ಸುಪ್ರಿಂ ಕೋರ್ಟ್ ತೀರ್ಪು ಆದೇಶಿಸಿದ್ದರೂ ರಾಜ್ಯ ಸರಕಾರ ಒಳ ಮೀಸಲಾತಿ ಅನುಷ್ಠಾನಗೊಳಿಸುತ್ತಿಲ್ಲ. ತಕ್ಷಣವೇ ಒಳ ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕು ಎಂದು ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತುಂಗಭದ್ರಾ ಡ್ಯಾಂ ಬಾಗಿನ ಅರ್ಪಿಸಿದಾಗ ಜನರ ಸಮಸ್ಯೆಗಳಿಗೆ ಅಹವಾಲು ಸ್ವೀಕರಿಸುವುದಕ್ಕೆ ಬಂದಾಗ ಒಳಮೀಸಲಾತಿ ಹೋರಾಟಗಾರ ಕರಿಯಪ್ಪ ಗುಡಿಮನಿ ಮನವಿ ಮಾಡಿಕೊಂಡರು.
ಸುಮಾರು ಮೂರು ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಆಗಸ್ಟ್ 1, 2024 ರಂದು ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ಯಾವುದೇ ಸಾಂವಿಧಾನಿಕ ತೊಡಕುಗಳಿಲ್ಲ ಹಾಗೂ ರಾಜ್ಯ ಸರ್ಕಾರಕ್ಕೆ ಆ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಹಾಗಾಗಿ, ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಕರಿಯಪ್ಪ ಗುಡಿಮನಿ ತಿಳಿಸಿದರು.
ಇಡೀ ಭಾರತ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ರಾಜ್ಯದ ಪರಿಸ್ಥಿತಿಯು ಒಳಮೀಸಲಾತಿ ಜಾರಿಗೆ ಬಹಳ ಅನುಕೂಲಕರವಾಗಿದೆ. ಇಲ್ಲಿನ 101 ಜಾತಿಗಳೂ ಸಹ ಒಮ್ಮತದಿಂದ ಒಳಮೀಸಲಾತಿಗಾಗಿ ಆಗ್ರಹಿಸುತ್ತಿವೆ ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.
2023ರ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ಪಕ್ಷವು ಚಿತ್ರದುರ್ಗದಲ್ಲಿ ನಡೆಸಿದ ‘ಕಾಂಗ್ರೆಸ್ ಐಕ್ಯತಾ ಸಮಾವೇಶ’ದಲ್ಲಿ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಇದಕ್ಕೆ ತಾವೂ ಸಹ ಸಾಕ್ಷಿಯಾಗಿದ್ದೀರಿ. ಅದರಂತೆ ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಒಳಮೀಸಲಾತಿ ಜಾರಿಗಾಗಿ ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದಿರಿ. ಈ ಕ್ರಮಕ್ಕೆ ಸಮಸ್ತ ಪರಿಶಿಷ್ಟ ಜಾತಿಗಳೂ ನಿಮ್ಮ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ ಅಧಿಕಾರಕ್ಕೆ ತರಲಾಗಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಮತ್ತಷ್ಟು ಹಾದಿ ಸುಗಮವಾಗಿದೆ. ಸಂವಿಧಾನ ತಿದ್ದುಪಡಿಯ ಪ್ರಶ್ನೆಯೇ ಉದ್ದವಿಸುವುದಿಲ್ಲ. ಕರ್ನಾಟಕ ಸರ್ಕಾರವೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬಹುದು. ಸುಪ್ರೀಂ ಕೋರ್ಟ್ ತೀರ್ಪು ಬಂದ ದಿನ ತಾವು ತೀರ್ಪನ್ನು ಸ್ವಾಗತಿಸಿ, ತಮ್ಮ ಬದ್ಧತೆ ಪ್ರದರ್ಶಿಸಿದ್ದೀರಿ. ಆದರೆ ಒಂದೂವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಪರಿಶಿಷ್ಟ ಜಾತಿಗಳಲ್ಲಿ ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವೇಳೆ ಕೆ ಎಂ ಆರ್ ವಿ ಮುದುಕಪ್ಪ ಇನ್ನಿತರರು ಇದ್ದರು.
