ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿ ಅವ್ಯವಹಾರದ ಬಗ್ಗೆ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ ಇವರ ನೇತೃತ್ವದಲ್ಲಿ ಕಳೆದ ಇಪ್ಪತ್ತೊಂದು ದಿನಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಉಡುಪಿ ಜಿಲ್ಲೆಯ ಸಂಸದರಾಗಲಿ ಅಥವಾ ಜಿಲ್ಲೆಯ ಶಾಸಕರುಗಳಾಗಲಿ ಇಲ್ಲಿಯವರೆಗೆ ಭೇಟಿ ನೀಡಲಿಲ್ಲ ಇದಕ್ಕೆ ಕಾರಣ ಏನು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿಯ ಸಂಸದರು ಹಾಗೂ ಬಿಜೆಪಿಯ ಶಾಸಕರುಗಳು ರೈತ ವಿರೋಧಿಗಳೇ ? ಅಥವಾ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಅವ್ಯವಹಾರಕ್ಕೆ ನಿಮ್ಮ ಸಮ್ಮತಿ ಇದೆಯಾ? ಎಂಬುದನ್ನು ಜಿಲ್ಲೆಯ ಎಲ್ಲಾ ಜನಸಾಮಾನ್ಯರಿಗೆ ಹಾಗೂ ರೈತರಿಗೆ ನೀವು ತಿಳಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕೋಳಿ ಅಂಕದ ಬಗ್ಗೆ ಮಾತ್ರ ಮಾತನಾಡಿದ ಉಡುಪಿ ಜಿಲ್ಲೆಯ ಬಿಜೆಪಿಯ ಶಾಸಕರುಗಳು ರೈತರು ನಡೆಸುತ್ತಿರುವ ಅಹೋರಾತ್ರಿಧರಣಿಯ ಬಗ್ಗೆ ಚಕಾರ ಎತ್ತದಿರುವುದು ಜಿಲ್ಲೆಯ ರೈತ ಬಾಂಧವರು ಹಾಗೂ ಜನಸಾಮಾನ್ಯರು ಸಂಶಯ ಪಡುವಂತಾಗಿದೆ ಎಂದು ಹೇಳಿದ್ದಾರೆ.
ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಈ ಅವ್ಯವಹಾರ ಆಗ ನಮ್ಮ ಜಿಲ್ಲೆಯ ಈಗಿನ ಸಂಸದರು ಹಾಗೂ ಉಡುಪಿ ಜಿಲ್ಲೆಯ ಓರ್ವ ಶಾಸಕರು ರಾಜ್ಯದ ಸಚಿವರುಗಳಾಗಿದ್ದರು ಅವರು ಈ ಬಗ್ಗೆ ಚಕಾರ ಎತ್ತದಿರುವುದು ನೋಡಿದರೆ ಈ ಅವ್ಯವಹಾರ ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆಯೇ ಎಂಬುದನ್ನು ಉಡುಪಿ ಜಿಲ್ಲೆಯ ಜನರಿಗೆ ತಿಳಿಸಿ ಸಂಶಯ ದೂರ ಮಾಡಲಿ ಎಂದಿದ್ದಾರೆ.

