ರಾಯಚೂರು ನಗರಸಭೆಯ ಘನ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಕೆಲಸವನ್ನು ಖಾಯಂಗೊಳಿಸುವುದು, ಚಾಲಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
“ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ, ಕಸ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನಗಳ ಚಾಲಕರು, ಲೋಡರ್ಗಳು ಮತ್ತು ಕ್ಲೀನರ್ಗಳು ನೇರ ವೇತನ ಪಾವತಿಯಡಿ ತಂದು ಏಕಕಾಲಕ್ಕೆ ಪೌರಕಾರ್ಮಿಕರೆಂದು ಪರಿಗಣಿಸಿ ಖಾಯಂಗೊಳಿಸಬೇಕು” ಎಂದು ಪ್ರತಿಭಟಿಸಿದರು.
“ಏಳನೇ ವೇತನ ಆಯೋಗದ ಪ್ರಕಾರ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದ ಮೇಲೆ ವಾಹನ ಚಾಲಕರು, ಲೋಡ್ಗಳು ಮತ್ತು ಕ್ಲೀನರ್ಗಳಿಗೆ ಸಮಾನ ವೇತನ ನೀಡಬೇಕು. ಚಾಲಕರಿಗೆ ಕಳೆದ 4 ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ. ಕೂಡಲೇ ಮಾಸಿಕ ವೇತನ ₹17,500 ರಿಂದ ₹35,000ದವರೆಗೂ ವೇತನ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
“ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಒಳಗೊಂಡಂತೆ ಇತರೆ ಎಲ್ಲ ಕಾರ್ಮಿಕರು ಮರಣ ಹೊಂದಿದಲ್ಲಿ, ಅವರ ಅವಲಂಬಿತರಿಗೆ ಕೂಡಲೇ 10 ಲಕ್ಷ ರೂ.ಗಳನ್ನು ವಿತರಿಸಬೇಕು. ಅನುಕಂಪದ ನೇಮಕಾತಿಯಡಿ ಅವಲಂಬಿತರನ್ನು ಸೇವೆಗೆ ತೆಗೆದುಕೊಳ್ಳಬೇಕು. ಐಪಿಡಿ ಸಾಲಪ್ಪ ವರದಿಯನ್ನು ತಕ್ಷಣವೇ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ 2003ರಲ್ಲಿ ನೇಮಿಸಿದ್ದ ತ್ರಿಸದಸ್ಯ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ತ್ಯಾಜ್ಯ ನಿರ್ವಹಣೆಯಲ್ಲಿನ ಎಲ್ಲ ರೀತಿಯ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆ ಮಾಡಬೇಕು. ದಲಿತರ ಎಲ್ಲ ರೀತಿಯ ಜಾತಿ ಆಧಾರಿತ ತಾರತಮ್ಯದಿಂದ ವಿಮೋಚನೆಗೊಳ್ಳಬೇಕು” ಎಂದು ಮನವಿ ಮಾಡಿದರು.
“ಎಲ್ಲರಿಗೂ ಉಚಿತ ವಸತಿ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಪ್ರಾಥಮಿಕ, ಉನ್ನತ ಶಿಕ್ಷಣ ನೀಡಬೇಕು. ಎಲ್ಲ ರೀತಿಯ ರಜೆ ಸೌಲಭ್ಯಗಳನ್ನು ನೀಡಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಆಗುತ್ತಿರುವ ಲೈಂಗಿಕ ಕಿರುಕುಳ ಸಮಸ್ಯೆ ಪರಿಹರಿಸಬೇಕು. ಲಿಂಗ ಮತ್ತು ಜಾತಿ ತಾರತಮ್ಯವನ್ನು ತೊಲಗಿಸಬೇಕು. ಅಧಿಕಾರಿಗಳು ಮತ್ತು ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಗೌರವ ಮತ್ತು ಘನತೆಯಿಂದ ವರ್ತಿಸುವ ಮೂಲಕ ಅವರ ಜಾತಿವಾದಿ ಮತ್ತು ವರ್ಗವಾಗಿ ಪೂರ್ವಾಗ್ರಹಗಳನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಬಿಡುಗಡೆಗೆ ಆಗ್ರಹ
“ಎಲ್ಲ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ಲಾಕರ್ಗಳು, ಸುರಕ್ಷತಾ ಉಡುಗೆ, ಬಟ್ಟೆ ಬದಲಾಯಿಸುವ ಕೊಠಡಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿ ಹುಸೇನಪ್ಪ, ವಿರೇಶ, ಅಮರೇಶ ಜವಳಗೇರಾ, ದುರುಗಪ್ಪ, ಹನುಮಂತ, ದುರುಗೇಶ ಡಿ, ನಾಗರಾಜ, ಕೆಂಚಪ್ಪ, ಮಾರೆಪ್ಪ ಹರವಿ ಸೇರಿದಂತೆ ಬಹುತೇಕರು ಇದ್ದರು.
ರಾಯಚೂರು ಜಿಲ್ಲಾ ಸಿಟಿಜನ್ ಜರ್ನಲಿಸ್ಟ್, ಹಫೀಜುಲ್ಲ