ಸರ್ಕಾರಕ್ಕೆ ಇತ್ತೀಚೆಗೆ ಶರಣಾಗಿದ್ದ ನಕ್ಸಲ್ ಮುಖಂಡರಾದ ಮುಂಡಗಾರು ಲತಾ, ಕೋಟೆಹೊಂಡ ರವೀಂದ್ರ, ವನಜಾಕ್ಷಿ ಮತ್ತು ಸಾವಿತ್ರಿಯವರ ವಿರುದ್ಧ ದಾಖಲಾಗಿದ್ದ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಪ್ರಕರಣಗಳಲ್ಲಿ, ಅವರನ್ನು ಖುಲಾಸೆ ಮಾಡಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.
ಶೃಂಗೇರಿಯ ಬುಕ್ಕಡಿಬೈಲು ಬಸ್ ನಿಲ್ದಾಣದ ಅಂಗಡಿಯೊಂದರ ಗೋಡೆ ಮೇಲೆ ಲತಾ, ರವೀಂದ್ರ ಮತ್ತು ಸಾವಿತ್ರಿಯವರು ಕರಪತ್ರಗಳನ್ನು ಅಂಟಿಸಿ, ಸರ್ಕಾರಿ ವಿರೋಧಿ ಘೋಷಣೆ ಕೂಗಿದ್ದರೆಂಬ ವಿಷಯವಾಗಿ 2009ರಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಯುಎಪಿಎ ಪ್ರಕರಣ ದಾಖಲಿಸಲಾಗಿತ್ತು.
ಲತಾ, ರವೀಂದ್ರ ಮತ್ತು ವನಜಾಕ್ಷಿ ಅವರು ಶೃಂಗೇರಿ ತಾಲೂಕಿನ ನೆಮ್ಮಾರಿನಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಗಂಗಾಧರ ಶೆಟ್ಟಿ ಎಂಬುವವರ ಬೈಕ್ ಸುಟ್ಟಿದ್ದರು ಮತ್ತು ಮಾವೋವಾದಿ ಪರ ಘೋಷಣೆ ಕೂಗಿದ್ದರು ಎಂಬ ಆರೋಪದಲ್ಲಿ 2005ರರಂದು ಪ್ರಕರಣ ದಾಖಲಿಸಲಾಗಿತ್ತು.
ಮುಂಡಗಾರು ಲತಾ ಮತ್ತು ಇತರರು 2018ರಲ್ಲಿ ಥಣಿಕೋಡು ಅರಣ್ಯ ಚೆಕ್ಪೋಸ್ಟ್ನಲ್ಲಿ ಸ್ಪೋಟಕ ಎಸೆದು ದಾಖಲೆಗಳನ್ನು ಸುಟ್ಟಿದ್ದರು. ₹34,000 ನಷ್ಟ ಉಂಟುಮಾಡಿದ್ದರು ಎಂದು ಮತ್ತೊಂದು ಯುಎಪಿಎ ಪ್ರಕರಣ ದಾಖಲಿಸಲಾಗಿತ್ತು.
ಬೆಂಗಳೂರಿನ ಯುಎಪಿಎ ಪ್ರಕರಣ ವಿಶೇಷ ನ್ಯಾಯಾಲಯವು ಈ ಪ್ರಕರಣಗಳ ವಿಚಾರಣೆ ನಡೆಸಿದ್ದು, “ಈ ಎಲ್ಲ ಪ್ರಕರಣಗಳಲ್ಲಿ, ಈ ನಾಲ್ವರೇ ಕೃತ್ಯ ಎಸಗಿದ್ದಾರೆ ಎಂಬುದನ್ನು ಸಾಬೀತು ಮಾಡುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಿರುವ ಪ್ರಕರಣಗಳನ್ನು ವಜಾ ಮಾಡಬಹುದಾಗಿದೆ” ಎಂದು ನ್ಯಾಯಾಧೀಶ ಸಿ ಎಂ ಗಂಗಾಧರ ಅವರು ತೀರ್ಪು ನೀಡಿದ್ದಾರೆ.
ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಲತಾ, ಕೋಟೆಹೊಂಡ ರವೀಂದ್ರ ಮತ್ತು ವನಜಾಕ್ಷಿ ಸೇರಿದಂತೆ ಆರು ಮಂದಿ ಇತ್ತೀಚೆಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗಿದ್ದನ್ನು ಸ್ಮರಿಸಬಹುದಾಗಿದೆ.
ಇದನ್ನೂ ಓದಿದ್ದೀರಾ? ಬಳ್ಳಾರಿ | ಚೀಲದಲ್ಲೇ ಮೊಳಕೆಯೊಡೆದ ಜೋಳ; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಆರೋಪಿಗಳ ಪರವಾಗಿ ವಕೀಲ ಶಿವಮಣಿಧನ್ ವಾದ ಮಂಡಿಸಿದ್ದರು.
“ಆರೋಪ ಪಟ್ಟಿಯಲ್ಲಿ ಆರೋಪಿಗಳು ಅಪರಾಧ ಎಸಗಿದ್ದಾರೆಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ. ಯಾವುದೇ ಸ್ವತಂತ್ರ ಸಾಕ್ಷಿಗಳೂ ಪ್ರಾಸಿಕ್ಯೂಷನನ್ಗೆ ಬೆಂಬಲ ನೀಡಲಿಲ್ಲ. ಯುಎಪಿಎ ಅಡಿಯಲ್ಲಿ ಅಪರಾಧಕ್ಕೆ ಕಾನೂನು ಕ್ರಮ ಜರುಗಿಸಲು ಕಾನೂನಿನಡಿಯಲ್ಲಿ ನಿಗದಿಪಡಿಸಿದ 14 ದಿನಗಳಲ್ಲಿ ಅನುಮತಿ ಪಡೆಯಲಾಗಿಲ್ಲ. ವಿಶೇಷ ನ್ಯಾಯಾಲಯವು ಈ ಮೂರು ಪ್ರಕರಣಗಳಲ್ಲಿನ ಎಲ್ಲ ಅಪರಾಧಗಳಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ, ನ್ಯಾಯವಾದಿಯಾಗಿ ನ್ಯಾಯ ಒದಗಿಸಲು ನನ್ನ ಪ್ರಯತ್ನ ಮಾಡಿದ್ದೇನೆ” ಎಂದು ವಕೀಲ ಶಿವಮಣಿಧನ್ ತಿಳಿಸಿದ್ದಾರೆ.