‘ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯ 2023ರ ವರದಿ ಪ್ರಕಟಗೊಂಡಿದ್ದು, ದಾವಣಗೆರೆ ನಗರವು 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ವಿಭಾಗದಲ್ಲಿ ರಾಜ್ಯದಲ್ಲಿ 6ನೇ ಸ್ಥಾನ ಪಡೆದಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
“ದೇಶದ ನಗರಗಳಲ್ಲಿ ಯಾವುದು ಹೆಚ್ಚು ಸ್ವಚ್ಛ ಎಂಬುದನ್ನು ಈ ವರದಿಯು ನಿರ್ಧರಿಸಿದ್ದು, ಕಳೆದ ಬಾರಿ ರಾಜ್ಯ ಮಟ್ಟದಲ್ಲಿ 12ನೇ ಸ್ಥಾನ ಪಡೆದಿದ್ದ ದಾವಣಗೆರೆಯು ಈ ಬಾರಿ 6ನೇ ಶ್ರೇಯಾಂಕ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.
“ರಾಷ್ಟ್ರೀಯ ಮಟ್ಟದಲ್ಲಿ ನಗರವು ಕಳೆದ ಬಾರಿ 220ನೇ ಶ್ರೇಯಾಂಕ ಪಡೆದಿತ್ತು. ಈ ಬಾರಿ 169ನೇ ಶ್ರೇಯಾಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ. ಶಾಸಕರು, ಮೇಯರ್, ಜಿಲ್ಲಾಧಿಕಾರಿ, ಪಾಲಿಕೆಯ ವಿವಿಧ ಸಮಿತಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನಗರವು ಉತ್ತಮ ಶ್ರೇಯಾಂಕ ಪಡೆಯಲು ಸಹಕಾರಿಯಾಗಿದೆ. ಇದೇ ಮೊದಲ ಬಾರಿಗೆ ದಾವಣಗೆರೆ ನಗರಕ್ಕೆ ‘ಸ್ಟಾರ್ ರೇಟಿಂಗ್’ ಕೂಡ ದೊರೆತಿದೆ” ಎಂದು ಮಾಹಿತಿ ಹಂಚಿಕೊಂಡರು.
“ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ₹500 ರಿಂದ ₹10,000 ದಂಡ ವಿಧಿಸಲು ಅವಕಾಶ ಇದೆ. ರಸ್ತೆಗಳು, ವೃತ್ತಗಳು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಪಾಲಿಕೆಯ ಆರೋಗ್ಯ ನಿರೀಕ್ಷಕರು ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ” ಎಂದು ತಿಳಿಸಿದರು.
“ನಗರದಲ್ಲಿ ನಿತ್ಯ 170 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಪಾಲಿಕೆಯಲ್ಲಿ ಕಸ ಸಂಗ್ರಹಿಸುವ 93 ಆಟೊಗಳಿವೆ. ನಗರದ ಜನಸಂಖ್ಯೆಗೆ ಅನುಗುಣವಾಗಿ 150 ಆಟೊಗಳ ಅಗತ್ಯವಿದೆ. ಹಂತ ಹಂತವಾಗಿ ಆಟೊಗಳನ್ನು ಖರೀದಿಸಲಾಗುವುದು. ನಗರದಲ್ಲಿ 1.61 ಲಕ್ಷ ಆಸ್ತಿ ಆನ್ಲೈನ್ ಆಗಿದೆ. ನಮೂನೆ 2ನ್ನು ಆನ್ಲೈನ್ನಲ್ಲೇ ಪಡೆಯಬಹುದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಿಯಾಂಕ ಗಾಂಧಿ ಹೇಳಿದಂತೆ ಆರನೇ ಗ್ಯಾರಂಟಿ ಜಾರಿಗೆ ತರಬೇಕು; ಬಿಸಿಯೂಟ ತಯಾರಕರ ಆಗ್ರಹ
“ದಾವಣಗೆರೆ ನಗರದಲ್ಲಿ 45,000 ಖಾಲಿ ನಿವೇಶನಗಳಿವೆ. ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡುವುದು ಮಾಲೀಕರ ಜವಾಬ್ದಾರಿಯಾಗಿದೆ. ವರ್ಷಕ್ಕೊಮ್ಮೆ ಕಡ್ಡಾಯವಾಗಿ ಖಾಲಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಬೇಕು. ಸ್ವಚ್ಛತೆ ಕಾಪಾಡದ ನಿವೇಶನಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು” ಎಂದು ಎಚ್ಚರಿಸಿದರು.
ಸಬೆಯಲ್ಲಿ ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯರುಗಳಾದ ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ಎ ನಾಗರಾಜ್ ಇದ್ದರು.