ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಡೆಯುವ ವೇಳೆ ಬೆಟ್ಟಿಂಗ್ ಹಣಕ್ಕಾಗಿ ಮನೆಗಳ್ಳತನಕ್ಕೆ ಇಳಿದಿದ್ದ ವ್ಯಕ್ತಿಯೊಬ್ಬನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಅಲಿಯಾಸ್ ಐಪಿಎಲ್ ಸಂತೋಷ್ ಬಂಧಿತ ಆರೋಪಿ. ಈತ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮುದಿಗೆರೆ ಗ್ರಾಮದವನು. ಹೆಸರಿಗೆ ವ್ಯವಸಾಯ ವೃತ್ತಿಯಾದರೂ, ಮೂಲ ಕಾಯಕ ಮನೆಗಳ್ಳತನ ಮಾಡುವುದಾಗಿತ್ತು. ಆ ಬಳಿಕ ಅದರಿಂದ ಬಂದ ಹಣದಲ್ಲಿ ಐಪಿಎಲ್ ಬೆಟ್ಟಿಂಗ್ ಆಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ.
ಐಪಿಎಲ್ ಬೆಟ್ಟಿಂಗ್ ಅತಿಯಾಗಿ ಆಡುತ್ತಿದ್ದರಿಂದ ಈತನನ್ನು ಐಪಿಎಲ್ ಸಂತೋಷ್ ಎಂದು ಕರೆಯಲಾಗುತ್ತಿತ್ತು. ಈ ವ್ಯಕ್ತಿ ಬಿಂಡಗನವಿಲೆ, ಬೆಳ್ಳೂರು, ನಾಗಮಂಗಲ, ತುರುವೆಕೆರೆ, ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಮನೆಗಳ್ಳತನವನ್ನು ಮಾಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ: ಬಲಾಢ್ಯ ಸಮುದಾಯಗಳಿಗೆ ಶರಣಾಯಿತೇ ಸರ್ಕಾರ?
ಪದೇ ಪದೇ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ್ದರಿಂದ ನಾಗಮಂಗಲ ಸಿಪಿಐ ನಿರಂಜನ್ ನೇತೃತ್ವದಲ್ಲಿ ಪಿಎಸ್ಐ ರವಿಕುಮಾರ್, ಮಾರುತಿ ಒಳಗೊಂಡ 10 ಜನರ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.
ಬಳಿಕ ಈ ತಂಡ ತಾಂತ್ರಿಕ ಪುರಾವೆಗಳನ್ನು ಆಧರಿಸಿ ಆರೋಪಿ ಸಂತೋಷ್ನನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದೆ. ಬಂಧಿತನಿಂದ 40 ಲಕ್ಷ ಮೌಲ್ಯದ 490 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.