ಮೂಲಭೂತ ಹಕ್ಕುಗಳಾದ ವಿದ್ಯುತ್, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ ಸೌಲಭ್ಯಗಳನ್ನು ಹೋರಾಡಿ ಪಡೆಯಲು ಇಂದು ಸಂಘಟಿತರಾಗುವ ಅವಶ್ಯಕತೆ ಇದೆ ಎಂದು ಮಂಡ್ಯ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಂ. ಸಿದ್ದರಾಜು ತಿಳಿಸಿದರು.
ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆಯಲ್ಲಿ ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಹಕ್ಕಿ ಪಿಕ್ಕಿ ಸಮುದಾಯ ನಿವಾಸಿಗಳ ಒಕ್ಕೂಟದ ನಾಮಫಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ಜನಶಕ್ತಿಯ ಮಂಡ್ಯದ ಎಲ್ಲಾ ಪದಾಧಿಕಾರಿಗಳ ಒಗ್ಗಟ್ಟಿನಿಂದ ಶ್ರೀರಂಗಪಟ್ಟಣ ತಾಲೊಕಿನ ಮೊಗ್ಗರಳ್ಳಿ ಮಟ್ಟಿಯಿಂದ ಈ ಸಮುದಾಯವನ್ನು 2016 ರಲ್ಲಿ ದೌರ್ಜನ್ಯ ದಿಂದ ಒಕ್ಕಲಿಬ್ಬಿಸಿದ ಸಂದರ್ಭದಲ್ಲಿ ಕರ್ನಾಟ ಜನಶಕ್ತಿಯ ನೇತೃತ್ವದಲ್ಲಿ ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಅಹೋ ರಾತ್ರಿ ಧರಣಿ ನಡೆಸಿ, ಎರಡು ಎಕ್ಕರೆ ಸರ್ಕಾರಿ ಜಮಿನನ್ನು47 ಕುಟುಂಬಗಳಿಗೆ 30×40 ರಂತೆ ಜಿಲ್ಲಾಡಳಿತದ ವತಿಯಿಂದ ಮಂಜೂರು ಮಾಡಿಸಲಾಯಿತು. ಈ ಕುಟುಂಬಗಳಿಗೆ 36 ಜನರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಉಳಿದ 12 ಕುಟುಂಬಗಳಿಗೆ ಹಕ್ಕು ಪತ್ರ ಪಡೆಯುವ ಜೊತೆಗೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಸಕರು ಈ ಸಮುದಾಯಕ್ಕೆ ಸ್ಪಂದಿಸಿ ವಸತಿ ಮತ್ತು ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲೆ ಮತ್ತು ಮೂಲಭೂತ ಹಕ್ಕುಗಳಾದ ವಿದ್ಯುತ್, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ ಸೌಲಭ್ಯಗಳನ್ನು ಹೋರಾಡಿ ಪಡೆಯಲು ಇಂದು ಸಂಘಟಿತರಾಗಬೇಕು. ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಯ ಜೊತೆಗೆ ನಾಗರಿಕರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿ ರಾಜ್ಯ ಮುಖಂಡರಾದ ಕುಮಾರ್ ಸಮತಳ, ಈ ಸಮುದಾಯಗಳು ಹರಿಯುವ ನದಿಯಂತೆ. ಒಂದು ಕಡೆ ನೆಲೆ ನಿಲ್ಲದೆ ಇರುವುದರಿಂದ ಸರ್ಕಾರದ ಸಮರ್ಪಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ನೆಲೆ ನಿಂತರೆ ನಮಗೆ ನಿವೇಶನ ವಸತಿ ಸೇರಿ ಹಲವು ಸೌಲಭ್ಯಗಳ ಜೊತೆಗೆ ಉಳುಮೆ ಮಾಡಲು ಭೂಮಿಯನ್ನು ಸಹ ಪಡೆಯಬಹುದು. ತಿಪಟೂರು, ಗೌರಿಬಿದನೂರು ತುಮಕೂರು ಮಂಡ್ಯದ ನಾಗಮಂಗಲ ಪಾಂಡವಪುರ ಸೇರಿದಂತೆ ಹಲವು ಕಡೆ ಸರ್ಕಾರದ ವತಿಯಿಂದ ಎರಡರಿಂದ ಮೂರು ಎಕ್ಕರೆ ಭೂಮಿ ಸಹ ಸಿಕ್ಕಿದೆ ಎಂದರು.
ರೈತ ಹಾಗೂ ಪ್ರಗತಿಪರ ಹೋರಾಟಗಾರರಾದ ನಿವಾಸ್ ಕಂದೇಗಾಲ ಮಾತನಾಡಿ, “ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ವತಿಯಿಂದ ಭೂಮಿ ವಸತಿ ನಿವೇಶನ ಸಿಗಬೇಕೆಂದು ಹಕ್ಕಿಪಿಕ್ಕಿ ಸಮುದಾಯಗಳಾದ ಹುಣಸೂರು, ಪಿರಿಯಾಪಟ್ಟಣ, ಟೈಗರ್ ಬ್ಲಾಕ್ ಮತ್ತು ಶಿಕಾರಿಪುರ ಎನ್ನುವ ಹಕ್ಕಿ ಪಿಕ್ಕಿ ಹಾಡಿಗಳಲ್ಲಿ ಹಲವು ಹೋರಾಟಗಳನ್ನು ಮಾಡಿ ಬದುಕಿಗೆ ಬೇಕಾದ ಹಲವು ಸೌಲಭ್ಯಗಳನ್ನು ಸಂಘಟಿತ ಹೋರಾಟದಿಂದ ಪಡೆಯಲು ಸಾಧ್ಯ. ಹಾಗಾಗಿ ತಾವೆಲ್ಲರೂ ಒಟ್ಟುಗೂಡಿ ಹೋರಾಡಿದರೆ ನಮಗೆ ಎಲ್ಲಾ ತರಹದ ಹಕ್ಕುಗಳು ಸಿಗುತ್ತದೆ ಎಂದು ತಿಳಿಸಿದರು.
ಹಿರಿಯ ಹೋರಾಟಗಾರರಾದ ಮರಿಯಪ್ಪ ಅವರು ಮಾತನಾಡಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಲಂ ಜನರನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಹೋರಾಡಿ ನಿವೇಶನ ವಸತಿ ಹಕ್ಕುಪತ್ರ ಸೇರಿದಂತೆ ಸಾವಿರಾರು ಜನರಿಗೆ ತಲುಪುವ ಹೋರಾಟ ಮಾಡಲಾಗಿದೆ ಎಂದು ತಿಳಿಸಿದರು.

ಹಕ್ಕಿ ಪಕ್ಕಿ ಅಲೆಮಾರಿ ಸಮುದಾಯದ ಮಕ್ಕಳು ಮೊದಲು ಶಿಕ್ಷಣ ಕಲಿಯಬೇಕು. ಶಿಕ್ಷಣದಿಂದ ಈ ಸಮುದಾಯಕ್ಕೆ ಹಿಡಿದಿರುವ ಶಾಪವನ್ನು ವಿಮೋಚನಾಗೊಳಿಸಬಹುದು ಮತ್ತು ಇವತ್ತಿನ ಮಕ್ಕಳು ಮುಂದಿನ ನಾಡು ಆಳುವ ಅಧಿಕಾರಿಗಳಾಗಬೇಕು. ಪ್ರತಿಯೊಂದು ಮಗು ಸಹ ತಹಶೀಲ್ದಾರ್, ಡಾಕ್ಟರ್, ಟೀಚರ್ ಹಾಗೂ ಜಿಲ್ಲಾಧಿಕಾರಿಯು ಸಹ ಅಗಬೇಕೆಂದು ಹಕ್ಕಿ ಪಿಕ್ಕಿ ಸಮುದಾಯದ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿಸಿದರು.
ರಾ.ರೈ ಸಂಘದ ಸ್ಥಳಿಯ ಪಂಚಾಯ್ತಿ ಮಾಜಿ ಸದಸ್ಯರಾದ ಕೃಷ್ಣ ಮಾತನಾಡಿ, ಈ ಸಮುದಾಯಕ್ಕೆ ಹಲವು ರೀತಿಯ ದಾಖಲೆಗಳು ನೀಡಿ ಇವರಿಗೆ ಬೇಕಿರುವ ಸೌಲಭ್ಯಗಳನ್ನು ಪಡೆಯಲು ಸಹಕಾರ ನೀಡಿದ್ದೆ. ಮುಂದೆಯೂ ಸಹ ಈ ಸಮುದಾಯದ ಪರವಾಗಿ ಜೊತೆಯಲ್ಲಿರುತ್ತೇನೆಂದು ಅಶಯ ನುಡಿಗಳನ್ನು ನುಡಿದರು.
ಈ ಸಂದರ್ಭದಲ್ಲಿ ಹಕ್ಕಿ ಪಿಕ್ಕಿ ಸಮುದಾಯದ ಅಧ್ಯಕ್ಷರಾದ ಪ್ರಭು, ಗೌರವಾಧ್ಯಕ್ಷರಾದ ರೈಸ್, ಕಾರ್ಯದರ್ಶಿ ಚಿಕ್ಕೂ ಹಾಗೂ ಪದಾಧಿಕಾರಿಗಳಾದ ರುಖೇಶ್, ಕನಿರಾಜು, ಶಶಿಕುಮಾರ್, ಚೆಂಗುಮಣಿ, ಮಹಿಳಾ ಮುಖಂಡರಾದ ಶಾಂತಿ, ಸ್ವಾತಿ, ಭವಾನಿ, ವರಲಕ್ಷ್ಮಿ ಭಾಗವಹಿಸಿದ್ದರು.

