ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಗಲಗ ಗ್ರಾಮದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ, ಒಂದೂ ಕೂಡ ಕಾರ್ಯಾಚರಣೆಯಲ್ಲಿಲ್ಲ.
ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಬೇಸಿಗೆ ಕಾಲದಲ್ಲಿ ಸಮಸ್ಯೆ ಎದುರಾಗುತ್ತದೆ. ಬೇಸಿಗೆ ಕಾಲದಲ್ಲಿ ಕಾಲುವೆ ನೀರನ್ನು ಬಂದ್ ಮಾಡಲಾಗುತ್ತದೆ. ಹಾಗಾಗಿ ಅಕ್ಕಪಕ್ಕ ಬೋರ್ವೆಲ್ ಇದ್ದವರ ಮನೆಗೆ ಹೋಗಿ ನೀರು ತೆಗೆದುಕೊಂಡು ಬರುವ ಸ್ಥಿತಿಯಿದೆ. ಪ್ರಸ್ತುತವಾಗಿ ಮನೆಯ ಮುಂದೆ ಖಾಸಗಿ ನೀರಿನ ಗಾಡಿ ಬರುತ್ತದೆ. ಸ್ಥಳೀಯರು ಅದನ್ನು ತುಂಬಿಕೊಂಡು ಬಳಸುತ್ತಾರೆ.
ಗ್ರಾಮದಲ್ಲಿ ನಾಲ್ಕು ಶುದ್ದ ನೀರಿನ ಘಟಕ 2010 ಹಾಗೂ 2012ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಕೆಲವು ವರ್ಷಗಳವರಗೆ ಕಾರ್ಯಾಚರಣೆಯಲ್ಲಿತ್ತು. ಬಳಿಕ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಹದಗೆಟ್ಟಿವೆ. ಸುಮಾರು ನಾಲ್ಕು ವರ್ಷಗಳು ಕಳೆದರೂ ಕೂಡ ಒಂದೂ ಚಾಲ್ತಿಯಲ್ಲಿಲ್ಲದಿರುವುದು ಕಂಡುಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ತಾಲೂಕಿನ ಕೆಲವು ಭಾಗಗಳಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಸಾವನ್ನಪ್ಪಿರುವುದು ದುರಂತವೇ ಸರಿ.
ಸ್ಥಳೀಯ ನಿವಾಸಿ ಶಿವನಗೌಡ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಗ್ರಾಮದಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಹಾಳುಬಿದ್ದಿವೆ” ಎಂದು ತಿಳಿಸಿದರು.
“ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ, ಇದು ನಮ್ಮ ಪಂಚಾಯತ್ ಅಧೀನಕ್ಕೆ ಬರುವುದಿಲ್ಲವೆಂದು ಹೇಳುತ್ತಾರೆ. ಈ ಸಮಸ್ಯೆ ಬಗ್ಗೆ ನಾವು ಯಾರಿಗೆ ತಿಳಿಸಬೇಕು, ಸಂಬಂಧಪಟ್ಟವರು ಯಾರು ಎಂಬುದೂ ನಮಗೆ ತಿಳಿದಿಲ್ಲ. ಗ್ರಾಮದ ಒಂದು ನೀರಿನ ಘಟಕ ಶಾಲೆಯ ಆವರಣದಲ್ಲಿ ಇರುವುದರಿಂದ ಅದನ್ನು ಊರಿನ ಜನರೇ ಬಂದ್ ಮಾಡಿದ್ದಾರೆ. ಶಾಲೆಯ ಮಕ್ಕಳು ಹೋಗುವಾಗ, ಬರುವಾಗ ಕಾಲು ಜಾರಿ ಬೀಳುತ್ತವೆಂಬ ಕಾರಣಕ್ಕೆ ಆವರಣದಲ್ಲಿರುವ ನೀರಿನ ಘಟಕವನ್ನು ಬಂದ್ ಮಾಡಲಾಗಿದೆ. ಇನ್ನೂ ಮೂರು ನೀರಿನ ಘಟಕಗಳನ್ನು ಆದಷ್ಟು ಬೇಗ ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮದ ಜನರು ಸೇರಿ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿದ್ದೀರಾ? ಜಗಳೂರು ಸಂತೆಯಲ್ಲಿ ಬೀಡಾಡಿ ದನಗಳದೇ ವ್ಯಾಪಾರ, ಜನರ ಗೋಳು ಕೇಳುವವರಿಲ್ಲ
ಗಲಗ ಗ್ರಾಮ ಪಂಚಾಯತ್ ಪಿಡಿಒ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನೀರಿನ ಘಟಕಗಳ ಟೆಂಡರ್ ವರ್ಕ್ ಮಾಡುವರು ಅದನ್ನು ಸರಿಯಾಗಿ ನಿರ್ವಹಿಸಬೇಕು. ಆದರೆ, ಅವರು ಬೇಕಾಬಿಟ್ಟಿ ಮಾಡಿ ಹೋಗಿದ್ದಾರೆ. ಎಲ್ಲವೂ ಹಾಳಾಗಿವೆ. ದೇವದುರ್ಗ ತಾಲೂಕಿನಲ್ಲಿ 120 ನೀರಿನ ಘಟಕಗಳು ಇವೆ. ಇದರ ಸಂಬಂಧ ಮೇಲಧಿಕಾರಿಗಳು ಸಭೆ ಕರೆದಿದ್ದಾರೆ. ಟೆಂಡರ್ ಮಾಲೀಕರ ಮೇಲೆ ಇದರ ಬಗ್ಗೆ ಚರ್ಚಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.