ಪ್ರಸ್ತುತ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಹೆಚ್ಚು ಜ್ಞಾನ ಹೊಂದಿರುವವರು ಜಗತ್ತನ್ನೇ ಗೆಲ್ಲಬಲ್ಲರು ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಪಾಲಿಕೆ ಹಾಗೂ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಜ್ಞಾನ ದಸರಾ ಪ್ರಯುಕ್ತ ನಿನ್ನೆ ಆಯೋಜಿಸಿದ್ದ ಬದುಕಿನ ಅವಕಾಶಗಳ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.
“ಕಾಲೇಜು ಶಿಕ್ಷಣ ಪಡೆಯುತ್ತಿರುವಾಗಲೇ ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಂಕಲ್ಪ ಹೊಂದಬೇಕು. ಪದವಿ ಪಡೆಯುವ ಅವಧಿಯು ಜೀವನದ ಅಮೂಲ್ಯ ಸಮಯ. ಈ ಹಂತದಲ್ಲಿ ನೀವು ಸರಿಯಾದ ಮಾರ್ಗದಲ್ಲಿ ಮುನ್ನಡೆಯಬೇಕು. ಉನ್ನತ ಸಾಧನೆ ಮಾಡಬೇಕು” ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, “ಬದುಕಿನಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ ಅತ್ಯಂತ ಮುಖ್ಯ. ಎಂತಹ ಕಷ್ಟಕರ ಸನ್ನಿವೇಶ ಎದುರಾದರೂ ಸಮರ್ಥವಾಗಿ ನಿಭಾಯಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಕಂಡಿರುವ ಕನಸು ನನಸು ಮಾಡಿಕೊಳ್ಳಲು ಹಂತ ಹಂತವಾಗಿ ಯೋಜನೆ ಮಾಡಿ ಪೂರ್ಣಗೊಳಿಸುವ ಮೂಲಕ ಗುರಿ ತಲುಪಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅರಣ್ಯ ಭೂಮಿ ಉಳಿಸಿ, ಖಾಸಗಿ ವ್ಯಕ್ತಿಗಳ ಹುನ್ನಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹ
ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿ, “ಮೌಲ್ಯಾಧಾರಿತ ಜೀವನ ಕಟ್ಟಿಕೊಳ್ಳಲು ಯುವಜನರು ಆಲೋಚನೆ ನಡೆಸಬೇಕು. ಹಿರಿಯರು ತೋರಿಸಿರುವ ಮಾರ್ಗದರ್ಶನದಲ್ಲಿ ಸಂಸ್ಕೃತಿ ಪರಂಪರೆಯ ಆಚರಣೆಗಳನ್ನು ಪಾಲಿಸಬೇಕು. ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಶಿವಮೊಗ್ಗದ ಕೀರ್ತಿ ಹೆಚ್ಚಿಸಬೇಕು” ಎಂದರು.