ಈಗ ನಾವು ಕಾರ್ಪೋರೇಟ್ಸ್ ರಾಕ್ಷಸರೊಂದಿಗೆ ಹೋರಾಡಬೇಕಿದೆ. ಹಾಗಾಗಿ ಈ ದೊಡ್ಡ ಹೊಸೂರು ಸತ್ಯಾಗ್ರಹ ದೇಶದಾದ್ಯಂತ ಹಬ್ಬಲಿ, ರೈತರ ಜೀವನದಲ್ಲಿ ಹಸನತೆಯನ್ನು ತರಲಿ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರೀಯ ಸಂಯೋಜಕ ಬಸವರಾಜ ಪಾಟೀಲ್ ವೀರಾಪುರ ಹಾರೈಸಿದರು.
ಗಾಂಧೀ ಸಹಜ ಬೇಸಾಯ ಆಶ್ರಮದ ವತಿಯಿಂದ ‘ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದ ಹ್ಯಾಂಡ್ ಪೋಸ್ಟ್ ನ ದೊಡ್ಡ ಹೊಸೂರಿನ 3ನೇ ದಿನದ ಸತ್ಯಾಗ್ರಹ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಮನೆಗಳಿಗೆ ಅಪರಿಚಿತರು ದಾರಿತಪ್ಪಿ ಬಂದರೂ ಊಟಕ್ಕೆ ಬಡಿಸಿಯೇ ಕಳುಹಿಸುತ್ತಿದ್ದರು. ಈ ನಮ್ಮ ಸಂಸ್ಕೃತಿಯು ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ವ್ಯಾಪಾರಕ್ಕಾಗಿ ಬಂದಿದ್ದ ಈಸ್ಟ್ ಇಂಡಿಯಾ ಕಂಪನಿಗಳು ಜಾಗತೀಕರಣ ಹಾಗೂ ಉದಾರೀಕರಣದ ಹೆಸರಿನಲ್ಲಿ ಭಾರತವನ್ನು ಮತ್ತೆ ಪ್ರವೇಶಿಸುತ್ತಿವೆ. ನಾವು ದೇಶಿ ಅಸ್ಮಿತೆಯನ್ನು ಉಳಿಸಿಕೊಳ್ಳಲಾರದ ಸ್ಥಿತಿಗೆ ತಲುಪಿದ್ದೇವೆ. ರೈತರ ಮುಗ್ದತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಗಳು ಕೃಷಿಯಲ್ಲಿ ಜೀವ ವಿರೋಧಿ ತಂತ್ರಜ್ಞಾನವನ್ನು ಪ್ರಯೋಗ ಮಾಡಿ ದ್ರೋಹ ಎಸಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಒಳಗೊಂಡಿರುವ ನಮ್ಮ ಕೃಷಿಯ ಮೂಲ ಉದ್ದೇಶವನ್ನೇ ಉದಾರೀಕರಣ ನೀತಿ ಮರೆಮಾಚಿದೆ. ಕೈಗಾರಿಕಾ ಕ್ರಾಂತಿಯ ದುಷ್ಪರಿಣಾಮದಿಂದಾಗಿ ಕೃಷಿ ಹಣ ಮಾಡುವ ಕ್ಷೇತ್ರವಾಗಿ ಮಾರ್ಪಟ್ಟಿದೆ, ರೈತರೂ ಬಂಡವಾಳಿಗರಾಗಿ ರೂಪುಗೊಳ್ಳುತ್ತಿದ್ದಾರೆ ಎಂದರು.
ಆಧುನಿಕತೆಯು ಹಲವು ಸವಾಲುಗಳನ್ನು ಮುಂದಿಟ್ಟಿದೆ. ರೈತರ ಮುಂದೆ ಶ್ರೀಮಂತಿಕೆಯ ಆಶಾಗೋಪುರಗಳನ್ನು ನಿರ್ಮಿಸಲಾಗಿದೆ. ದೇಶದಲ್ಲಿ 82 ರೀತಿಯ ಸಾಸಿವೆ ತಳಿಗಳಿವೆ. ಉತ್ತರ ಭಾರತದಲ್ಲಿ ಅಡುಗೆಗೆ ಪ್ರಧಾನವಾಗಿ ಸಾಸಿವೆ ಎಣ್ಣೆಯನ್ನು ಬಳಸಲಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಕಂಪನಿಗಳು ಸಾಸಿವೆ ಮಾರುಕಟ್ಟೆ ವ್ಯವಸ್ಥೆಯನ್ನು ತಮ್ಮ ವಶ ಮಾಡಿಕೊಳ್ಳಲು ಹೊರಟಿವೆ. ಭಾರತೀಯ ಕೃಷಿಯ ಬೀಜ ಸ್ವಾಮ್ಯ ಸಾಧಿಸಲು ಹಾತೊರೆಯುತ್ತಿರುವ ಕಂಪನಿಗಳು ಈಗ ಕುಲಾಂತರಿ ಸಾಸಿವೆ ಪರಿಚಯಿಸಲು ತುದಿಗಾಲಿನಲ್ಲಿ ನಿಂತಿವೆ ಎಂದರು.
ಮಾನ್ಸೆಂಟೋ ಮತ್ತು ಸಿಂಜೆಂಟಾ ಕಂಪನಿಗಳ ಮುಂದೆ ಕೃಷಿಯ ಮೂಲ ಉದ್ದೇಶವೇ ಗೌಣವಾಗಿದೆ. ಸಣ್ಣ ಸಣ್ಣ ಚಳವಳಿಗಳನ್ನು ರೂಪಿಸುವ ಮೂಲಕ ಇದನ್ನು ತಡೆಯಲು ಸಾಧ್ಯವಿದೆ. ಜನರೂ ಆಹಾರ ಗುಣಮಟ್ಟದ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದು, ಗಾಣದ ಎಣ್ಣೆಯನ್ನು ಬಳಸಲು ಶುರು ಮಾಡಿದ್ದಾರೆ. ಹೀಗಾಗಿ ಜನರ ಮುಂದೆ ಹೋಗಲು ನಮಗೆ ಇನ್ನೂ ಅವಕಾಶವಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಚಿಗುರು ಯುವಜನ ಸಂಘದಿಂದ ‘ಕುಲಾಂತರಿ ತಳಿಯ ಆಹಾರ ತಿರಸ್ಕರಿಸಿ’ ಪೋಸ್ಟರ್ ಅಭಿಯಾನ
ತಂತ್ರಜ್ಞಾನದ ಒಳಿತು, ಕೆಡುಕು ಮನುಷ್ಯನ ಬಳಕೆಯ ಮೇಲೆ ನಿಂತಿದೆ. ಇಂದಿನ ಸರ್ಕಾರಗಳು ಸಂವೇದನಾ ಶೀಲತೆಯನ್ನು ಕಳೆದುಕೊಂಡಿವೆ. ಜನರಿಂದ ಜನರಿಗಾಗಿ ಪ್ರಜಾಪ್ರಭುತ್ವ ಎನ್ನುವ ಬದಲಾಗಿ ಕಾರ್ಪೋರೇಟ್ ಗಳಿಂದ, ಕಾರ್ಪೋರೇಟ್ಗಳಿಗಾಗಿ ಆಗಿದೆ. ವಿದೇಶಿ ಕಂಪನಿಗಳ ಒತ್ತಡಕ್ಕೆ ಸರ್ಕಾರಗಳು ಮಣಿಯುತ್ತಿದ್ದು, ರಾಷ್ಟ್ರೀಯವಾದ ಅನುಸರಿಸುತ್ತಿರುವ ನಾಯಕರೂ ಕಂಪನಿಗಳ ಪರವಾಗಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಉಡೆ ಪಿ. ಕೃಷ್ಣ ಮಾತನಾಡಿ, ಸರ್ಕಾರಗಳು ಕೃಷಿ ನೀತಿಗಳನ್ನು ಜಾರಿ ಮಾಡುವ ಮುನ್ನ ರೈತರು ಮತ್ತು ವಿಜ್ಞಾನಿಗಳನ್ನು ಮುಖಾಮುಖಿ ಮಾಡಿ ಸಾಧಕ ಬಾಧಕಗಳ ಕುರಿತು ಚರ್ಚಿಸಬೇಕು ಎಂದರಲ್ಲದೆ, ತಲತಲಾಂತರಗಳಿಂದ ಬಂದಿರುವ ಕೃಷಿ ಹಾಗೂ ಅದರ ಪ್ರಾಮುಖ್ಯತೆಯನ್ನು ನಾಶಮಾಡಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ಮೊದಲು ಜಾಗೃತವಾದರೆ ಇತರೆ ರಾಜ್ಯಗಳಿಗೂ ವ್ಯಾಪಿಸಲು ಅನುಕೂಲವಾಗಲಿದೆ. ನಾವು ಗಾಂಧಿ ಮಾರ್ಗದಲ್ಲಿ ಸಾಗಿದರೆ ಯಶಸ್ಸು ನಮ್ಮದಾಗಲಿದೆ ಎಂದು ಅವರು ಸಲಹೆ ನೀಡಿದರು.
ಕುಲಾಂತರಿ ಮುಕ್ತ ಭಾರತ ಸತ್ಯಾಗ್ರಹಕ್ಕೆ ಮಠಮಾನ್ಯಗಳು, ಕನ್ನಡಪರ ಸಂಘಟನೆಗಳು, ಕೃಷಿ ಉತ್ಪನ್ನ ಬಳಕೆದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಉಳಿಸಿ ಆಂದೋಲದ ಸಿ.ಪಿ ಮಾಧವನ್, ಪರಿಸರ ಹೋರಾಟಗಾರ ಬಾಲಕೃಷ್ಣ, ಗಾಂಧಿವಾದಿ ದೊರೆಸ್ವಾಮಿ ಹಾಗೂ ಪರಿಸರವಾದಿ ಸಿ. ಯತಿರಾಜು, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಹೋರಾಟಗಾರ್ತಿ ಶಂಕರಕೃಷ್ಣ ಮತ್ತಿತರರು ಹಾಜರಿದ್ದರು.