ನಾರಾಯಣಪೂರ ಬಲದಂಡೆ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗಿದ್ದು, ಮಳೆಯ ಪ್ರಮಾಣವೂ ಸಂಪೂರ್ಣ ಇಳಿಮುಖವಾಗಿದೆ. ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಚಾಮರಾಸ ಮಾಲಿ ಪಾಟೀಲ್ ಮಾತನಾಡಿ, “ಆಲಮಟ್ಟಿ ಜಲಾಶಯದಲ್ಲಿ 120 ಟಿಎಂಸಿ ನೀರು, ಬಸವ ಸಾಗರ ಜಲಾಶಯದಲ್ಲಿ 21 ಟಿಎಂಸಿ ನೀರು ಲಭ್ಯವಿದ್ದು, ಅಧಿಕಾರಿಗಳು ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶವನ್ನು ನಿರ್ಲಕ್ಷಿಸುತ್ತಿದೆ. ಕಾವೇರಿ ಸಮಸ್ಯೆಗೆ ರಾತ್ರೋರಾತ್ರಿ ಸಭೆಗಳನ್ನು ನಡೆಸುತ್ತಾರೆ. ಆದರೆ ತುಂಗಭದ್ರಾ, ಕೃಷ್ಣಾ ನದಿ ಪಾತ್ರದ ರೈತರಿಗೆ ಅನ್ಯಾಯವಾಗುತ್ತಿದೆ. ಮುಂಗಾರು ಮಳೆ ವಿಫಲಗೊಂಡ ಪರಿಣಾಮ ರೈತರು ನಾಲೆ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ನೀರಿನ ಲಭ್ಯತೆ ಇದ್ದರೂ ಅವೈಜ್ಞಾನಿಕ ವಾರಾಬಂಧಿ ಜಾರಿಯಿಂದ ನೀರಾವರಿ ಕ್ಷೇತ್ರ ಅತಂತ್ರ ಸ್ಥಿತಿ ತಲುಪಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಭತ್ತ ನಾಟಿ, ಮೆಣಸಿನಕಾಯಿ ಸಸಿ ನೆಟ್ಟು ನೀರಿಗಾರಿ ರೈತರು ಕಾದು ಕುಳಿತಿದ್ದಾರೆ. ಹತ್ತಿಬೆಳೆ, ಉಳ್ಳಾಗಡ್ಡಿ ಬೆಳೆಗಳು ಒಣಗುತ್ತಿವೆ. ಇಂಥ ಸಮಯದಲ್ಲಿ ನೀರು ಕೊಡದೇ ಇರುವುದು ಖಂಡನೀಯವಾಗಿದೆ. ಜಲಾಶಯದಲ್ಲಿ ನೀರಿದ್ದರೂ ಕೊರತೆ ಸೃಷ್ಠಿ ಮಾಡಲಾಗಿದೆ” ಎಂದರು.
“ಜಲಾಶಯದಲ್ಲಿ ಇರುವ ನೀರನ್ನು ನಿರಂತರವಾಗಿ ಬಿಟ್ಟರೂ ಸೆಪ್ಟೆಂಬರ್ 20ರವರೆಗೆ ನೀರು ಹರಿಸಬಹುದಾಗಿದೆ. ರೈತರನ್ನು ಹೊರಗಿಟ್ಟು ನೀರಾವರಿ ಸಲಹಾ ಸಮಿತಿ ಸಭೆ ನಡೆಸುವುದರಿಂದ ಇಂತಹ ಅವಾಂತರಗಳು ಸೃಷ್ಠಿಯಾಗುತ್ತಿದೆ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು” ಎಂದು ಹೇಳಿದರು.
“ವಾರಾಬಂಧಿ ನೀತಿಯನ್ನು ಕೂಡಲೇ ಕೈಬಿಟ್ಟು ಸೆಪ್ಟೆಂಬರ್ 20ರವರೆಗೆ ನಿರಂತರವಾಗಿ ನಾಲೆಗಳಿಗೆ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಕೊಳವೆಬಾವಿ ಕೊರೆಯುವ ಮೊದಲು ಪ್ರಾಧಿಕಾರದ ಅನುಮತಿ ಅಗತ್ಯ: ಜಿಲ್ಲಾಧಿಕಾರಿ
ಕೆಬಿಜೆಎನ್ಎಲ್ ಮುಖ್ಯ ಅಧೀಕ್ಷಕ ಶ್ರೀನಿವಾಸ ಅವರು ಪ್ರತಿಭಟನಾಕಾರರ ಮನವಿ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮುಖ್ಯ ವ್ಯವಸ್ಥಾಪಕರೊಂದಿಗೆ ಆಗಸ್ಟ್ 27ರ ಭಾನುವಾರ ಚರ್ಚಿಸಿ ಸೋಮವಾರ ಅಥವಾ ಮಂಗಳವಾರ ನಾಲೆಗಳಿಗೆ ನೀರು ಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳಾದ ಮಹ್ಮದ್ ಆಯಾಸ್, ಅನಿಲರಾಜ್, ಗುರುನಾಥ, ಬಸನಗೌಡ, ಜಾಧವ್, ದೊಡ್ಡಬಸಪ್ಪ ಹಾಗೂ ಸಂಘಟನೆ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಸತ್ಯಂಪೆಟ, ಹಾಜಿ ಮಸ್ತಾನ ಬಿ.ಗಣೇಕಲ್, ಶರಣಪ್ಪ ಸಾಹು, ರಾಮನಗೌಡ ಗಣೇಕಲ್, ಹುಸೇನಬಾಷ, ರಮೇಶ ಅಬಕಾರಿ, ಬಸವರಾಜ ಮಾ.ಪಾಟೀಲ್ ಸೇರಿದಂತೆ ಇತರರು ಇದ್ದರು.