ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮನಸ್ಸಿನಿಂದ ಮರೆಮಾಚಲು ನಿರಂತರವಾಗಿ ಬಿಜೆಪಿ ನಾಯಕರು ದ್ವೇಷ ಭಾಷಣಗಳನ್ನು ಮಾಡುತ್ತಿದ್ದು, ದ್ವೇಷದ ಹೇಳಿಕೆ ನೀಡಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವ ಅನಂತಕುಮಾರ್ ಹೆಗಡೆ ಮತ್ತು ಕೆ ಎಸ್ ಈಶ್ವರಪ್ಪನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ ರಝಾಕ್ ಉಸ್ತಾದ್ ಒತ್ತಾಯಿಸಿದ್ದಾರೆ.
ರಾಯಚೂರು ನಗರದಲ್ಲಿ ಡಾ ರಝಾಕ್ ಉಸ್ತಾದ್ ಪತ್ರಿಕೆ ಹೇಳಿಕೆ ನೀಡಿದ್ದು, “ಸಂಸದ ಅನಂತಕುಮಾರ್ ಹೆಗಡೆ ನಿನ್ನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡುತ್ತ, ಬಾಬರಿ ಮಸೀದಿ ಧ್ವಂಸಗೊಳಿಸಿದ ಹಾಗೆಯೇ ರಾಜ್ಯದಲ್ಲಿರುವ ಕೆಲವು ಮಸೀದಿಗಳನ್ನು ಧ್ವಂಸ ಮಾಡುತ್ತೇವೆಂದು ಬಹಿರಂಗ ಹೇಳಿಕೆ ನೀಡಿದ್ದಲ್ಲದೆ, ಹಿಂದು ಸಮಾಜ ಸಾವಿರ ವರ್ಷಗಳ ದ್ವೇಷ ತೀರಿಸಿಕೊಂಡೇ ತೀರುತ್ತದೆ. ಇದು ಹಿಂದೂ ರಕ್ತ ಎಂಬಂತೆ ಅಸಂಬದ್ಧವಾಗಿ ಹೇಳುತ್ತಿರುವ ಅನಂತ್ ಕುಮಾರ್ ಹೆಗಡೆ ಮನುಷ್ಯ ವಿರೋಧಿ” ಎಂದು ಆರೋಪಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಏಕವಚನದಲ್ಲೇ ಮಾತನಾಡುತ್ತ, “ಮಗನೇ” ಎಂಬ ಅವಾಚ್ಯ ಶಬ್ಧ ಬಳಸಿರುವುದು ಅತ್ಯಂತ ಹ್ಯೇಯಕೃತ್ಯ, ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ವಿರುದ್ಧ ಅವಾಚ್ಯವಾಗಿ ಮಾತನಾಡಿ, ಉದ್ರೇಕಕಾರಿ ಭಾಷಣಕ್ಕಾಗಿ, ಜನರ ನಡುವೆ ಜನಾಂಗೀಯ ದ್ವೇಷ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಆಂತರಿಕ ಕಲಹ ಉಂಟು ಮಾಡುವ ಉದ್ದೇಶದ ಹಿನ್ನಲೆಯಲ್ಲಿ ಅನಂತ್ ಕುಮಾರ್ ಹೆಗೆಡೆ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು” ಎಂದು ಆಗ್ರಹಿಸಿದರು.
ಅಸಂಬದ್ಧ ಹೇಳಿಕೆಗಳಿಗೆ ಚಪ್ಪಾಳೆ ಹೊಡೆಯುವ ಜನರೂ ಅಲ್ಲಿದ್ದರು ಎನ್ನುವದು ಇನ್ನೂ ಆಶ್ಚರ್ಯಕರವಾದದ್ದು. ಕಳೆದ ನಾಲ್ಕು ವರ್ಷಗಳಿಂದ ಜನರ ಯಾವ ಸಮಸ್ಯೆಗೂ ಸ್ಪಂದಿಸದೇ, ಅಜ್ಞಾತವಾಸದಲ್ಲಿ ಇದ್ದಂತಹ ವ್ಯಕ್ತಿ ಏಕಾಏಕಿ ಪ್ರತ್ಯಕ್ಷನಾಗಿ ಸಿದ್ದರಾಯ್ಯನವರ ವಿರುದ್ಧ, ಮುಸ್ಲಿಮರ ವಿರುದ್ದ ಘಂಟಾಘೋಷವಾಗಿ ಮಾತನಾಡುತ್ತಿದ್ದಾನೆಂದರೆ, ಚುನಾವಣೆ ದೃಷ್ಟಿಯಿಂದ ಜನರನ್ನು ಮೂರ್ಖರನ್ನಾಗಿ ಮಾಡುವ ಹುನ್ನಾರವಿದು. ಈತ ಈ ಹಿಂದೆಯೂ ಕೂಡ “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು” ಎಂದು ಸೊಕ್ಕಿನಿಂದ ಮಾತನಾಡಿದ್ದು, ಇಂತಹ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿ ಇರಲು ಅಯೋಗ್ಯರು. ಬಿಜೆಪಿ ಪಕ್ಷ ಇಂತಹವರಿಗೆ ಟಿಕೆಟ್ ನೀಡುತ್ತ ಬಂದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮನೆ ಬದಲಿಸಿದಾಗ ‘ಗೃಹಜ್ಯೋತಿ’ ವಿವರ ನವೀಕರಿಸಲು ಸಾಧ್ಯವಾಗುತ್ತಿಲ್ಲ; ಬಾಡಿಗೆದಾರರ ಅಳಲು
“ಇತ್ತೀಚಿಗೆ ಕೆ ಎಸ್ ಈಶ್ವರಪ್ಪನವರು “ಮಥುರಾ ಹಾಗೂ ಇನ್ನಿತರ ಮಸೀದಿಗಳನ್ನು ಮುಸ್ಲಿಮರು ಸ್ವಯಂ ಪ್ರೇರಣೆಯಿಂದ ತೆರುವುಗೊಳಿಸದೇ ಇದ್ದರೆ ಎಷ್ಟು ಮಂದಿಯನ್ನು ಕೊಲ್ಲುತ್ತಾರೆ ಮತ್ತು ಏನಾಗಬಹುದು ಎಂಬುದು ಸೇರಿದಂತೆ ಪರಿಣಾಮಗಳು ನಮಗೆ ತಿಳಿದಿಲ್ಲ”ವೆಂದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ರೇಕಕಾರಿಯಾಗಿ ಹೇಳಿದ್ದಾರೆ” ಎಂದರು.
“ರಾಜ್ಯ ಸರ್ಕಾರ ಅನಂತ್ ಕುಮಾರ್ ಹೆಗಡೆ ಮತ್ತು ಕೆ ಎಸ್ ಈಶ್ವರಪ್ಪ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಅವರನ್ನು ಬಂದಿಸಬೇಕು. ಈ ರೀತಿ ಹೇಳಿಕೆ ನೀಡುವ ಯಾರೇ ಆದರೂ ಅವರ ಮೇಲೆ ಸರ್ಕಾರ ಸೂಕ್ತ ಕ್ರಮ ಜರುಗಸಬೇಕು” ಎಂದು ಡಾ.ರಝಾಕ್ ಉಸ್ತಾದ್ ಒತ್ತಾಯಿಸಿದ್ದಾರೆ.
ವರದಿ : ಹಫೀಜುಲ್ಲ