ಹೊಸಪೇಟೆಯಲ್ಲಿರುವ ತುಂಗಭದ್ರಾ ಅಣೆಕಟ್ಟಿನ 19ನೇ ಕ್ರಸ್ಟ್ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬಾರಿ ಒಂದು ಬೆಳೆಗೆ ಸಹ ನೀರು ಸಿಗುವುದು ನಮಗೆ ಅನುಮಾನವಿದೆ. ಹೀಗಾಗಿ ಸರ್ಕಾರ ತಕ್ಷಣ ಭತ್ತದ ಬೆಳೆಗಾರರಿಗೆ ಹಾಗೂ ರೈತರಿಗೆ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ವಿಜಯನಗರದಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ವಾಸುದೇವ ಮೇಟಿ, “ಒಂದು ಬೆಳೆಗೆ ನೀರು ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿರುವುದು ಮಳೆ ಬರುವ ಅಂದಾಜಿನ ಮೇರೆಗೆ ಮಾತ್ರ. ಹಿಂಗಾರು ಮಳೆ ಬಾರದೆ ಹೋದರೆ ಒಂದು ಬೆಳೆಗೂ ನೀರು ಸಿಗುವುದಿಲ್ಲ, ಸರ್ಕಾರ ತಕ್ಷಣ ಎನ್ಡಿಆರ್ಎಫ್ ನಿಯಮದ ಪ್ರಕಾರ ಪರಿಹಾರ ಪ್ಯಾಕೇಜ್ ನೀಡಬೇಕು” ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಭಾಗದ ಅಣೆಕಟ್ಟುಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಗೇಟ್ ಒಡೆದು ಹೋಗಲು ಕೇವಲ ಅಧಿಕಾರಿಗಳನ್ನು ದೂರುವುದು ಸರಿಯಲ್ಲ. ಸರ್ಕಾರದ ಹೊಣೆಗಾರಿಕೆ ಅಷ್ಟೇ ಇದೆ. ಜಿಲ್ಲಾ ಉಸ್ತುವಾರಿ ಸಚಿವರೇ ಸ್ಥಳಕ್ಕೆ ಬಂದಿಲ್ಲ ಎಂದರೆ ಸರ್ಕಾರಕ್ಕೆ ಇರುವ ಕಾಳಜಿ ಅರ್ಥವಾಗುವಂತದ್ದೇ ಆಗಿದೆ. ಈ ಘಟನೆ ಅತ್ಯಂತ ದುಃಖಕರ ಎಂದು ವಾಸುದೇವ ಮೇಟಿ ಆರೋಪಿಸಿದರು.
“ಕೆಆರ್ಎಸ್ ಅಣೆಕಟ್ಟೆಯಲ್ಲಿ ಒಂದು ವೇಳೆ ಇಂತಹ ದುರಂತ ಸಂಭವಿಸಿದ್ದರೆ ಇಡೀ ಸರ್ಕಾರವೇ ಅಲ್ಲಿರುತ್ತಿತ್ತು. ಆದರೆ ತುಂಗಭದ್ರಾ ವಿಚಾರದಲ್ಲಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಭಾನುವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಕೇವಲ ಅರ್ಧ ಗಂಟೆ ಹೊತ್ತು ಮಾತ್ರ ಅಲ್ಲಿದ್ದರು. ಇದು ಸರ್ಕಾರಕ್ಕೆ ಉತ್ತರ ಕರ್ನಾಟಕ ಭಾಗದ ಅಣೆಕಟ್ಟುಗಳ ವಿಚಾರದಲ್ಲಿರುವ ಆಸಕ್ತಿ ತೋರಿಸುತ್ತದೆ. ಒಂದು ವಾರದೊಳಗೆ ಕಿತ್ತುಹೋದ ಗೇಟ್ ಮತ್ತೆ ಅಳವಡಿಸಬೇಕು, ಇಲ್ಲವಾದರೆ ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ” ಎಂದು ಅವರು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ತುಂಗಭದ್ರಾ ಅಣೆಕಟ್ಟು ಗೇಟಿನ ದುರಸ್ಥಿಗೆ ಉನ್ನತಮಟ್ಟದ ತಂತ್ರಜ್ಞರ ತಂಡ: ಡಿಸಿಎಂ ಡಿ.ಕೆ. ಶಿವಕುಮಾರ್
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ಪರಿಸ್ಥಿತಿಯ ಗಂಭೀರತೆ ಅರಿತು ಸರ್ಕಾರ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು ಎಂದರು.
ರೈತ ಸಂಘದ ಮುಖಂಡರಾದ ಉದಿಯಪ್ಪ ನಾಯಕ್, ಬೀನಾ ರೂಪಕಲಾ, ಬಿ.ಎಸ್.ವೆಂಕಟೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
