ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತಿಪ್ಪೂರು ಗ್ರಾಮದ ರೈತ ಶಿವರುದ್ರ (42) ಜುಲೈ 6ರ ಬೆಳಗಿನ ಜಾವ 3 ಗಂಟೆಗೆ ಜಮೀನಿಗೆ ನೀರು ಹಾಯಿಸಲೆಂದು ಹೋಗಿದ್ದಾಗ, ಒಂಟಿ ಆನೆಯೊಂದು ದಾಳಿ ನಡೆಸಿ ಭೀಕರವಾಗಿ ಕೊಂದಿದೆ.
ಸಾಮಾನ್ಯವಾಗಿ ಆನೆಗಳು ಹೆಚ್ಚಾಗಿ ಬೆಳಗ್ಗೆ ಇಲ್ಲವೇ ಸಂಜೆಯ ವೇಳೆ ದಾಳಿ ನಡೆಸುತ್ತಿದೆ. ರಾಮನಗರ ಜಿಲ್ಲೆಯ ತೆಂಗಿನಕಲ್ಲು, ನರಿಕಲ್ಲು, ಕಬ್ಬಾಳು, ಬಿಳಿಕಲ್ಲು, ಹಂದಿಗುಂದಿ, ಚಿಕ್ಕಕೆಮ್ಮಣ್ಣುಗುಡ್ಡೆ, ಬೆಳಕೆರೆ, ಚಿಕ್ಕಬೆಟ್ಟ, ಶಿವಾಲದಪ್ಪನ ತಪ್ಪಲು, ಮುತ್ತತ್ತಿ, ಸಂಗಮ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಜನಗಳ ಮೇಲೆ ದಾಳಿ ಇಡುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ಇದು ಒಂಬತ್ತನೆಯ ಸಾವು. ಈ ಸಾವುಗಳನ್ನು ತಪ್ಪಿಸಲು ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ. ಎಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ? ಅವುಗಳು ನಡೆದಾಡುವ ದಾರಿಗಳು ಯಾವುದು? ಕಾಡಾನೆಗಳ ಗುಂಪು ಯಾವ ಹೊತ್ತಿನಲ್ಲಿ, ಯಾವ ಭಾಗಗಳಲ್ಲಿ ಇರುತ್ತವೆ ಎಂಬ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ.

ಆನೆಗಳು ಓಡಾಡುವ ಪ್ರದೇಶಗಳಲ್ಲಿ ಬರುವ ಹಳ್ಳಿಗಳ ಜನರಿಗೆ ಹಾಗೂ ಸಂಘರ್ಷಕ್ಕೆ ಗುರಿಯಾಗಬಹುದಾದ ಪ್ರದೇಶಗಳಲ್ಲಿನ ಜನರಿಗೆ ಮುಂಚಿತವಾಗಿ ಮಾಹಿತಿ ನೀಡುವುದನ್ನು ರೂಢಿಸಬೇಕಿದೆ. ಈ ಮುಂಜಾಗ್ರತಾ ಕ್ರಮಗಳು ಇಂತ ಅನಾಹುತಗಳನ್ನು ಯಶಸ್ವಿಯಾಗಿ ತಡೆಗಟ್ಟುತ್ತವೆ.
ಕೆಲವು ಕಡೆ ಆನೆಗಳು ಸಹಜವಾಗಿ ಓಡಾಡುತ್ತಿದ್ದ ದಾರಿಗಳಲ್ಲಿ ಅಡಚಣೆ ಹೆಚ್ಚಿದ್ದರಿಂದ ಅನಿವಾರ್ಯವಾಗಿ ಹೊಲ-ಗದ್ದೆಗಳಲ್ಲಿ ಓಡಾಡಲು ಶುರು ಮಾಡಿದ್ದರಿಂದ ಬೆಳೆ ನಾಶ ಹಾಗೂ ಮಾನವನೊಂದಿಗಿನ ಸಂಘರ್ಷ ಹೆಚ್ಚಾಗಿದೆ. ಆನೆ ಓಡಾಡುವ ದಾರಿ ಛಿದ್ರಗೊಂಡಿರುವುದು, ಒತ್ತುವರಿ ಆಗಿರುವುದು, ಕಾಡು ನಾಶದಂತ ಮಾನವನಿಂದಾದ ಅನಾಹುತಗಳಿಂದ ಆನೆಗಳ ಚಟುವಟಿಕೆ ದಿಕ್ಕು ತಪ್ಪುತ್ತಿದೆ.
ರಾಮನಗರ ಜಿಲ್ಲೆಯ ಬಾಧಿತ ಪ್ರದೇಶದ ರೈತರುಗಳು ಕಳೆದ ಜೂನ್ 27ರಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ತಮ್ಮ ತಮ್ಮ ಜಮೀನುಗಳನ್ನು ಅಲ್ಲಿನ ಬೆಳೆ ಬದುಕುಗಳನ್ನು ಅರಣ್ಯ ಇಲಾಖೆ ಗುತ್ತಿಗೆ ಮೇಲೆ ಒಪ್ಪಂದ ಮಾಡಿಕೊಂಡು ವಹಿಸಿಕೊಳ್ಳಲು ಆಗ್ರಹಿಸಿತ್ತು. ಆದರೆ, ರೈತರ ಬೇಡಿಕೆಗಳಿಗೆ ಇನ್ನೂ ಸರ್ಕಾರ ಮಣೆ ಹಾಕಿಲ್ಲ.
ಇದಕ್ಕಿಲ್ಲವೇ ಪರಿಹಾರ?
ಇದಕ್ಕೊಂದು ಶಾಶ್ವತ ಪರಿಹಾರ ಇಲ್ಲವೇ? ಆನೆಗಳು ಓಡಾಡುವ ಜಾಗವನ್ನು ನಿಖರವಾಗಿ ಗುರುತಿಸಿ, ಆ ಜಾಗಗಳನ್ನು ಸರಕಾರವೇ ಕೊಂಡು, ಆ ಪ್ರದೇಶಗಳನ್ನು ಆನೆಗಳಿಗಾಗಿಯೇ ಮೀಸಲಿಡುವುದು. ಆ ಭಾಗದ ಜನರಿಗೆ ಅವುಗಳ ಚಲನವಲನಗಳನ್ನು ಮುಂಚಿತವಾಗಿಯೇ ಮೊಬೈಲ್ ಮೂಲಕ ಮುಟ್ಟಿಸುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡಬೇಕಿದೆ.
1975ರಿಂದ ಈಚೆಗೆ ಕರ್ನಾಟಕದಲ್ಲಿ ಶೇ 40ರಕ್ಕಿಂತ ಹೆಚ್ಚು ಪ್ರದೇಶ ಮಾನವ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಆನೆಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಬದುಕುತ್ತಿವೆ. ಮಾನವ ಕೂಡ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಎಲ್ಲೆಲ್ಲಿ ಅನೆಗಳ ಓಡಾಟ ಹೆಚ್ಚಾಗಿದೆಯೋ ಆ ಭಾಗಗಳಲ್ಲಿ ವಾಸಿಸುವವರಿಗೆ ಆನೆಗಳ ಮನೋಧರ್ಮವನ್ನು ತಿಳಿಸುವ ಕೆಲಸವನ್ನು ಸರಕಾರ ತುರ್ತಾಗಿ ಮಾಡಬೇಕಿದೆ. ಸಂಘರ್ಷಕ್ಕೆ ಕಾರಣವಾಗುತ್ತಿರುವ ಒಂದೊಂದು ಅಂಶವನ್ನು ಗುರುತಿಸಿ, ಸೂಕ್ತವಾದ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಮಾಡುವ ಮೂಲಕ, ಮಾನವ-ಆನೆಗಳ ನಡುವಿನ ಸಂಘರ್ಷಕ್ಕೆ ತಿಲಾಂಜಲಿ ಇಡಬೇಕಿದೆ.
ನಗರಕೆರೆ ಜಗದೀಶ್, ಮಂಡ್ಯ ಫೀಲ್ಡ್ ಕೋರ್ಡಿನೇಟರ್