ಬಸವಾದಿ ಸಂಘಟನೆಗಳ ತೀವ್ರ ವಿರೋಧ ಮತ್ತು ಅನೇಕ ಸ್ವಾಮೀಜಿಗಳ ಗೈರು ಹಾಜರಿಯಲ್ಲಿ ವಿಜಯಪುರದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ಸಂಘ ಪರಿವಾರ ಪ್ರಾಯೋಜಿತ ‘ವಚನ ದರ್ಶನ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪ್ರತಿ ಜಿಲ್ಲೆಯಲ್ಲೂ ಈ ಪುಸ್ತಕವನ್ನು ತಲುಪಿಸಲಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಹದಿನೆಂಟು ಕಡೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಲ್ಲಿ ನಡೆದ ಬಿಡುಗಡೆಗೆ ಯಾವೊಬ್ಬ ವಿರಕ್ತ ಮಠಗಳ ಸ್ವಾಮೀಜಿಗಳು ಬರಲಿಲ್ಲ. ಹಾಗೆಯೇ ‘ಸಂಘ’ಟಕರು ಆಹ್ವಾನಿಸಿದ್ದರು ಎನ್ನಲಾದ ಜ್ಞಾನಯೋಗಾಶ್ರಮದ ಶ್ರೀಗಳೂ ಸೇರಿದಂತೆ ಅನೇಕರು ಭಾಗವಹಿಸಿರಲಿಲ್ಲ. ಈ ಕಾರ್ಯಕ್ರಮಕ್ಕೆ ಯಾರೂ ಹೋಗಬೇಡಿ ಎಂದು ಬಸವಾದಿ ಶರಣರ ಸಂಘಟನೆಗಳ ಒಕ್ಕೂಟ ಮೊದಲೇ ಎರಡು ಬಾರಿ ಸುದ್ದಿಗೋಷ್ಠಿ ನಡೆಸಿ ವಿನಂತಿಸಿತ್ತು ಮತ್ತು ಕಾರ್ಯಕ್ರಮ ಮಾಡಬೇಡಿ ಎಂದು ಆಗ್ರಹಿಸಲಾಗಿತ್ತು.
ಇದರ ಪರಿಣಾಮ, ಸಂಘ ಪರಿವಾರದ ಜತೆ ನಂಟಿರುವವರು ಮತ್ತು ಆರ್ಎಸ್ಎಸ್ನ ಅಂಗ ಸಂಸ್ಥೆಯವರು ಮಾತ್ರ ಅತಿ ಹೆಚ್ಚಿನ ಸಂಖೈಯಲ್ಲಿ ಇದ್ದರು. ಬಹುತೇಕ ಲಿಂಗಾಯತರಿದ್ದರೂ ಅವರೆಲ್ಲ ಬಹು ವರ್ಷಗಳಿದ ಸಂಘ ಪರಿವಾರದ ಒಡನಾಡಿಗಳಾಗಿದ್ದರೆ. ಹಾಗೆಯೇ ಬಿಜೆಪಿ ಮುಖಂಡರು ಕೂಡ ಇದ್ದರು. ಅದು ಬಿಟ್ಟರೆ ವೀರಶೈವ ಮಹಾಸಭೆಯ ಒಂದಿಬ್ಬರು ವೇದಿಕೆ ಮೇಲೆ ಇದ್ದರು.
ಆಲಮೇಲದ ಹಿರೇಮಠದ ಚಂದ್ರಶೇಖರ ಶಿಬಸಚಾರ್ಯರು ಮಾತನಾಡಿ, ವಚನ ದರ್ಶನವನ್ನು ಹೊಗಳಿದರು. ತಾಳಿಕೋಟೆಯ ಗುರಲಿಂಗ ಶಿವಾಚಾರ್ಯರಂತೂ ತಾಳಿಕೋಟಿಯ ಆರ್ಎಸ್ಎಸ್ ಕಾರ್ಯಕರ್ತರ ಜೊತೆ ಬಂದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದು, ಕಾರ್ಯಕ್ರಮ ಯಾವ ದಿಕ್ಕಿನದು ಎನ್ನುವುದು ಸಾಬೀತು ಪಡಿಸುವಂತಿತ್ತು.
ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀ ಕೂಡ ವಚನಗಳು ವೇದಗಳ ಪ್ರೇರಣೆಯಿಂದಲೇ ಹುಟ್ಟಿದ್ದು ಎಂದು ಹೇಳಿ, ಇದು ವೇದಗಳನ್ನು ಮುನ್ನೆಲೆಗೆ ತರುವ ಮತ್ತು ಭಾರತದ ಭವ್ಯ ಪರಂಪರೆಯ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ತಂತ್ರವಾಗಿ ಮಾತನಾಡಿದರು.
ಇನ್ನು ದಿಕ್ಸೂಚಿ ಭಾಷಣ ಮಾಡಿದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಬಿ.ಆರ್. ಶಂಕರಾನಂದರು ಮಾತನಾಡಿ, ವಚನಗಳು ಬರೆದಿದ್ದಲ್ಲ ಸೃಜಿಸಿದ್ದು ಎಂದು ಹೇಳುತ್ತ ಬಸವಾದಿ ಶರಣರು ಅಸಮಾನತೆಯ ವಿರುದ್ಧ ಚಳವಳಿಯೇ ನಡೆಸಿಲ್ಲ, ಕಾಲ್ಯಾಣದಲ್ಲಿ ನಡೆದಿದ್ದು ಕ್ರಾಂತಿಯೇ ಅಲ್ಲ ಎಂದು ಹೇಳಿದ್ದು ಮಾತ್ರ ಅರಗಿಸಿಕೊಳ್ಳಲಾರದಂಥದ್ದು. ಭಾರತದಲ್ಲಿ ಕ್ರಾಂತಿ, ಚಳವಳಿಯ ಶಬ್ದಗಳಿಗೆ ಜಾಗವೇ ಇಲ್ಲ ಎಂದು ಸಮರ್ಥಿಸಿಕೊಂಡರು.

ವಚನಗಳು ಜಗತ್ತಿನೆಲ್ಲೆಡೆ ಹರಡಬೇಕು ಎನ್ನುತ್ತಲೇ ಪ್ರಗತಿಪರರು ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ತಮಗಿರುವ ಸಿಟ್ಟನ್ನು ಹೊರಹಾಕಿದರು. ಶರಣರದು ಭಕ್ತಿ ಪಂಥ ಎಂದು ಪದೇ ಪದೇ ಹೇಳಿ ವಚನ ಚಳವಳಿಯನ್ನು ಸಾಮಾನ್ಯೀಕರಣಗೊಳಿಸುವ ಕೆಲಸವನ್ನು ಮಾಡಿದರು. ಅಸಮಾನತೆ ವಿರುದ್ಧ ಶರಣರು ಹೋರಾಟ ಮಾಡಿಯೇ ಇಲ್ಲ ಎನ್ನುವಂತಿತ್ತು ಅವರ ವಾದ. ಅದು ಬಿಟ್ಟು ಶಿವನ ಆರಾಧಾಕರು ಅವರ ಎನ್ನುವಂತೆ ಮಾತನಾಡಿದರು.
ಇದನ್ನು ಓದಿದ್ದೀರಾ? ಬಾಗಲಕೋಟೆ | ಎರಡು ಬೈಕ್ಗಳ ನಡುವೆ ಭೀಕರ ಅಪಘಾತ: ಮೂವರು ಬಲಿ
ವಿಶಾಲ ವೇದಿಕೆಯಲ್ಲಿ ಬಸವಣ್ಣರ ಮತ್ತು ಉಳಿದ ವಚನಕಾರರ ಚಿತ್ರ, ಒಂದೆಡೆ ಶಿವ ಪಾರ್ವತಿಯರ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಪ್ರವೇಶ ದ್ವಾರದಲ್ಲೇ ಆರ್ಎಸ್ಎಸ್ನವರು ಬಳಸುವ ಪಾಕಿಸ್ತಾನ, ಬಾಂಗ್ಲಾ ದೇಶಗಳಿರುವ ಭಗವಾಧ್ವಜ ಹಿಡಿದಿರುವ ಅಖಂಡ ‘ಭಾರತ ಮಾತೆ’ಯ ಫೋಟೋ ಮುಂದೆ ದೊಡ್ಡದಾದ ವಿಭೂತಿ ಇಟ್ಟಿದ್ದು ಹಲವು ಒಳ ಅರ್ಥಗಳಿಗೆ ಕನ್ನಡಿಯಂತಿತ್ತು.

ಅಲ್ಲಿ ಭಾಗವಹಿಸಿದ್ದ ಬಹುತೇಕ ಲಿಂಗಾಯತರಿಗೆ ಇಲ್ಲಿ ನಡೆಯುತ್ತಿರುವುದು ವಚನಗಳ ಪುಸ್ತಕದ ಬಿಡುಗಡೆ ಎಂದು ಮಾತ್ರ ಭಾಸವಾಗಿತ್ತು. ಉಳಿದ್ಯಾವುದರ ಪರಿವೆಯೇ ಇರಲಿಲ್ಲ. ಹಾಗಾಗಿ, ಲಿಂಗಾಯತರು ಇನ್ನೂ ಜಾಗೃತಗೊಳ್ಳಬೇಕಿದೆ ಎನ್ನುವುದು ಮಾತ್ರ ಕಟು ವಾಸ್ತವ ಸಂಗತಿ. ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಇದು ನಮ್ಮ ಅಸ್ತಿತ್ವದ ಪ್ರಶ್ನೆ.
ಶಿವಕುಮಾರ್ ಉಪ್ಪಿನ, ವಿಜಯಪುರ

ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿ ನಾಗಪೂರ ನಿಷ್ಠೆಯ ಭಾಷಣ ಮಾಡಿದ ಕಾವಿಧಾರಿಗಳನ್ನು ಮಠದಿಂದ ಹೊರಕ್ಕೆ ಹಾಕಿ ಇಲ್ಲವೇ ಅಂಥಾ ಮಠಗಳಿಗೆ ಬಸವಭಕ್ತರು ಭೇಟಿ ಸಂಪೂರ್ಣ ನಿಲ್ಲಿಸಿ,, ಬೆವರು ಸುರಿಸಿ ದುಡಿಯಲಿ ಅಥವಾ ನಾಗಪೂರದ ಚೌಕಿದಾರರು ಆಗಲಿ,, ಆಗಲೇ ಅವರಿಗೆ ಬಸವತತ್ವದ ನೈಜತೆ ಅರಿವಾಗುವುದು
ಫ. ಗು. ಹಳಕಟ್ಟಿಯವರ ಮತ್ತು ಡಾ. ಎಂ ಎಂ ಕಲಬುರ್ಗಿ ಮಹಾನ್ ಹುತಾತ್ಮರ ಬಸವನ ನೆಲೆಯಾದ ವಿಜಾಪೂರವೇ ಮೂಡ ಜನರ ತೆಕ್ಕೆಯಲ್ಲಿ .. ಅಲ್ಲಿರುವ ಬಹುತೇಕ ಲಿಂಗಾಯತರು ಅದರಲ್ಲೂ ಈ ಬಣಜಿಗರಿಗೆ ವಚನಗಳ ಅರ್ಥವೇ ಗೊತ್ತಿಲ್ಲ..
ಆದರೂ ವಿರೋದ ಮಾಡಿದ್ಧು ಮಾತ್ರ ಒಳ್ಳೆಯದು..
ಹಾಗೆಯೇ ಇಂತವಗಳ ವಿರುದ್ಧ ಎದ್ಧು ನಿಲ್ಲೋಣ..
ಒಲೆ ಹತ್ತಿ ಉರಿದೊಡೆ ನಿಲ್ಲ ಬಹುದಲ್ಲದೆ ದರೆ
ಹತ್ತಿ ಉರಿದೊಡೆ ನಿಲ್ಲ ಬಾರದು….
ಈ ವಚನ ಇವಾಗಿನ ಪ್ರಸ್ತುತ ಕಾಲಕ್ಕೆ .. ಶರಣುಗಳು