ಗೋಪಾಲಗೌಡ ಬಡಾವಣೆ ಮಹಾನಗರ ಪಾಲಿಕೆಯ ಹಾಗೂ ಖಾಸಗಿ ನಿವೇಶನಗಳ ಅತಿಕ್ರಮಣ ತೆರವುಗೊಳಿಸುವಂತೆ ಒತ್ತಾಯಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಮಹಾನಗರ ಪಾಲಿಕೆ ವ್ಯಾಪ್ತಿಯ 17ನೇ ವಾರ್ಡ್ ಗೋಪಾಲಗೌಡ ಬಡಾವಣೆಯ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಬಭಾಗ ಮಹಾನಗರ ಪಾಲಿಕೆಗೆ ಸೇರಿದ ಸಾಕಷ್ಟು ಖಾಲಿ ನಿವೇಶನಗಳಿವೆ. ಇದಕ್ಕೆ ಹೊಂದಿಕೊಂಡಂತೆ ಈ ಹಿಂದೆ ಪಾಲಿಕೆ ಕಸ ವಿಲೇವಾರಿ ಘಟಕ ತೆರೆದಿದ್ದು, ಉಳಿದ ನಿವೇಶನದ ಜಾಗಕ್ಕೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಇದನ್ನು ಗಮನಿಸಿದ ಮಾಜಿ ಜನಪ್ರತಿನಿಧಿ ಹಾಗೂ ಪ್ರಭಾವಿ ಮುಖಂಡರು ಹಾಲಿ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದ ಮಹಾನಗರ ಪಾಲಿಕೆಯ ಆಸ್ತಿ ಕಬಳಿಸಲು ಹೊಂಚು ಹಾಕಿದ್ದಾರೆ” ಎಂದು ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಆರೋಪಿಸಿದರು.
“ಪಾಲಿಕೆಗೆ ಸೇರಿದ ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ಖಾತೆ ಇರುವ ನಿವೇಶನಗಳಿಗೆ ಅಕ್ರಮವಾಗಿ ಬೇಲಿ ನಿರ್ಮಿಸಿಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿ ಸಾರ್ವಜನಿಕರು ಹಾಗೂ ಖಾಸಗಿ ನಿವೇಶನದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿ ಮೇರೆಗೆ ರಕ್ಷಣಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಖಾಸಗಿ ನಿವೇಶನಗಳಿಗೆ ಅಕ್ರಮವಾಗಿ ನಿರ್ಮಿಸಿದ್ದ ಬೇಲಿಗಳನ್ನು ತೆರವುಗೊಳಿಸಿದ್ದರು. ಉಳಿದ ಮಹಾನಗರ ಪಾಲಿಕೆಗೆ ಸೇರಿದ ಜಾಗದ ಒತ್ತುವರಿಯನ್ನು ಇನ್ನೂ ತೆರವುಗೊಳಿಸಿಲ್ಲ. ಆದ್ದರಿಂದ ತಾವುಗಳು ಖುದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ಅಸ್ತಿಗೆ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿರುವ ಭೂ ಕಬಳಿಕೆದಾರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಖಾಲಿ ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕ್/ಉದ್ಯಾನವನ ಅಥವಾ ಕ್ರೀಡಾಂಗಣ ನಿರ್ಮಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗುವಂತೆ ಬಹುದಿನದ ಬೇಡಿಕೆಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾದಕ ವಸ್ತುಗಳ ದುರುಪಯೋಗ, ಕಳ್ಳ ಸಾಗಣಿಕೆ ವಿರುದ್ಧ ಜಾಗೃತಿ ಅಭಿಯಾನದ ಪ್ರತಿಜ್ಞೆ ಸ್ವೀಕಾರ
ಈ ಸಂದರ್ಭದಲ್ಲಿ ಜಿ ಡಿ ಮಂಜುನಾಥ್, ಟಿ ಡಿ ಗಿತೇಂದ್ರ ಗೌಡ, ಆರ್ ರಾಜಶೇಕರ್, ಬಿ ಆರ್ ರವಿ, ಬಿ ರುದ್ರಪ್ಪ, ಈ ಟಿ ಕಿರಣ್ ಕುಮಾರ್, ನಾಗೇಶ್, ಕೆ ಪಿ ಸುಬ್ಬಣ್ಣ, ಎಂ ಬಿ ರವಿಕುಮಾರ್, ಪ್ರಜ್ವಲ್, ಸತೀಶ್ ಚಂದ್ರ, ಅಜಯ್, ಜಿ ಎಸ್ ಶಿವಕುಮಾರ್, ಹೆಚ್ ಬಸವರಾಜ್, ಎನ್ ಆರ್ ಮುರುಳಿ, ಸುಧಾಕರ್ ಶೆಟ್ಟಿ, ಅರವಿಂದ್, ಎ ಪಿ ಜಯಣ್ಣ, ಶಿವಾನಂದ್ ಸೇರಿದಂತೆ ಇತರರು ಇದ್ದರು.
