ಕಪ್ಪುಗುಡ್ಡೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಪದ ಕ್ರೀಡೆ ರಾಜ್ಯ ಮಟ್ಟದ ಹೋರಿ ಹಬ್ಬದಲ್ಲಿ ಮಿಂಚಿನ ಓಟ ಓಡುತ್ತಿದ್ದ ಹೋರಿಗಳ ಜತೆಗೆ ಬಲ ಪ್ರದರ್ಶನ ತೋರಲು ಪೈಲ್ವಾನರು ಮುಂದಾಗಿದ್ದರು. ಹೋರಿ ಪ್ರಿಯರ ಹರ್ಷೋದ್ಗಾರದ ಸಂಭ್ರಮದ ಜತೆಗೆ ಹೋರಿ ಹಬ್ಬ ವಿಜೃಂಭಣೆಯಿಂದ ಜರುಗಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಪ್ಪುಗುಡ್ಡೆಯಲ್ಲಿ ಹೋರಿ ಹಬ್ಬಕ್ಕೆ ಚಾಲನೆ ನೀಡಿದ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಲ್ ಜಿ ರಾಜಶೇಖರ ಕುಪ್ಪಗಡ್ಡೆ ಮಾತನಾಡಿ, “ಜನಪದ ಕ್ರೀಡೆ ಹೋರಿ ಹಬ್ಬವನ್ನು ಉಳಿಸಿ ಬೆಳೆಸಬೇಕು. ಕಮಿಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ” ಎಂದು ಹೋರಿ ಮಾಲೀಕರಿಗೆ ತಿಳಿಸಿದರು.
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆ್ಯಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.
ಅಖಾಡದಲ್ಲಿ ಹಂಸಭಾವಿಯ ಕರ್ನಾಟಕ ನಂದಿ, ಹರಗಿ ವಾರಸ್ದಾರ ಅಕ್ಕಿಆಲೂರಿನ ಹೈಸ್ಪೀಡ್ ಪೈಲ್ವಾನ್, ಸಮನವಳ್ಳಿ ಹಠವಾದಿ, ಕುಬಟೂರು ರಾಜಹಂಸ, ಮಲ್ಲಿಗೇನಳ್ಳಿ ಶ್ರೀನಂದಿ, ಬಾಚಿಯ ಹಿಂದೂ ಸಾಮ್ರಾಟ, ಇಜಾರಿಲಕಮಾಪುರದ ಕೋಟಿಗೊಬ್ಬ, ನರಸಾಪುರ ಕಿಂಗ್, ಹಿಮ್ಮಡಿ ಪುಲಕೇಶಿ, ಆನವಟ್ಟಿ ಮಲೆನಾಡ ದಂಗೆ, ಹಿರೇಮಾಗಡಿ ಮಾಣಿಕ್ಯ, ಇಜಾರಿಲಕಮಾಪುರದ ಭರ್ಜರಿ, ಚಿಕ್ಕಮಾಕೊಪ್ಪದ ದೊಡ್ಮನೆ ಚಿನ್ನ, ಕೆಡಿಎಂ ಕಿಂಗ್, ಗೆಜ್ಜೆಹಳ್ಳಿ ಎನ್ಕೌಂಟರ್, ಆನವಟ್ಟಿ ಯುವರತ್ನ, ಮರೂರು ತಾರಕಾಸುರ, ಹಾವೇರಿಯ ನಾಯಕನ ಅಧಿಕಾರ, ಸೊರಬದ ರಾವಣ, ಚಿಕ್ಕಾವಲಿ ನಾಗ, ಸಾರೆಕೊಪ್ಪದ ಸುನಾಮಿ, ಕುಪ್ಪಗಡ್ಡೆ ಗ್ರಾಮದ ಹೋರಿಗಳಾದ ಪವರ್ ಸ್ಟಾರ್, ಯಜಮಾನ, ಸೂಪರ್ ಸ್ಟಾರ್, ಕಾಲಭೈರವ, ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪ್ರಚೋದನಕಾರಿ ಭಾಷಣ; ಈಶ್ವರಪ್ಪ ವಿರುದ್ಧ ಮತ್ತೊಂದು ಸಮೋಟೊ ಕೇಸ್ ದಾಖಲು
ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.
ವಿಶೇಷವಾಗಿ ಹಂಸಭಾವಿಯ ಕರ್ನಾಟಕ ನಂದಿ ಹೆಸರಿನ ಹೋರಿಯು 140 ಬಾರಿ ಅಖಾಡದಲ್ಲಿ ಓಟ ನಡೆಸಿದ್ದು, ಹೋರಿ ಆಗಮಿಸುತ್ತಿದ್ದಂತೆ ಹೋರಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿಯಿಂದ ಗುರುತಿಸಲಾಯಿತು. ಅಖಾಡದ ಎರಡೂ ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.