ಶಿವಮೊಗ್ಗ, ಮುಖ್ಯಮಂತ್ರಿಗಳು 7 ತಿಂಗಳ ಹಿಂದೆ ತೀರ್ಮಾನಿಸಿ, ಘೋಷಿಸಿದ ಆದೇಶಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಮತ್ತು ಕೆಳಗಿನ ಹಕ್ಕೊತ್ತಾಯಗಳಿಗೆ ಆಗ್ರಹಿಸಿ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿರುತ್ತಾರೆ.
ರಾಜ್ಯಮಟ್ಟದ ಈ ಹೋರಾಟ ಆ. ೧೨ ರಿಂದ ೧೪ ರವರೆಗೆ ರಾಜ್ಯವ್ಯಾಪಿ ಅಹೋರಾತ್ರಿ ಹೋರಾಟ, ಧರಣಿ ನಡೆಸಲಾಗುವುದೆಂದು ಸಂಘದ ರಾಜ್ಯಾಧ್ಯಕ್ಷೆ ಡಿ. ನಾಗಲಕ್ಣ್ಮೀ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ “ಮಾತುಕೊಟ್ಟಂತೆ ನಡೆದುಕೊಳ್ಳಬೇಕೆಂದುರು.ಈ ವರ್ಷದ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಳ ಮಾಡಬೇಕು. ಆದರೆ ಈ ಬಜೆಟ್ನಲ್ಲಿ ಕೇವಲ 15004 ಆಶಾಗಳಿಗೆ ಕಡಿಮೆ ಇದ್ದ ಆಧಾರಿತ ಪ್ರೋತ್ಸಾಹಧನ ರೂ. ಒಂದು ಸಾವಿರ ಮಾತ್ರ ನೀಡಲಾಗಿದೆ ಎಂದರು.
ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10,000 ಗಳ ಗೌರವಧನವನ್ನು ನೀಡಲಾಗುವುದು. ರೂ.10,000 ಹೊರತುಪಡಿಸಿ, ಕಾಂಪೋನೆಂಟ್ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ಸ್ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, 10,000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಕೂಡಲೇ ಸರ್ಕಾರದಿಂದ ಆದೇಶಿಸಬೇಕು ಎಂದರು.
ಈ ತೀರ್ಮಾನಗಳನ್ನು ಆರೋಗ್ಯ ಇಲಾಖೆಯ ಆಯುಕ್ತರು ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್ ಗೆ ಆಗಮಿಸಿ ಸಾವಿರಾರು ಆಶಾಗಳ ಮುಂದೆ ಬಂದು ಘೋಷಣೆ ಮಾಡಿದರು. ನಂತರ ಹೋರಾಟ ಹಿಂತೆಗೆದುಕೊಳ್ಳಲಾಯಿತು. ಮಾಧ್ಯಮಗಳಲ್ಲೂ ಕೂಡ ಅಧಿಕೃತವಾಗಿ ಮುಖ್ಯಮಂತ್ರಿ ಘೋಷಿಸಿರುತ್ತಾರೆ. ಆಡಳಿತ ಪಕ್ಷದ ಹಲವಾರು ಸಚಿವರುಗಳು, ಶಾಸಕರು ಈ ಬಗ್ಗೆ ಪೋಸ್ಟಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಆದರೆ ನೋವಿನ ವಿಷಯವೆಂದರೆ ಇಲ್ಲಿಯವರಗೆ 7 ತಿಂಗಳು ಕಳೆದರೂ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ ಎಂದು ವಿಷಾದಿಸಿದರು. ಆಶಾಗಳಲ್ಲಿಯೇ ಒಬ್ಬರನ್ನು ಕಳೆದ 10 ವರ್ಷಗಳಿಂದ 20 ಆಶಾಗಳಿಗೆ ಒಬ್ಬರಂತೆ ಸುಮಾರು 2000 ಸುಗಮಕಾರರಾಗಿ ಕೆಲಸಕ್ಕೆ ಪಡೆದುಕೊಂಡು ಧಿಡೀರನೆ ತೆಗೆದು ಹಾಕಿರುವರು.
ಆದರೆ ಸೂಕ್ತ ಪರಿಹಾರ ನೀಡಿರುವುದಿಲ್ಲ. 6೦ವರ್ಷ ಆದವರನ್ನು ದಿಢೀರ್ ಅಂತ ತೆಗೆದುಹಾಕಲಾಗುತ್ತಿದೆ. ಇವರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದರು ಆಶಾ ಆನ್ಲೈನ್ ದಾಖಲಾತಿಯನ್ನು (ಆಶಾ ಸಾಫ್ಟ್) ಪರಿಶೀಲನೆಗೆ ತೆಗೆದುಕೊಳ್ಳಲಾಗಿದೆ. ಈಗಾಗಲೇ ಈ ಆನ್ಲೈನ್ ದಾಖಲಾತಿಯು ಸರಿಯಾಗಿ ದಾಖಲಾಗದಿರುವ ಬಗ್ಗೆ, ವೆರಿಫೈ ಮಾಡದಿರುವ ಬಗ್ಗೆ, ಹಲವಾರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸಂಘದಿಂದ ಹೋರಾಡುತ್ತಲೇ ಇದ್ದೇವೆ.
ಈಗ ಇದನ್ನು ಮಾದರಿಯಾಗಿ ಇಟ್ಟುಕೊಂಡಲ್ಲಿ ತಪ್ಪು ಮಾಹಿತಿಯಿಂದ ಆಶಾಗಳನ್ನು ಕೈಬಿಡುವಂತಾಗುತ್ತದೆ. ಈಗಾಗಲೇ ರಾಜ್ಯದ ಆಶಾಗಳು ಕೋಟ್ಯಂತರ ರೂ.ಗಳ ನಷ್ಟವನ್ನು ಈ ಆನ್ಲೈನ್ ದಾಖಲಾತಿಯಿಂದ ಅನುಭವಿಸುತ್ತಿದ್ದಾರೆ ಎಂದರು.