ಸಂವಿಧಾನ ಬದಲಾಯಿಸುತ್ತೇವೆಂದು ಬಹಳ ಸರಳವಾಗಿ ಹೇಳುತ್ತಾರೆ, ಈ ದೇಶದ ಸಂವಿಧಾನ ತೆಗೆದರೆ ಅಥವಾ ಬದಲಾಯಿಸಿದರೆ, ದೇಶ ಕುಸಿಯುತ್ತದೆ. ಮುಸಲ್ಮಾನರು ಸಂವಿಧಾನ ಪೀಠಿಕೆಯನ್ನು ʼಕಲ್ಮಾʼದಂತೆ ಓದಬೇಕು ಎಂದು ಸಾಹಿತಿ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಸಂಸತ್ತಿನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಲಘುವಾಗಿ ಮಾತಾನಾಡಿದ ಅಮಿತ್ ಶಾ ವಿರುದ್ಧ ವಿಜಯನಗರ ಜಿಲ್ಲೆ ಬಂದ್ ವೇಳೆ ಮಾತನಾಡಿದರು.
“ನಮ್ಮ ಸಂವಿಧಾನದಲ್ಲಿ ʼಭ್ರಾತೃತ್ವʼವೆಂಬ ಒಂದು ಶಬ್ದವಿದೆ. ಅಂದರೆ ನಾವೆಲ್ಲ ಅಣ್ಣ ತಮ್ಮಂದಿರಂತೆ ಬದುಕಬೇಕು. ಹೋರಾಟದಲ್ಲೂ, ನಿಜ ಜೀವನದಲ್ಲೂ ಸಹೋದರರಂತಿರಬೇಕು. ಎಲ್ಲ ಮುಸಲ್ಮಾನರು ಎಲ್ಲರ ಕೇರಿಗಳಿಗೆ ಹೋಗಬೇಕು. ಅವರ ನೋವಿನ ಜೊತೆ ಮಿಡಿಯಬೇಕಾಗಿದೆ. ಕೇರಿಗಳು ಒಂದಾಗಿ ಕೂಡಬೇಕು. ಹೋರಾಟವೊಂದೇ ನಮ್ಮನ್ನು ಕಾಪಾಡುತ್ತದೆ. ನಾವು ಕೂಡಿ ಹೋರಾಡದಿದ್ದರೆ ನಾಶವಾಗಿ ಬಿಡುತ್ತೇವೆ” ಎಂದು ಸಂದೇಶದ ಕರೆಕೊಟ್ಟರು.

“ದಲಿತ ಸಮುದಾಯಗಳ ಜನ ತಮಗೆ ಅನ್ಯಾಯವಾದರೆ ಬೀದಿಗೆ ಬರಬೇಕು. ಇವರೆಲ್ಲ ಒಟ್ಟಾದರೆ ಈ ಸಮಾಜ ಬದಲಾಗುತ್ತದೆ ಮತ್ತು ರಾಜಕೀಯ ಬದಲಾಗುತ್ತದೆ ಎಂಬ ದೊಡ್ಡ ಸಂದೇಶವನ್ನು ಇವತ್ತಿನ ‘ಬಂದ್’ ಸೂಚನೆ ಕೊಡುತ್ತಿದೆ. ಎಲ್ಲ ನದಿಗಳು ಸೇರಿದರೆ ಒಂದು ದೊಡ್ಡ ಸಾಗರವಾಗತ್ತದೆ. ಪೈಗಂಬರರು ನಮ್ಮ ಎದೆಯಲ್ಲಿದ್ದಾರೆ. ಭಾರತದ ಮುಸ್ಲಿಮರಿಗೆ ಘನತೆಯಿಂದ ಬದುಕಲು ಡಾ.ಅಂಬೇಡ್ಕರ್ ಅವರ ದಾರಿ, ಮಾರ್ಗದರ್ಶನ ಬಹುದೊಡ್ಡದು. ಸಂವಿಧಾನ ರಕ್ಷಣೆ ಕೇವಲ ದಲಿತರ ಕರ್ತವ್ಯವಲ್ಲ, ಅಲ್ಪಸಂಖ್ಯಾತ, ದಮನಿತ, ಶೋಷಿತ ಹಾಗೂ ಮೂಲಸೌಕರ್ಯ ವಂಚಿತರ ಕರ್ತವ್ಯವೂ ಹೌದು” ಎಂದರು.

ಸಾಹಿತಿ ಪೀರ್ ಭಾಷಾ ಮಾತನಾಡಿ, “ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ಹಗುರವಾಗಿ ಮಾತನಾಡಿದ ಕೇಂದ್ರ ಮಂತ್ರಿಯ ಬಾಯಲ್ಲಿ ಬಾಯಿ ತಪ್ಪಿ ಬಂದ ಮಾತಲ್ಲ, ಹೊಟ್ಟೆಯೊಳಗಿನ ಮಾತು. ಇಷ್ಟು ದಿನ ‘ಬಾಬಾ ಸಹೇಬ್ರ ಬಗ್ಗೆ ಅಭಿಮಾನ ಇದೆʼ ಅಂತ ದ್ವೇಷ ಬಚ್ವಿಟ್ಟುಕೊಂಡು ನಾಟಕ ಆಡುತ್ತಿದ್ದರು. ಅಂಬೇಡ್ಕರ್ ಅಂದರೆ, ಸ್ವಾಭಿಮಾನ, ಪ್ರಜಾಪ್ರಭುತ್ವ, ಅಸ್ಮಿತೆ, ಸಮಾನತೆ, ಭಾರತದ ಗೌರವ, ಅವರ ಹೆಸರನ್ನು ನೂರು ಬಾರಿ ಅಲ್ಲ, ಸಾವಿರ ಸಲ ಉಚ್ಛರಿಸುತ್ತೇವೆ. ಇದನ್ನು ಸಹಿಸಿಕೊಳ್ಳುವುದಕ್ಕೆ ಫ್ಯಾಸಿಸ್ಟ್ರು ತಯಾರಿಲ್ಲ” ಎಂದು ಗುಡಿಗಿದರು.

“ಬಿಜೆಪಿಯವರನ್ನು ಸಾಕುತ್ತಿರುವ ಆರ್ಎಸ್ಎಸ್ ಸ್ವಾತಂತ್ರ್ಯ ಪೂರ್ವದಲ್ಲೇ, ‘ಸಂವಿಧಾನ ಮನುಸ್ಮೃತಿ, ಸನಾತನ ಧರ್ಮದ ವಿರುದ್ಧವಿದೆ. ತ್ರಿವರ್ಣ ಧ್ವಜ ಭಾರತಕ್ಕೆ ಕಳಂಕ’ವೆಂದು ದು ಹೇಳಿದ್ದರು. ಈಗ ಹಿಂದುತ್ವದ ಸತ್ಯ ಬಿಚ್ಚಿಟ್ಟರು. ಇವರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವ ಇಲ್ಲ. ‘ ಸಂವಿಧಾನ ಮನುಸ್ಮೃತಿ ಗೌರವಿಸುವದಿಲ್ಲ, ಅದಕ್ಕಾಗಿ ನಾವು ಸಂವಿಧಾನ ಗೌರವಿಸಲ್ಲ’ ಎಂದು ಹೇಳಿದ್ದರು. ಹಾಗಾಗಿ ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಇವರು ಅಧಿಕಾರಕ್ಕೆ ಬಂದಿದ್ದು, ಸಂವಿಧಾನದ ಹೆಸರು ಹೇಳಿಕೊಂಡು, ಅಂಬೇಡ್ಕರ್ ಹೆಸರು ಹೇಳಿಕೊಂಡು. ಈಗ ಅವರ ಪರಂಪರೆಯನ್ನು ನಾಶ ಮಾಡುತ್ತಿದ್ದಾರೆ, ದುಡಿಯುವ ಜನರನ್ನು ಧರ್ಮದ ಆಧಾರದಲ್ಲಿ ಹೊಡೆದು ಭೇದ ಹುಟ್ಟಿಸಿ ತುಂಡರಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.

ಬಾಯಲ್ಲಿ ದೇಶಭಕ್ತಿ ಕೃತಿಯಲ್ಲಿ ದೇಶದ್ರೋಹದಂತ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಕೇವಲ ದಲಿತರ ನಾಯಕ ಅಲ್ಲ. ಈ ದೇಶದ ಎಲ್ಲ ಅಲ್ಪಸಂಖ್ಯಾತ, ಶೋಷಿತ, ದಮನಿತ, ತುಳಿತಕ್ಕೊಳಗಾದವರ, ಮಹಿಳೆಯರ ನಾಯಕ. ಪ್ರಜಾಪ್ರಭುತ್ವವನ್ನು ಕಟ್ಟಿಕೊಟ್ಟ ಮೇರು ನಾಯಕ. ಬಿಜೆಪಿ ಸಚಿವ ಸ್ವರ್ಗವನ್ನು ದಲಿತರ ಕೇರಿಯ ಗಲ್ಲೇಬಾನಿಯಲ್ಲಿ ಅದ್ದಿ ತೆಗೆದಿದ್ದೇವೆ” ಎಂದು ಆಕ್ರೋಶದಿಂದ ನುಡಿದರು.

ನಾಗರತ್ನಮ್ಮ ಮಾತನಾಡಿ “ಈ ಕೇಂದ್ರ ಸಚಿವರು ದೇಶದ ಮೂಲ ಸಮಸ್ಯೆಗಳ ಕುರಿತು ಚರ್ಚೆ ಮಾಡುವುದುನ್ನ ಬಿಟ್ಟು ಕೆಲಸಕ್ಕೆ ಬಾರದ ಚರ್ಚೆಗಳ ಬಗ್ಗೆ ಹೆಚ್ಚು ಮಾತಾನಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಅಸಮಾನತೆ ಸಮಸ್ಯೆ, ಮಣಿಪುರದ ಸಮಸ್ಯೆ, ಆರ್ಥಿಕತೆ, ಬೆಲೆ ಏರಿಕೆ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳನ್ನು ಹನ್ನೊಂದು ವರ್ಷದಲ್ಲಿ ಒಂದು ದಿನವೂ ಚರ್ಚಿಸಲಿಲ್ಲ. ಅವೈಜ್ಞಾನಿಕ ಕಾನೂನು ಜಾರಿ ತರುವಾಗಲೆಲ್ಲ ಇಂತಹ ಹೇಳಿಕೆ ನೀಡಿ ದೇಶದ ಪ್ರಜೆಗಳ ದೃಷ್ಟಿ, ವಿಚಾರವನ್ನು ಗೊಂದಲಕ್ಕೆ ತಂದು ತಮ್ಮ ಕುತಂತ್ರ ರಾಜಕೀಯದ ಲಾಭ ಮಾಡಿಕೊಳ್ಳುತ್ತಾರೆ. ಅದ್ದರಿಂದ, ದಲಿತರು, ದಮನಿತರು, ಶೋಷಿತರು, ಮಹಿಳೆಯರು ಬಹಳವಾಗಿ ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನದಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು” ಎಂದು ಕರೆಕೊಟ್ಟರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರೈತರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕೋಶದ ಅಗತ್ಯವಿದೆ: ರೈತ ಸಂಘದ ಉಪಾಧ್ಯಕ್ಷ ಹೊರಕೇರಪ್ಪ
ಅಮಿತ್ ಶಾ ವಿರುದ್ಧ ನಡೆಸಿದ ವಿಜಯನಗರ ಜಿಲ್ಲೆ ಬಂದ್ ಯಶಸ್ವಿಯಾಯಿತು. ದೊಡ್ಡ ವ್ಯಾಪಾರಸ್ಥರು, ಸಣ್ಣ ವ್ಯಾಪಾರಸ್ಥರು, ಹೊಟೇಲ್, ಚಲನಚಿತ್ರ ಮಂದಿರಗಳು ಸ್ವಯಂ ಪ್ರೇರೆಣೆಯಿಂದ ಅಂಗಡಿ ಬಂದ್ ಮಾಡಿ ಹೋರಾಟಕ್ಕೆ ಸಹಕರಿಸಿದರು. ಹೂ ವ್ಯಾಪಾರಿಗಳು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರದರ್ಶಿಸಿದರು. ಪ್ರತಿಭಟನೆಗೆ ತೊಂಬತ್ತಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದವು.
ಹೊಸಪೇಟೆ ಪಟ್ಟಣದ ವಾಲ್ಮಕಿ ಸರ್ಕಲ್ನಿಂದ ಮುಖ್ಯ ಬೀದಿಯಲ್ಲಿ ಹಾದು ಡಾ.ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾವಚಿತ್ರ ಸುಡುವ ಮೂಲಕ ಆಕ್ರೋಶ ಹೊರಹಾಕಿದರು.