ದೇಶದ ಆರ್ಥಿಕ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರಾರಂಭವಾದಗಿನಿಂದ ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಆಸ್ತಿಗಳ ಮೇಲೆ ಪಕ್ಷಬೇಧವಿಲ್ಲದೆ ಆಡಳಿತ ನಡೆಸಿದವರು ಹೊಸ ರೀತಿಯ ಮೊಳೆಗಳನ್ನು ಹೊಡೆಯಲು ಪ್ರಾರಂಭವಾಗಿದೆ. 1983ರಲ್ಲಿ ಗ್ಯಾಟ್ ಒಪ್ಪಂದ, ಡೆಂಕಲ್ ಒಪ್ಪಂದಕ್ಕೆ ಸಹಿ ಹಾಕಿದಾಗ ಆರಂಭವಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣದಂತಹ ಅಂತಃಕರಣಗಳಿಲ್ಲದೆ ಕಾರಣಗಳು ಪ್ರಾರಂಭವಾಗಿ ಉದ್ಯೋಗ, ಸಾಮಾಜಿಕ ಭದ್ರತೆಗಳನ್ನು ಕಿತ್ತುಕೊಳ್ಳುವ ಕೆಲಸಗಳು ನಡೆಯುತ್ತಿವೆ. ಈ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ನಿರಂತರವಾಗಿ ಸಾಮಾಜಿಕ ಭದ್ರತೆಗಾಗಿ ಹೋರಾಟಗಳನ್ನು ನಡೆಸುತ್ತಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ರಂಗಕರ್ಮಿ, ನಟ ಬಿ. ಸುರೇಶ್ ಅಭಿಪ್ರಯಪಟ್ಟರು.
ತುಮಕೂರು ನಗರದ ಟೌನ್ಹಾಲ್ ವೃತ್ತದಲ್ಲಿ ವಿಶ್ವಕಾರ್ಮಿಕರ ದಿನಾಚರಣೆಯ (ಮೇ ದಿನಾಚರಣೆ) ಅಂಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯು ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಬಂಡವಾಳಗಾರರ ವ್ಯವಸ್ಥೆಯ ವಿರುದ್ದ ದಿನಕ್ಕೆ 8 ಗಂಟೆಯ ಕೆಲಸಕ್ಕೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ತಮಗೆ ಧಕ್ಕಬೇಕಾದ ಪ್ರಸ್ತುತ ಸವಲತ್ತುಗಳ ಬಗ್ಗೆ ಕಾರ್ಮಿಕರು ಮಾತನಾಡದ ರೀತಿಯಲ್ಲಿ ಹಲವು ರೀತಿಯ ಬೀಗಗಳನ್ನು ಹಾಕಲಾಗುತ್ತಿದೆ. ಕಾನೂನಿನ ಬೀಗ, ಭಯದ ಬೀಗ, ಸಬಂಳದ ಬೀಗ, ವಜಾಗೊಲಿಸುವ ಬೀಗ ಇಂತಹ ಸಂದರ್ಭದಲ್ಲಿ ಕಾರ್ಮಿಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತುವ ರೀತಿಯಲ್ಲಿ ಕಾರ್ಮಿಕ ದಿನಾಚರಣೆಯ ಮೂಲಕ ಜಾಗೃತಗೊಳಿಸುವ ಕೆಲಸಗಳನ್ನು ಕಾರ್ಮಿಕ ಸಂಘಟನೆಗಳು ಇಂದು ಮಾಡುತ್ತಿವೆ ಎಂದರು.

ಇದೇ ತುಮಕೂರು ನಗರದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿಗೆ ಉದ್ಯೋಗ ನೀಡಿದ್ದ ಹೆಚ್.ಎಂ.ಟಿ. ಕೈಗಡಿಯಾರ ಕಾರ್ಖಾನೆ ಇಂದು ಖಾಸಗೀಕರಣದ ಉತ್ತೇಜನದಿಂದ ನಾಶವಾಗಿದೆ. ಇದರಿಂದ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಕನಿಷ್ಠ ವೇತನವಿಲ್ಲದೆ ದುಡಿಯುತ್ತಿದ್ದ ಪೌರಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಸಂಘಟನೆಗಳ ಸುಮಾರು 20 ವರ್ಷಗಳ ನಿರಂತರ ಹೋರಾಟದ ಭಾಗವಾಗಿ ಪೌರಕಾರ್ಮಿಕರಿಗೆ 18 ಸಾವಿರ ಕನಿಷ್ಠ ಕೂಲಿ ಜಾರಿಗೆ ಕೋರ್ಟ್ ಆದೇಶ ನೀಡಿದರೆ ಅವರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವ ಕೆಲಸಕ್ಕೆ ದೂಡುತ್ತಿದೆ. ಜಿಡಿಪಿಯಲ್ಲಿ ಸಾಮಾಜಿಕ ಕಲ್ಯಾಣಕ್ಕಾಗಿ ಮೀಸಲಿಡುತ್ತಿದ್ದ ಶೇ. 8 ರಷ್ಟು ಹಣದಲ್ಲಿ ಕೇವಲ ಶೇ.2 ಕ್ಕೆ ಬಂದು ನಿಂತಿದೆ. ಇದರಿಂದ ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವು ವಿಭಾಗಗಳು ಸಾಮಾನ್ಯ ಜನರಿಗೆ ಕೈಗೆ ಸಿಗದಂತಾಗಿದೆ ಎಂದರು
ಇಂದು ಪ್ರತಿಯೊಂದ ಕೆಲಸಕ್ಕೂ ಪ್ರತಿಯೊಂದ ಯೋಜನೆಗೆ ಸ್ಮಾರ್ಟ್ ಪೋನ್ ಅಗತ್ಯವಾಗಿ ಬೇಕಾಗಿದೆ. ಆದರೆ ಇದೇ ಸ್ಮಾರ್ಟ್ ಪೋನ್ ಇದ್ದರೆ ಬಡವನ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಒಂದು ಕಾಲದಲ್ಲಿ ಹಲವು ಜನರಿಗೆ ಉದ್ಯೋಗ ನೀಡಿದ್ದ ಬಿಪಿಎಲ್ ಟಿವಿ ಇಂದು ಹೇಳಲು ಹೆಸರಿಲ್ಲದಂತಾಗಿದೆ. ಬೇರೆ ದೇಶದ ವಸ್ತುಗಳಿಗೆ ಭಾರತದ ಲೆಬಲ್ ಹಾಕಲಾಗುತ್ತಿದ್ದೆ. ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಕಾರ್ಮಿಕರಿಗೆ ಕರೆ ನೀಡಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ಮುಜೀಬ್ ಮಾತನಾಡಿ ಜನರನ್ನು ಭಾವನಾತ್ಮಕವಗಿ ವಿಭಜನೆಯ ಮೂಲಕ ದ್ವೇಷ ಬೆಳೆಸಿ ಜನರಮೂಲಭುತವಾದ ಉದ್ಯೋಗ, ಬಡತನ, ಅಪೌಷ್ಠಿಕತೆ, ವಸತಿ, ಮಹಿಳೆಯರ ಮತ್ತು ದಲಿತರ ಮೇಲಿನ ದೌರ್ಜನ್ಯ, ಬೆಲೆ ಏರಿಕೆ ಸೇರಿದಂತೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಶ್ರಮ ಶಕ್ತಿಯನ್ನು ಅಪಮಾನಿಸಲಾಗುತ್ತಿದ್ದು, ದುಡಿಯುವ ಜನರು ಇದರ ವಿರುದ್ದ ಸಂಘಟಿತರಾಗಿ ಮೇ 20 ರಂದು ನಡೆಯುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಲು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಕಮಲ, ಎ. ಲೋಕೇಶ್. ಹೆಚ್.ಡಿ.ನಾಗೇಶ್, ಬಿ.ಉಮೇಶ್, ಗುಲ್ಜಾರ್ಭಾನು, ನಾಗರಾಜು, ಅನಸೂಯ ಮಹಿಳಾ ಸಂಘಟನೆಯ ಮುಖಂಡರಾದ ಕಲ್ಪನ, ಶಿವಕುಮರಸ್ವಾಮಿ, ಕೊಳಗೇರಿ ಸಂಘಟನೆಯ ಎ. ನರಿಂಹಮೂರ್ತಿ, ಸುಕುಮಾರ್, ಮಧುಸೂದನ್, ವಸೀಂಅಕ್ರಂ, ಇಂತು, ಗಣಪತಿ, ಮಂಜುನಾಥ್, ಶ್ರೀನಿವಾಸ್, ಮಹೇಶ್, ಗಂಗಮ್ಮ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಖಲೀಲ್ ಸ್ವಾಗತಿಸಿ ಎನ್.ಕೆ.ಸುಬ್ರಮಣ್ಯ ನಿರೂಪಿಸಿ ಎ.ಲೋಕೇಶ್ ವಂದಿಸಿದರು.
ಪುಷ್ಪ ಮತ್ತು ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು.
ರಂಗಧಾಮಯ್ಯ, ಸುಜೀತ್, ಪುಷ್ಪ, ಆಧಿಲಕ್ಷ್ಮಮ್ಮ, ನಾಗಸುಂದರರವರ ನೇತೃತ್ವದಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.