎಂ ಆರ್ ಭೇರಿ ಹೇಳಿದರು.
ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, “ಚಲನಚಿತ್ರ ನಟ ಕಿಚ್ಚ ಸುದೀಪ್ ಹುಟ್ಟಹಬ್ಬದ ಅಂಗವಾಗಿ ಎಸ್ಟಿ ಯುವಕರು ಪಟಾಕಿ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ, ʼಪಟಾಕಿ ಸಿಡಿಸುವುದರಿಂದ ಜಾನುವಾರುಗಳು ಹೆದರುತ್ತವೆ. ಮಕ್ಕಳು, ವೃದ್ದರಿಗೂ ಅಪಾಯವೆಂದು ಮಾದಿಗ ಸಮುದಾಯದ ಜನರು ಹೇಳಿದ್ದಕ್ಕೆ ಕುಪಿತಗೊಂಡ ಎಸ್ಟಿ ಯುವಕರು ಹಲ್ಲೆ ನಡೆಸಿ ಮಾರನೇ ದಿನ ಗುಂಪು ಕಟ್ಟಿಕೊಂಡು ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮೂರು ದಿನದ ನಂತರ ಎಸ್ಟಿ ಯುವಕರಿಂದ ಪ್ರತಿದೂರು ಸ್ವೀಕರಿಸಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ” ಎಂದು ಆರೋಪಿಸಿದರು.
“ರಾಜಕೀಯ ಒತ್ತಡದಿಂದ ಹಲ್ಲೆಗೊಳಗಾದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಮಾನಸಿಕ ಹಿಂಸೆ ನೀಡುವ ಮತ್ತೊಂದು ದೌರ್ಜನ್ಯ ನಡೆಸಿದ್ದಾರೆ. ಹಲ್ಲೆಗೆ ಒಳಗಾದವರ ವಿರುದ್ಧವೇ ಪೊಲೀಸರು ಪುನಃ ಪ್ರಕರಣ ದಾಖಲಿಸಿದ್ದಾರೆ” ಎಂದರು.
“ದೂರು ಪ್ರತಿದೂರು ದಾಖಲಿಸಿ ಹಲ್ಲೆ ಮಾಡಿದವರ ರಕ್ಷಣೆಗೆ ಪೊಲೀಸರು ನಿಂತಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 18 ರಂದು ಗಬ್ಬೂರಿನಿಂದ ಅನೇಕ ದಲಿತ, ಪ್ರಗತಿಪರ, ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಕಾಲ್ನಡಿಗೆ ಮೂಲಕ ಹಿರೇಕೂಡ್ಲಿಗಿಗೆ ತೆರಳಿ ಹಲ್ಲೆಗೊಳಗಾದ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಪೊಲೀಸರು ಶೋಷಿತರ ಮೇಲೆ ಹಲ್ಲೆ, ದೌರ್ಜನ್ಯವಾದಾಗಲೆಲ್ಲ ಕೌಂಟರ್ ಕೇಸ್ ದಾಖಲಿಸುವ ಮೂಲಕ ರಕ್ಷಣೆ ಇಲ್ಲದಂತೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಪೊಲೀಸರಿಗೆ ದೂರು ನೀಡುವುದನ್ನೇ ನಿಲ್ಲಿಸುವಂತಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ʼಭಾರತ್ ಜೋಡೋʼ ಪಾದಯಾತ್ರೆಯ ನಂತರ ಕಾಂಗ್ರೆಸ್ಗೆ ಹೊಸ ಶಕ್ತಿ ಬಂದಿದೆ : ವಿ.ಎಸ್ ಉಗ್ರಪ್ಪ
ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಮಾತನಾಡಿ, “ಹಿರೇಕೂಡ್ಲಿಗಿ, ಮಲ್ಲೇದೇವರ ಗುಡ್ಡ, ಹಂಚಿನಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಾದಿಗ ಸಮೂದಾಯದ ಮೇಲೆ ಹಲ್ಲೆ ನಡೆಸಲಾಗಿದ್ದು, ಎಲ್ಲ ಪ್ರಕರಣಗಳಲ್ಲಿಯೂ ಗಬ್ಬೂರ ಪೊಲೀಸರು ಕೌಂಟರ್ ಕೇಸ್ ದಾಖಲಿಸಿ ಬೆದರಿಸುತ್ತಿದ್ದಾರೆ. ಅನ್ಯಾಯಕ್ಕೆ ಒಳಗಾದವರನ್ನು ರಕ್ಷಿಸಬೇಕಾದ ಪೊಲೀಸರೇ ಕೌಂಟರ್ ಕೇಸ್ ದಾಖಲಿಸಿ ಯಾರನ್ನೂ ಬಂಧಿಸದೇ ರಕ್ಷಣೆ ಮಾಡುತ್ತಿದ್ದಾರೆ. ಕೌಂಟರ್ ಕೇಸ್ ದಾಖಲಿಸುವುದನ್ನು ನಿಲ್ಲಿಸದೇ ಇದ್ದರೆ ಹೋರಾಟ ತೀವ್ರರೂಪ ಪಡೆಯಲಿದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಕೊಪ್ಪರ, ರಾಜು ಬೊಮ್ಮನಾಳ, ರಾಘವೇಂದ್ರ ಬೋರೆಡ್ಡಿ, ಶಾಂತಕುಮಾರ ಹೊನ್ನಟಗಿ, ಎ ರಾಮು ಸೇರಿದಂತೆ ಹಲವರು ಇದ್ದರು.