ಇನ್ನೇನು ಬೇಸಿಗೆ ಶುರುವಾಗಿದೆ. ಕೆಂಡದಂತ ಬಿರು ಬಿಸಿಲಿನ ಜಳಕ್ಕೆ ಬಸವಳಿದಿರುವ ಜನರು ದಾಹ ನೀಗಿಸಿಕೊಳ್ಳಲು ತಂಪು ನೀರಿನ ಮೊರೆ ಹೋಗುವುದು ಸಾಮಾನ್ಯ. ಆದರೆ ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಹಲವು ಗ್ರಾಮಗಳಲ್ಲಿ ಜಲಕ್ಷಾಮ ಉಂಟಾದ ಪರಿಣಾಮ ಮುಂದಿನ ಮೂರು ತಿಂಗಳ ಬೇಸಿಗೆ ಹೇಗೆ ಕಳೆಯುವುದು ಎಂಬ ಆತಂಕ ಆವರಿಸಿದೆ.
ಔರಾದ ತಾಲೂಕಿನ ಎಕಂಬಾ ಗ್ರಾಮ ವ್ಯಾಪ್ತಿಗೆ ಬರುವ ಭೀಮರಾವ ನಾಯಕ ತಾಂಡಾದಲ್ಲಿ ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ಇದೀಗ ಬೇಸಿಗೆ ಆರಂಭದಲ್ಲಿ ತಾಂಡಾ ನಿವಾಸಿಗಳು ಜೀವ ಜಲಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಂಡಾದಲ್ಲಿ 25 ರಿಂದ 30 ಕುಟುಂಬಗಳು ವಾಸ ಮಾಡುತ್ತಿದ್ದು, ಇನ್ನೂರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಎರಡು ಕೊಳವೆ ಬಾವಿಗಳಿದ್ದರೂ ಅಂತರ್ಜಲ ಕುಸಿತದಿಂದಾಗಿ ಬತ್ತಿ ಹೋದ ಪರಿಣಾಮ ನೀರಿನ ಸಮಸ್ಯೆ ತಲೆದೋರಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಕೋಟಿ ಕೋಟಿ ಸುರಿಯುತ್ತಿದೆ, ʼಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ, ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕುʼ ಎಂದು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲಿಂದ ಮೇಲೆ ಸೂಚನೆ ನೀಡುತ್ತಲ್ಲಿದೆ. ಆದರೆ ಸರ್ಕಾರದ ಯೋಜನೆಗಳ ಅನುಷ್ಠಾನ ವೈಫಲ್ಯದಿಂದ ಗ್ರಾಮೀಣ ಜನರು ನೀರಿಗಾಗಿ ಅಲೆಯುವುದನ್ನು ಮಾತ್ರ ಇನ್ನೂ ತಪ್ಪಿಲ್ಲ.

ಮನೆ-ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ತಾಂಡಾದಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಅಪೂರ್ಣ ಹಿನ್ನಲೆ ಇದುವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ. ಇದರಿಂದ ತಾಂಡಾಕ್ಕೆ ನೀರು ಯಾವಾಗ ಬರುತ್ತದೆ ಎಂದು ಬಾಯ್ತೆರೆದು ಕಾದು ಕುಳಿತುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ತಾಂಡಾದಲ್ಲಿ ನೀರಿನ ಸಮಸ್ಯೆ ಯಾಕೆ :
ಭೀಮರಾವ್ ನಾಯ್ಕ್ ತಾಂಡಾ ನಿವಾಸಿಗಳಿಗೆ ನೀರು ಸರಬರಾಜು ಮಾಡಲು 2018-19 ರಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ತಾಂಡಾ ಹೊರವಲಯದ ಸರ್ವೇ ನಂ.62 ತೆರದ ಬಾವಿ ಕೊರೆಸಲು ಅನುದಾನ ಮಂಜೂರು ಮಾಡಲಾಗಿತ್ತು. ಆದರೆ ತೆರದ ಬಾವಿ ಕೊರೆಸಲು ಜಮೀನು ನೀಡಿದ ಭೂಮಾಲಿಕ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮಿಲಾಗಿ ನೋಂದಾಯಿತ ಜಾಗದಲ್ಲಿ ಬಾವಿ ಕೊರೆಸದೆ ಬೇರೆ ಸರ್ವೇ ನಂ.ನಲ್ಲಿ ಬಾವಿ ಕೊರೆಸಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕ ಜಿಲ್ಲಾ ಸಂಚಾಲಕ ಬಾಬುರಾವ ಕೌಠಾ ಅವರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದಾರೆ.
ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು :
“ನಮ್ಮ ತಾಂಡಾ ಜನರಿಗೆ ಸರ್ಕಾರದಿಂದ ಮಂಜೂರಾದ ತೆರೆದ ಬಾವಿಯ ನೀರು ಕೊಡುವಂತೆ ಭೂಮಾಲಿಕರಿಗೆ ಕೇಳಿದರೆ, ಗ್ರಾಮ ಪಂಚಾಯಿತಿಗೆ ನೋಂದಾಯಿಸಿಕೊಟ್ಟ ಜಾಗದಲ್ಲಿ ಸರ್ಕಾರ ತೆರೆದ ಬಾವಿ ಕೊರೆಸಿಲ್ಲ. ಈಗಿರುವ ತೆರೆದ ಬಾವಿ ನನ್ನ ಜಮೀನಿನಲ್ಲಿದೆ ಎಂದು ಸಬೂಬು ಹೇಳುತ್ತ ನಮಗೆ ನೀರು ಕೊಡುತ್ತಿಲ್ಲ. ಇದರಿಂದ ತಾಂಡಾ ಜನರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪರಿಶೀಲಿಸಿ ನೀರಿನ ಸಮಸ್ಯೆ ಬಗೆಹರಿಸುವಂತೆ ಔರಾದ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಫೆ.19 ರಂದು ಮನವಿ ಸಲ್ಲಿಸಿದ್ದೇವೆ. ಆದರೆ, ಇಲ್ಲಿಯವರೆಗೆ ಯಾರೊಬ್ಬರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ” ಎಂದು ತಾಂಡಾದ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

“ಕಳೆದ ವರ್ಷದಿಂದ ನಮ್ಮ ತಾಂಡಾ ಜನರಿಗೆ ನೀರಿನ ಸಮಸ್ಯೆ ತೀವ್ರವಾಗಿದೆ. ಇದೀಗ ಬೇಸಿಗೆ ಶುರುವಾಗಿದೆ. ಹೀಗಾಗಿ ಜಾನುವಾರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ. ನೀರಿಗಾಗಿ ಹೊಲ, ಗದ್ದೆಗಳಲ್ಲಿರುವ ಖಾಸಗಿ ಬೋರೆವೆಲ್ಗಳಿಗೆ ಅಲೆದಾಡುತ್ತಿದ್ದೇವೆ. ಸರ್ಕಾರದಿಂದ ಮಂಜೂರಾದ ತೆರೆದ ಬಾವಿ ಕಾಮಗಾರಿಯಲ್ಲಿ ಬೋಗಸ್ ನಡೆದ ಪರಿಣಾಮ ಈ ಸಂಕಷ್ಟ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೇಳಿದರೆ ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎರಡು ದಿನದೊಳಗೆ ನಮಗೆ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಔರಾದ ತಾಲೂಕು ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು” ಎಂದು ತಾಂಡಾ ನಿವಾಸಿಗಳಾದ ಮಾಜಿ ಗ್ರಾ.ಪಂ.ಅಧ್ಯಕ್ಷ ಪಂಡರಿ ನಾರಾಯಣ ಹಾಗೂ ಮಹಿಳೆಯರು ಈದಿನ.ಕಾಮ್ ದೊಂದಿಗೆ ಮಾತನಾಡಿ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರೈತ ಹೋರಾಟ | ರೈತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡಿದ ಹರಿಯಾಣ ಪೊಲೀಸರು
ಈ ಬಗ್ಗೆ ಔರಾದ ತಾಲೂಕು ಪಂಚಾಯಿತಿ ಇಒ ಬೀರೇಂದ್ರ ಸಿಂಗ್ ಈದಿನ.ಕಾಮ್ ಜೊತೆಗೆ ಮಾತನಾಡಿ, ” ಭೀಮಾ ನಾಯಕ ತಾಂಡಾದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.