‘ನಾಡಿನೆಲ್ಲಡೆ ಹಸಿರು ಹಬ್ಬಬೇಕು, ಮಣ್ಣು ಫಲವತ್ತಾಗಿರಬೇಕು’ ಎನ್ನುವ ಆಶಯದೊಂದಿಗೆ ಸಾವಯವ ನರ್ಸರಿಯಲ್ಲಿ ತೊಡಗಿಸಿಕೊಂಡಿರುವ ಬೆಂ.ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಶಿವನಾಪುರ ರಮೇಶ್ ಅವರು ‘ತೇಜ ನರ್ಸರಿ’ ಮೂಲಕ ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಹೆಸರು ಮಾಡಿರುವ ಸಾವಯವ ಕೃಷಿಕ.
ತನ್ನ ಅಜ್ಜಿಯಿಂದ ಬಳುವಳಿಯಾಗಿ ಪಡೆದ ಕೃಷಿ ಜ್ಞಾನದಿಂದ ದೊಡ್ಡ ಸಾಧನೆ ಮಾಡಿದ್ದಾರೆ. ಸಾವಯವ ಪದ್ಧತಿಯಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವ ಹಾಗೂ ಅದೇ ಮಾದರಿಯಲ್ಲಿ ಬೆಳೆಸುವ ವಿಧಾನ ಕುರಿತು ಕೃಷಿಕರಿಗೆ ಮಾರ್ಗದರ್ಶನವನ್ನು ನೀಡುತ್ತ ಬಂದಿದ್ದಾರೆ.
ಮೂಲೆಗುಂಪಾಗುತ್ತಿದ್ದ ದೇವನಹಳ್ಳಿ ಚಕ್ಕೋತ ಹಣ್ಣನ್ನು ಮೂಲ ಸ್ವಾಧದಲ್ಲೇ ಅಭಿವೃದ್ಧಿಗೊಳಿಸಿ ವ್ಯಾಪಕ ಪ್ರಚಾರ ನೀಡಿ, ಬೆಳೆಯ ವಿಸ್ತೀರ್ಣಕ್ಕೆ ಕಾರಣರಾಗಿದ್ದಾರೆ. ರಮೇಶ್ ಅವರ ಪರಿಶ್ರಮ ಹಾಗೂ ಹೆಸರಘಟ್ಟ ಜಿಕೆವಿಕೆ ಸಂಸ್ಥೆಯ ಕೃಷಿ ವಿಜ್ಞಾನಿಗಳಿಂದ ದೇವನಹಳ್ಳಿಯ ಚಕ್ಕೋತ ಹಣ್ಣು ಭೌಗೋಳಿಕ ಸೂಚ್ಯಂಕ (ಜಿಐ) ಟ್ಯಾಗ್ ಪಡೆದಿದ್ದು ರಾಜ್ಯ ತೋಟಗಾರಿಕಾ ಕ್ಷೇತ್ರಕ್ಕೆ ಸಂದ ದೊಡ್ಡ ಗೌರವವಾಗಿದೆ.
ತೇಜ ನರ್ಸರಿ ಹಣ್ಣಿನ ಗಿಡಗಳನ್ನು ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ, ಬೆಂ.ಗ್ರಾಮಾಂತರ ಭಾಗದ ರೈತರು ಖರೀದಿಸುವ ಹಣ್ಣಿನ ಗಿಡವನ್ನು ಬೆಳೆಸುವ, ಮಣ್ಣಿನ ಫಲವತ್ತತೆ ಹೆಚ್ಚಿಸುವ, ಜೈವಿಕ ವಿಧಾನಗಳ ಮೂಲಕ ಕೀಟಗಳ ನಿರ್ವಹಣೆ ಸೇರಿದಂತೆ ಸಮಗ್ರ ಮಾಹಿತಿಯನ್ನು ತಿಳಿಸಿಕೊಡುವ ಮೂಲಕ ಸಾವಯವ ತೋಟಗಾರಿಕ ಕೃಷಿ ಉತ್ತೇಜಕರಾಗಿ ಕೆಲಸ ಮಾಡುತ್ತಿದ್ದಾರೆ.
ಕೃಷಿಯಿಂದ ವಿಮುಕರಾಗುತ್ತಿರುವ ಯುವ ಸಮುದಾಯವನ್ನು ಮರಳಿ ಮಣ್ಣಿನ ಕಡೆಗೆ ಬರುವಂತೆ ಮಾರ್ಗದರ್ಶನ ಮಾಡುವ ಕಾಯಕದಲ್ಲಿ ಸದಾ ನಿರತರಾಗಿರುವ ಶಿವನಾಪುರ ರಮೇಶ್ ಅವರು, ನಮ್ಮ ಮಣ್ಣಿನ ಫಲವತ್ತತೆ ಉಳಿದರೆ ಮಾತ್ರ ನಾಡಿನ ಪ್ರಾಣಿ, ಪಕ್ಷಿ, ಜನರ ಉಳಿವು ಎನ್ನುವ ಕಾಳಜಿಯೊಂದಿಗೆ ನಾಡಿನಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣವಾಗಲು ಶ್ರಮಿಸುತ್ತಿದ್ದಾರೆ.
ದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಸಹಜ ಸಮೃದ್ಧ ರೈತ ಉತ್ಪಾದಕ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿಯಾಗಿ, ಅಧ್ಯಕ್ಷರಾಗಿ, ಜೈವಿಕ ಕೃಷಿಕ್ ಸೊಸೈಟಿ ಸಂಸ್ಥಾಪಕ ಖಜಾಂಚಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಬೆಂಗಳೂರಿನ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಚಕ್ಕೋತ ಸೇರಿದಂತೆ ವಿವಿಧ ಫಲೋತ್ಪನ್ನಗಳನ್ನು ಪ್ರದರ್ಶಿಸಿ, 6 ಬಾರಿ ಬಹುಮಾನ ಗಳಿಸಿದ್ದಾರೆ. ಎಂ.ಎಚ್.ಮರಿಗೌಡ ರಾಜ್ಯ ಪ್ರಶಸ್ತಿ, ಡಾ.ಜಿ.ಮಾದೇಗೌಡ ಪ್ರತಿಷ್ಠಾನದ ಸಾವಯವ ಕೃಷಿಕ ರಾಜ್ಯ ಪ್ರಶಸ್ತಿ, ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.