ಸಂತಕವಿ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಅಂದಿನ ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ಮೌಢ್ಯ ಹಾಗೂ ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಹಯೋಗದಲ್ಲಿ ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಸರ್ವಜ್ಞ ಅವರು ಹಾವೇರಿ ಜಿಲ್ಲೆಯ ಹಿರೆಕೇರೂರ್ ತಾಲೂಕಿನ ಮಾಸೂರು ಗ್ರಾಮದಲ್ಲಿ ಜನಿಸಿ ಜನರ ಅನುಭವಗಳನ್ನೆ ತಮ್ಮ ವಚನಗಳ ಮೂಲಕ ಪ್ರಚಾರಗೈದು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದರು” ಎಂದರು.
“ನಾವು ಚಿಕ್ಕವರಿದ್ದಾಗ ಸರ್ವಜ್ಞನ ವಚನಗಳನ್ನು ಹಾಡುತ್ತ ಮನೆಗಳಿಗೆ ಬರುತ್ತಿದ್ದ ಸ್ವಾಮಿಗಳು ಅವರು ದವಸ ಧಾನ್ಯಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಸರ್ವಜ್ಞ ಹೇಳಿದಂತೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ ಎನ್ನುವಂತೆ ಅವರ ಹಲವಾರು ವಚನಗಳು ಬಹಳ ಅರ್ಥಪೂರ್ಣವಾಗಿದ್ದವು ಮತ್ತು ಇಂದಿನ ಸಮಾಜಕ್ಕೆ ಬಹಳ ಪ್ರಸ್ತುತವಾಗಿವೆ” ಎಂದರು.
ಪಿ.ಎಂ.ವಿಶ್ವಕರ್ಮ ಯೋಜನೆ ಕುಂಬಾರಿಕೆ ವೃತ್ತಿಗೂ ಅನ್ವಯವಾಗಲಿದ್ದು, ಇದರ ಸದುಪಯೋಗ ತಾವು ಪಡೆದುಕೊಳ್ಳಬೇಕು ಮತ್ತು ತಮ್ಮ ಸಮಾಜ ಸಾಮಾಜಿಕವಾಗಿ ಮುಖ್ಯ ವಾಹಿನಿಗೆ ಬರಬೇಕಾದರೆ ತಮ್ಮಲ್ಲಿರುವ ಮುಖಂಡರ ಪಾತ್ರವು ಬಹಳ ಮುಖ್ಯವಾಗಿದೆ ಎಂದರು.
ಯುವ ಸಾಹಿತಿ ಬಾಲಾಜಿ ಕುಂಬಾರ ಚಟ್ನಾಳ ಅವರು ಸರ್ವಜ್ಞ ಕುರಿತು ಅತಿಥಿ ಉಪನ್ಯಾಸ ನೀಡಿ ಮಾತನಾಡಿ, “ಸರ್ವಜ್ಞ ಎಂಬುವವನು ಗರ್ವದಿಂದ ಆದವನಲ್ಲ ಜನರ ಅನುಭಗಳನ್ನೆ ತಮ್ಮ ವಚನಗಳ ರೂಪದಲ್ಲಿ ಜನರಿಗೆ ತಿಳಿಸಿದ್ದನು ಮತ್ತು ಸಾಮಾಜಿಕ ಓರೆ ಕೋರೆಗಳನ್ನು ತಿದ್ದಿದ್ದರು. ಜಾತೀಯತೆ, ಕಂದಾಚಾರ, ಮೌಢ್ಯ, ಅಸಮಾನತೆ ನಿರ್ಮೂಲನೆ ಅವರ ತ್ರಿಪದಿಗಳಲ್ಲಿ ಕಾಣಬಹುದು” ಎಂದರು.
“ಕಣ್ಣು, ನಾಲಿಗೆ ಮತ್ತು ಮನ ತನ್ನ ಹಿಡಿತದಲ್ಲಿ ಇಲ್ಲದಿದ್ದರೆ ಅದು ನಿನ್ನನ್ನೆ ಕೊಲ್ಲುತ್ತವೆ ಎನ್ನುವ ಅವರ ವಚನ ನಮಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಸರ್ವಜ್ಞ, ಬುದ್ದ, ಬಸವ, ಅಂಬೇಡ್ಕರ್ ಸೇರಿದಂತೆ ಯಾರೇ ಮಾಹತ್ಮರನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸಬಾರದು ಅವರು ನಮ್ಮ ಸಮಾಜದ ಅಮೂಲ್ಯ ಸಂಪತ್ತುಗಳು ಅವರ ತತ್ವ ಮತ್ತು ಸಿದ್ಧಾಂತಗಳು ಎಲ್ಲಾ ಸಮಾಜದ ಜನರಿಗೆ ಒಳಿತನ್ನೆ ಬಯಸಿವೆ” ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸರ್ವಜ್ಞ ಭಾವಚಿತ್ರಕ್ಮೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಚಾಲನೆ ನೀಡಲಾಯಿತು. ಬಳಿಕ ಬೀದರ ನಗರದ ವಿವಿಧ ವೃತ್ತಗಳ ಮೂಲಕ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದವರೆಗೆ ಕೋಲಾಟ, ಡೊಳ್ಳು ಕುಣಿತ ಹಾಗೂ ಹಲಿಗೆ ತಂಡಗಳ ಮೂಲಕ ಸರ್ವಜ್ಞ ಭಾವಚಿತ್ರದ ಮೆರವಣಿಗೆ ನಡೆಯಿತು.
ಇದೇ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಫಲಿತಾಂಶದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 40 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಜಿಲ್ಲೆಯ ಕುಂಬಾರ್ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾ ಕುಂಬಾರ್ ಸಮಾಜದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಜನಪ್ರತಿನಿಧಿಗಳ ಗೈರು, ಅಸಮಾಧಾನ :
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕವಿ ಸರ್ವಜ್ಞನವರ ಜಯಂತಿಗೆ ಜಿಲ್ಲೆಯ ಯಾವುದೇ ಜನಪ್ರತಿನಿಧಿ ಹಾಜರಾಗದ ಹಿನ್ನೆಲೆ ಕುಂಬಾರ ಸಮಾಜದ ಮುಖಂಡರು ವೇದಿಕೆ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
“ಪ್ರತಿವರ್ಷ ನಡೆಯುವ ಸಂತ ಕವಿ ಸರ್ವಜ್ಞನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಗೈರು ಹಾಜರಾಗುವ ಮೂಲಕ ಮಹಾತ್ಮರ ಅಚರಣೆಗೆ ಅಪಮಾನ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ಬೇಡಿಕೆಗಳಿಗೆ ಸ್ವಂದಿಸದೇ ನಿರ್ಲಕ್ಷ್ಯ ವಹಿಸುತ್ತಿರುವ ಜನಪ್ರತಿನಿಧಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನಿರಗುಡಿಯ ಹವಾ ಮಲ್ಲಿನಾಥ ಮುತ್ಯಾಗೆ ನ್ಯಾಯಾಂಗ ಬಂಧನ
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಕುಂತಲಾ ಬೆಲ್ದಾಳೆ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ವಿಠಲರಾವ್ ಕುಂಬಾರ, ಕರಕುಶಲ ಸಹಕಾರ ಸಂಘದ ಅಧ್ಯಕ್ಷ ಬಾಬುರಾವ್ ಕುಂಬಾರ, ಆಕಾಶ ಪಾಟೀಲ್, ಕುಂಬಾರ ಸಮಾಜದ ಮುಖಂಡರಾದ ಶಿವರಾಜ ಕುಂಬಾರ, ಸೇರಿದಂತೆ ಕುಂಬಾರ ಸಮಾಜದವರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.
