ಪ್ರಸ್ತುತ ಮಹಿಳೆಯು ಯಾವ ಹಿನ್ನಲೆಯವಳಾಗಿದ್ದರೂ ಕೂಡ ಮಹಿಳೆಯಾಗಿ ಉಳಿಯಬೇಕಾದ ಅವಶ್ಯಕತೆ ಇದೆ. ಇದು ಕೇವಲ ಹ್ಯಾಪಿ ವುಮೆನ್ಸ್ ಡೇ ಅಥವಾ ಪೌಂಡ್ಸ್ ವುಮೆನ್ಸ್ ಡೇ ಅಲ್ಲ. ಹೊರತಾಗಿ ಕಾರ್ಯನಿರತ ಮಹಿಳೆಯರ ದಿನಾಚರಣೆಯಾಗಿದೆ ಎಂದು ಲೇಖಕಿ, ವಕೀಲೆ ಎ ಅರುಳ್ ಮೌಳಿ ಹೇಳಿದರು.
ಉಡುಪಿ ಜಿಲ್ಲೆಯ ಶ್ರೀ ಆರೂರು ಲಕ್ಷ್ಮೀ ನಾರಾಯಣ ರಾವ್ ಸ್ಮಾರಕ, ಪುರಭವನ ಸಭಾಂಗಣದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ʼಮಹಿಳಾ ಚೈತನ್ಯ ದಿನʼ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶಯ ನುಡಿಗಳನ್ನಾಡಿದರು.
“ಹೆಣ್ಣಿನ ಬಳಿ ನಿಮ್ಮ ಮನೆ ಎಲ್ಲೆಂದು ಕೇಳಿದಾಗ ಅಪ್ಪನ ಮನೆ, ಗಂಡನ ಮನೆ ತೋರಿಸುತ್ತಾಳೆ. ಅವಳು ಪೂಜಿಸುವ ದೇವರು ಗಂಡನ ಮನೆಯ ದೇವರು, ಅಪ್ಪನ ಮನೆಯ ದೇವರಾಗಿರುತ್ತದೆ. ಅವಳಿಗೆ ಅವಳಾದ್ದದ ಪರಿಚಯವೇ ಇಲ್ಲದಂತಾಗಿದೆ” ಎಂದರು.
ಪ್ರಸ್ತುತ ದಿನಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಜೊತೆಯಾಗಿದ್ದಾರೆ. ಇದಕ್ಕೆ ನಾವು ಅನುಭವಿಸುವ ನೋವು ಪ್ರಮುಖ ಕಾರಣ. ಹೆಣ್ಣೊಬ್ಬಳು ಯಾರಿಗೋಸ್ಕರ ಬದುಕಬೇಕು ಅಥವಾ ನಮಗೋಸ್ಕರ ಬದುಕಬೇಕಾ ಎಂಬುವುದನ್ನು ನಾವು ಅರಿತುಕೊಳ್ಳಬೇಕು” ಎಂದು ಹೇಳಿದರು.
“ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರ ಮಾಡಿ ಸಮಾಧಾನವಾಗದೆ ಇದ್ದಾಗ ಗುಪ್ತಾಂಗಕ್ಕೆ ಕಬ್ಬಿಣದ ರಾಡನ್ನು ತೂರಿಸಿ ಕ್ರೂರತನ ಮೆರೆಯುವ ಮನಸ್ಥಿತಿ ಎಲ್ಲಿಂದ ಬಂದಿದೆ ಎಂಬುದು ಬಹುಮುಖ್ಯವಾಗುತ್ತದೆ. ಹುಟ್ಟುವಾಗ ಗಂಡು ಮಕ್ಕಳಲ್ಲಿ ಈ ಡಿಎನ್ಎ ಇರುವುದಿಲ್ಲ. ಬದಲಾಗಿ ಈ ಡಿಎನ್ಎ ಸಮಾಜದಿಂದ ಬರುತ್ತದೆ. ʼಗಂಡುʼ ಎಂದು ಬೆಳೆಸುವ ಸಮಾಜದಿಂದ ಅವರಲ್ಲಿ ಈ ಗುಣ ಬೆಳೆಯುತ್ತ ಹೋಗುತ್ತದೆ ಎಂದರು.
“ಅತ್ಯಾಚಾರ ಆರೋಪಿಗಳ ಪರವಾಗಿಯೂ ವಕೀಲರು ಪ್ರತಿನಿಧಿಯಾಗಬೇಕಾಗುತ್ತದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಿರ್ಭಯಾ ಪ್ರಕರಣದ ಸಂತ್ರಸ್ಥೆಯ ಕುರಿತು ಅವರಿಲ್ಲಿದ್ದ ನಿಲುವು ಅಪಾಯಕಾರಿಯಾಗಿದೆ. ಕತುವಾ ಆಸೀಫಾ ಅತ್ಯಾಚಾರ ಪ್ರಕರಣ, ಬಿಲ್ಕೀಸ್ ಬಾನೋ ಪ್ರಕರಣದಲ್ಲಿ ಈ ಮನಸ್ಥಿತಿಗಳು ಅನಾವರಣವಾಗಿವೆ. ಪುರುಷರು ತಮ್ಮ ಅಕ್ರಮ ತೃಪ್ತಿಗಾಗಿ ಮಾತ್ರ ಅತ್ಯಾಚಾರ ನಡೆಸುವುದಿಲ್ಲ. ಬದಲಾಗಿ ಪುರಷಾಧಿಪತ್ಯದ ಸಂಕೇತವಾಗಿ “ಅತ್ಯಾಚಾರ” ನಡೆಸಲಾಗುತ್ತದೆ” ಎಂದು ಹೇಳಿದರು.
“ಮಕ್ಕಳನ್ನು ಮಕ್ಕಳಾಗಿ ಬೆಳೆಸುವ ಬದಲಾಗಿ ಗಂಡು-ಹೆಣ್ಣಾಗಿ ಬೆಳೆಸುತ್ತೇವೆ. ಹೆಣ್ಣನ್ನು ಹೆಚ್ಚು ಜಾಗರೂಕರಾಗಿ ಬೆಳೆಸಬೇಕು. ಹುಡುಗರ ಸಂಪರ್ಕವನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕು” ಎಂದು ಕರೆ ನೀಡಿದರು.
“ಬಿಲ್ಕೀಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳನ್ನು “ಉತ್ತಮ ಗುಣ ನಡತೆಯ” ಆಧಾರದಲ್ಲಿ ಬಿಡುಗಡೆ ಮಾಡಿದಾಗ ಮಹಿಳೆಯರು ಆರತಿ ಎತ್ತಿ ಸ್ವಾಗತಿಸುತ್ತಾರೆ. ಇದು ದುರಂತವಾಗಿದೆ. ಮಹಿಳೆಯ ಮೇಲೆ ನಡೆಯುವ ದೌರ್ಜನ್ಯದ ಕುರಿತು ಜಾತಿ, ಧರ್ಮ, ಅರ್ಥಿಕ ತಾರತಮ್ಯದ ಹೊರತಾಗಿ ದನಿಯೆತ್ತಬೇಕು” ಎಂದು ಕರೆ ನೀಡಿದರು.
ಡಾ.ನಿಕೇತನ ಅಧ್ಯಕ್ಷೀಯ ಭಾಷಣ ಮಾಡಿದರು. ರೇಖಾಂಬ ಟಿ ಎಲ್ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಎಚ್ಎಸ್ಆರ್ಪಿ ಫಲಕಗಳಿಲ್ಲದೆ ರಸ್ತೆಗಿಳಿದ ಹೊಸ ಬಸ್ಗಳು; ಸರ್ಕಾರದ ವಿರುದ್ಧ ಸಾರ್ವಜನಿಕರ ಆರೋಪ
ಸಭಾಂಗಣದಲ್ಲಿ ನೆರೆದಿದ್ದ ಮಹಿಳೆಯರು ‘ಶಿಳ್ಳೆ’ ಹೊಡೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳೆಯರು ಶಿಳ್ಳೆ ಹೊಡೆಯಬಾರದೆಂಬ ನೀತಿಯ ವಿರುದ್ಧ ನಾವು ಈ ಸಿಳ್ಳೆ ಹೊಡೆದು ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಜನೇಟ್ ಬರ್ಬೋಝಾ, ಸುನಂದಾ ಕಡಮೆ, ಬಾ ಹ ರಮಾಕುಮಾರಿ, ರೇಖಾಂಬ ಟಿ ಎಲ್, ನಾಗೇಶ್ ಉದ್ಯಾವರ ಇದ್ದರು.
