ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ 12 ವರ್ಷಗಳಿಂದ ಸಮಾಲೋಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೆಹಬೂಬ್ ಪಾಷಾ ಎಂಬವರು ವೇತನ ಕೇಳಿದ್ದಕ್ಕೆ ವಜಾಗೊಳಿಸಿತ್ತು. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠವು ವೇತನ ಪಾವತಿಸದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಛೀಮಾರಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಟ್ಟಿ ಪಟ್ಟಣದ ನಿವಾಸಿ ಮೆಹಬೂಬ್ ಪಾಷಾ, ಎರಡು ವರ್ಷ ಜಿಲ್ಲಾ ಪಂಚಾಯಿತಿಯ ಉಪವಿಭಾಗ ಲಿಂಗಸುಗೂರು ಕಚೇರಿ ಹಾಗೂ 10 ವರ್ಷ ರಾಯಚೂರು ಕಚೇರಿಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಿದ್ದರು. ವೇತನ , ಭತ್ಯೆ, ಹೆಚ್ಚುವರಿ 16 ತಿಂಗಳ ವೇತನ, ಭತ್ಯೆ ಬಾಕಿ ಉಳಿಸಿಕೊಂಡಿತ್ತು. ಇದನ್ನು ಕೇಳಿದ್ದಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕೆಲಸದಿಂದಲೇ ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮೆಹಬೂಬ್ ಪಾಷಾ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ದೂರು ಸಲ್ಲಿಸಿದ್ದರು.
ವೇತನ ತಡೆಹಿಡಿದಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ ಹೈಕೋರ್ಟ್, ಮೆಹಬೂಬ್ ಪಾಷಾಗೆ ಪಾವತಿಸಬೇಕಿದ್ದ ಮೂರು ವರ್ಷದ ವೇತನದಲ್ಲಿ ಹೆಚ್ಚುವರಿಯಾಗಿ ಶೇ. 3ರಷ್ಟು ಪಾವತಿಸಬೇಕು ಎಂದು ಆದೇಶ ಹೊರಡಿಸಿ ಜಿಲ್ಲಾಡಳಿತಕ್ಕೆ ಛೀಮಾರಿ ಹಾಕಿದೆ.
ವಿಪರ್ಯಾಸವೆಂದರೆ ಕೋರ್ಟ್ ಆದೇಶ ಹೊರಡಿಸಿದ ಕೂಡಲೇ, ಮೆಹಬೂಬ್ ಪಾಷಾರನ್ನು ಸೇವೆಯಿಂದ ವಜಾಗೊಳಿಸಿ ಗಾಯದ ಮೇಲೆ ಬರೆ ಎಳೆದಿದೆ.
ಬಾಕಿ ವೇತನ ಕೇಳಿದ್ದಕ್ಕೆ ವಜಾಗೊಳಿಸಿದ ಶಿಕ್ಷೆಯಿಂದ ದಂಗಾದ ಪಾಶಾ ಈಗ ಕೆಲಸವಿಲ್ಲದೇ ಬೀದಿಗೆ ಬಂದಿದ್ದಾರೆ. ವೇತನ ಕೇಳಿದ್ದೇ ಮುಳುವಾಯಿತಾ ಎಂದು ತಮ್ಮನ್ನೇ ತಾವು ಪ್ರಶ್ನೆ ಮಾಡಿಕೊಳ್ಳುವಂತಾಗಿದೆ.
ಪ್ರಶಂಸೆ
ಮೆಹಬೂಬ್ ಪಾಷಾ ಸೇರಿ 3 ಜನ ಸಿಬ್ಬಂದಿಗಳ ಕಾರ್ಯ ವೈಖರಿ ಪ್ರಶಂಸಿಸಿ ಶೇಕಡಾ 3ರಷ್ಟು ಹೆಚ್ಚುವರಿ ವೇತನ ಪಾವತಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು ರಾಯಚೂರು ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿದ್ದಾರೆ. ಅದರಂತೆ ಇಬ್ಬರಿಗೆ ಕೊನೆಗೂ ವೇತನ ತಲುಪಿದೆ.
ಸೇವೆಯಿಂದ ವಜಾಗೊಂಡಿರುವ ಬಳಿಕ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮೆಹಬೂಬ್ ಪಾಷಾ, “ಸುಮಾರು ತಿಂಗಳ ಸಂಬಳ ಬಾರದೇ ಇದ್ದ ಕಾರಣ ನಾನು ವೇತನ ಕೇಳಿದ್ದೆ. ಅದುವೇ ಈಗ ನನಗೆ ಮುಳುವಾಗಿದೆ. ಇಲಾಖೆಯು ಸಕಾರಣವಿಲ್ಲದೆ ಪಗಾರ, ಭತ್ಯೆ ನೀಡದೆ ನ್ಯಾಯಾಂಗದ ಆದೇಶ ಉಲ್ಲಂಘನೆಗೊಳಿಸಿದ್ದಾರೆ. ಅಲ್ಲದೆ, ವಜಾಗೊಳಿಸಿರುವ ಕುರಿತು ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್ ಅವರಿಗೆ ದೂರು ಸಲ್ಲಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ” ಎಂದು ತಿಳಿಸಿದ್ದಾರೆ.
“12 ವರ್ಷ ಸೇವೆ ಸಲ್ಲಿಸಿ ಇಂದು ಸೇವೆಯಿಂದ ವಜಾಗೊಂಡು ಕುಟುಂಬ ನಿರ್ವಹಣೆ ದುಸ್ತರವಾಗಿ ಬೀದಿಗೆ ಬರುವಂತಾಗಿದೆ. 12 ವರ್ಷಗಳಿಂದ ಇಲಾಖೆ ನಂಬಿ ಜೀವನ ನಡೆಸುತ್ತಿದ್ದೇನೆ. ನನ್ನದೇನು ತಪ್ಪಿಲ್ಲದಿದ್ದರೂ ಕೂಡಾ ವೇತನ ಭತ್ಯೆ ನೀಡದೆ ಸೇವೆಯಿಂದ ವಜಾಗೊಳಿಸಿರುವುದು ನನ್ನ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಕೂಡಲೆ ನ್ಯಾಯ ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬೈಂದೂರು | ವಿಶೇಷ ಚೇತನ ಮಕ್ಕಳ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಗುರುರಾಜ್ ಗಂಟಿಹೊಳೆ; ಮನೆಗೆ ಭೇಟಿ
ಮತ್ತೆ ಕೆಲಸಕ್ಕೆ ಸೇರಿಸದೇ ಇದ್ದಲ್ಲಿ ಹಾಗೂ ನ್ಯಾಯ ದೊರೆಯದಿದ್ದಲ್ಲಿ ಕುಟುಂಬ ಸಮೇತ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮೆಹಬೂಬ್ ಪಾಷಾ ಎಚ್ಚರಿಕೆ ನೀಡಿದ್ದಾರೆ.
ವರದಿ: ರಫಿ ಗುರುಗುಂಟ
