ಇತ್ತಿಚೀನ ದಿನಗಳಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದಬ್ಬಾಳಿಕೆ, ಅತ್ಯಾಚಾರ, ಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹಾಗೂ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿ ಕೊಡಲು ಮಹಿಳಾ ನ್ಯಾಯಾಲಯ ಸ್ಥಾಪಿಸಬೇಕು ಎಂದು ರೈತಸಂಘ ಮುಖಂಡರಾದ ಸುನಂದಾ ಜಯರಾಮ್ ಒತ್ತಾಯಿಸಿದರು.
ಮಂಡ್ಯ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಅತ್ಯಾಚಾರ ವಿರೋಧಿ ಆಂದೋಲನದ ಭಾಗವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಿಗೆ ಕೊನೆಯಾಡಲು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಒಗ್ಗೂಡಿಸಿ ಕೆಲಸ ಮಾಡಬೇಕೆಂದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಜಿ ಮಾತನಾಡಿ, ಇತ್ತೀಚೆಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಿರ್ಭಯ ಪ್ರಕರಣದಷ್ಟೇ ಗಂಭೀರವಾದ ರೀತಿಯಲ್ಲಿ ಅತ್ಯಾಚಾರ, ಕೊಲೆ ಮಾಡಿರುವ ಪ್ರಕರಣ ದೇಶದ ಎಲ್ಲೆಡೆ ಸುದ್ದಿ ಆಗಿ ಪ್ರತಿಭಟನೆಗಳು ದಾಖಲಾಗುತ್ತಿರುವುದನ್ನು ನಾವು ನೋಡುತಿದ್ದೇವೆ. ಈ ಘಟನೆ ಮಾಸುವ ಮೊದಲೇ ಇದೇ ತಿಂಗಳ 18 ರಂದು ಬೆಂಗಳೂರಿನ ಎಚ್ಎಸ್ಆರ್ ಲೇ ಔಟಲ್ಲಿ ಸಾಮೂಹಿಕ ಅತ್ಯಾಚಾರದ ಹೀನ ಘಟನೆ ನಡೆದಿದೆ ಎಂದು ದೂರಿದರು.
ಪ್ರತಿನಿತ್ಯ ಮಹಿಳೆಯರ ಮೇಲೆ ಆಗುತ್ತಿರುವ ದಬ್ಬಾಳಿಕೆ, ಅತ್ಯಾಚಾರ ನಿಲ್ಲಬೇಕೆಂದು ಹೊರಾಡುತ್ತಿದ್ದೇವೆ. ಆದರೂ ಕೂಡ ನಮ್ಮ ಸಮಾಜ ಆತಂಕಕಾರಿ ಘಟ್ಟವನ್ನು ಮುಟ್ಟಿದೆ. ಇಂತ ಘಟನೆಗಳು ನಡೆದಾಗ ರಾಜಕೀಯ ಕಾರಣಗಳಿಗೆ ಬಳಕೆ ಮಾಡುವ ಕಡೆಗೆ ಆಳುವ ಸರಕಾರಗಳು ಹೊರಟಿವೆ. ಒಕ್ಕೂಟ ಹಾಗೂ ನಾಡ ಸರಕಾರಗಳು ಕೆಸರೆರಚಾಟ ನಿಲ್ಲಿಸಿ ಹೆಣ್ಣು ಮಕ್ಕಳಿಗೆ ಭದ್ರತೆ ಒದಗಿಸುವ ಕಡೆ ಗಮನಹರಿಸಲು ಒತ್ತಾಯಿಸಿದರು.
ವಿಮೋಚನಾ ಸಂಘಟನೆ ಜನಾರ್ಧನ್ ಮಾತನಾಡಿ, ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ. 1000 ಜನ ಗಂಡಸರಿಗೆ 865 ಹೆಣ್ಣುಮಕ್ಕಳ ಅನುಪಾತದಲ್ಲಿದೆ .ಈ ಬಗ್ಗೆ ಬೇರೆ ಬೇರೆ ಹಂತಗಳಲ್ಲಿ ಹೋರಾಟ, ಆಂದೋಲನ ನಡೆಸುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದರು. ಸಿಐಟಿಯು ಮುಖಂಡರಾದ ಸಿ.ಕುಮಾರಿ ಧ್ವನಿಗೂಡಿಸಿದರು.
ಅಭಿಷೇಕ್ ಎಂಬಾತ ಹಾಡ್ಯದ ಆಲೆಮನೆ, ಪಾಂಡವಪುರ, ನಾಗಮಂಗಲ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅವನಿಗೆ ಸ್ಕ್ಯಾನಿಂಗ್ ಯಂತ್ರ ಬಂದದ್ದಾದರೂ ಎಲ್ಲಿಂದ ಎಂಬುದರ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೇಕು. ಕೂಡಲೇ ಆತನನ್ನು ಬಂಧಿಸಿ ಕಠಿಣ ದಂಡನೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಹವಾಮಾನ ವೈಪರೀತ್ಯವು ಕೃಷಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ : ವಿಜ್ಞಾನಿ ಡಾ. ಸುಧಿ ಶೇಷಾದ್ರಿ
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಲತಾ ಶಂಕರ್, ಮಹಿಳಾ ಮುನ್ನಡೆ ಸಂಘಟನೆ ಶಿಲ್ಪ, ವಿಮೋಚನಾ ಸಂಘಟನೆಯ ಇಂಪನ ಭಾಗವಹಿಸಿದ್ದರು.