ಮಕ್ಕಳಿಗೆ ಬಾಲ್ಯದ ಜೀವನವೇ ಇಲ್ಲದಂತಾಗಿದೆ. ಪಾಲಕರು ಮಕ್ಕಳನ್ನು ಅಂಕಗಳ ಹಿಂದೆ ಓಡಿಸುತ್ತಿದ್ದಾರೆ. ಮಕ್ಕಳು ಬುದ್ದಿವಂತರಾಗುವ ಬದಲು ಅಪರಾಧಿಗಳಾಗುವಂತಾಗಿದೆ ಎಂದು ಹಿರಿಯ ಮಕ್ಕಳ ಸಾಹಿತಿ ಪ್ರೋ. ಶಾಶ್ವತಸ್ವಾಮಿ ಮುಕ್ಕುಂದಿಮಠ ಕಳವಳ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ‘ಚಿಣ್ಣರ’ ಪತ್ರಿಕೆಯ ಸಹಯೋಗದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಮಕ್ಕಳ ಸಾಹಿತ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಬಾಲ್ಯವನ್ನು ಅನುಭವಿಸಬೇಕಾದ ಮಕ್ಕಳು ಇಡೀ ದಿನ ಶಾಲೆ, ಮನೆಪಾಠ, ಅಭ್ಯಾಸದಲ್ಲಿಯೇ ಕಳೆದು ಹೋಗುವಾಗ ಬಾಲ್ಯದ ಆಟಗಳೇ ಮರೆಯಾಗಿವೆ. ಅನೇಕ ಹಿರಿಯ ಕವಿಗಳು ಸಹ ಮನೋಜ್ಞವಾಗಿ ಮಕ್ಕಳ ಸಾಹಿತ್ಯವನ್ನು ನೀಡಿದ್ದಾರೆ” ಎಂದರು.
“ಪಂಜೆ ಮಂಜೇರಾಯರು, ಕುವೆಂಪು ಸೇರಿದಂತೆ ಅನೇಕರ ಮಕ್ಕಳ ಸಾಹಿತ್ಯವನ್ನು ಓದಬೇಕು. ಮಹಿಳಾ ಸಾಹಿತಿಗಳು ಹೆಚ್ಚು ಹೆಚ್ಚು ಮಕ್ಕಳ ಸಾಹಿತ್ಯವನ್ನು ರಚಿಸುವುದು ಅಗತ್ಯವಾಗಿದೆ” ಎಂದರು.
“ಅನೇಕ ಹಿರಿಯ ಸಾಹಿತಿಗಳು ವೈಚಾರಿಕತೆಯಲ್ಲಿಯೇ ಉಳಿದು ಮಕ್ಕಳ ಸಾಹಿತ್ಯವನ್ನು ರಚಿಸುವದನ್ನೇ ಬಿಟ್ಟು ಬಿಟ್ಟಿದ್ದಾರೆ. ಮಕ್ಕಳಲ್ಲಿ ಅನೇಕ ಪ್ರತಿಭೆಯಿರುವದನ್ನು ಪಾಲಕರು, ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು” ಎಂದರು.
ವಿವಿಧ ಲೇಖಕರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಾಹಿತಿ ಮಹಾಂತೇಶ ಮಸ್ಕಿ, “ಮಕ್ಕಳ ಪಠ್ಯ ಪುಸ್ತಕ ಬದಲಾವಣೆಯಿಂದಾಗಿ ಹಳೆಗನ್ನಡದೊಂದಿಗೆ ಮಕ್ಕಳ ಸಾಹಿತ್ಯವೇ ಮಾಯವಾಗುತ್ತಿದೆ. ಅನೇಕ ಹಿರಿಯ ಕವಿಗಳು ರಚಿಸಿದ್ದ ಮಕ್ಕಳ ಸಾಹಿತ್ಯವನ್ನು ಈ ಹಿಂದೆ ಪಠ್ಯದಲ್ಲಿ ಇರುತ್ತಿತ್ತು. ಆದರೀಗ ಇಲ್ಲದತಾಗಿದೆ. ಮಕ್ಕಳಲ್ಲಿ ವೈಚಾರಿಕತೆ ಕಣ್ಮರೆಯಾಗುತ್ತಿದೆ” ಎಂದರು.
ಶಂಕರದೇವರು ರಚಿಸಿದ ಪಾರಿಜಾತ ಪರಿಮಳ ಕೃತಿ ಕುರಿತು ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರು, ಮಂಡಲಗಿರಿ ಪ್ರಸನ್ನ ರಚಿಸಿದ ಹೊಳೆದಂಡೆ ಹಾಗೂ ಬೆಳ್ಳಕ್ಕಿಗಳು ಕೃತಿ ಕುರಿತು ಡಾ.ಕೆ ಶಶಿಕಾಂತ, ಗುಂಡುರಾವ ದೇಸಾಯಿವರ ಮಕ್ಕಳೇನು ಸಣ್ಣವರಲ್ಲ ಕೃತಿ ಕುರಿತು ಗಿರಿಜಾ ರಾಜಶೇಖರ ಪರಿಚರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ತಮ್ಮಣ್ಣ ಬೀಗಾರ ಸಿದ್ದಾಪುರು,ಇಂಡಿಯಾ ಬುಕ್ ಆಫ್ ರಿಕಾರ್ಡ ದಾಖಲೆ ಮಾಡಿರುವದು ಶಂಕರ ದೇವರು ಹೀರೆಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.