ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ‘ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಡಿ ಎ ಶಂಕರ ಅವರ ‘ಅನ್ಯ’ ಕಾದಂಬರಿಯ ಕುರಿತು ಅವಲೋಕನ ಸಂವಾದ ಏರ್ಪಡಿಸಲಾಗಿತ್ತು.
ಈ ಸಂವಾದದಲ್ಲಿ ಮಾತನಾಡಿದ ಸಂಶೋಧನಾರ್ಥಿ ಮಂಜುನಾಥ ಕರಿಲಿಂಗಣ್ಣ, “ಮನುಷ್ಯ ತಾನು ಸೃಷ್ಟಿಸಿಕೊಂಡ ವ್ಯವಸ್ಥೆಯಲ್ಲಿ ತಾನೇ ಹೇಗೆ ಬಂಧಿಯಾದ ಎಂಬ ವಿಷಯವನ್ನು ʼಅನ್ಯʼ ಕಾದಂಬರಿಯು ಚರ್ಚಿಸುತ್ತದೆ. ಅನುವಾದಕರ ಕುರಿತ ಚರ್ಚೆಗಳು ನಡೆಯುವುದೇ ವಿರಳ. ಈ ಅನುವಾದಕರು ತಮ್ಮ ಭಾಷೆಗಳಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸುವ ಉದ್ದೇಶವನ್ನು ಈ ಕಾರ್ಯಕ್ರಮವು ಪೂರೈಸುತ್ತದೆ. ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುತ್ತಾ ಹುಟ್ಟಿದುದೆ ಅಸ್ತಿತ್ವವಾದ” ಎಂದು ಹೇಳಿದರು.
“ನಮ್ಮದೇ ವ್ಯವಸ್ಥೆ ನಮ್ಮನ್ನೇ ನಾಶಮಾಡುವಾಗಲೂ ಅದನ್ನು ಒಪ್ಪಿಕೊಳ್ಳುವ ದೀರ್ಘಾವಧಿಯ ಅಭ್ಯಾಸವೊಂದಿದ್ದು, ನಮ್ಮನ್ನು ಸದಾ ಅದಕ್ಕೆ ಸಿದ್ಧವಾಗಿರುವಂತೆ ಮಾಡುತ್ತದೆ. ಈ ಕಾದಂಬರಿಯು ಈಗಾಗಲೇ ಇರುವ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಸಮಾಜದ ಭಾವನಾತ್ಮಕ ಲೋಕವನ್ನು ಮುಂದಿಟ್ಟು ಮಾಡಿದ ಅಪರಾಧಗಳಿಗಿಂತ ವ್ಯಕ್ತಿಯ ವ್ಯಕ್ತಿತ್ವವನ್ನೇ ಪ್ರಶ್ನಿಸುತ್ತಿರುತ್ತದೆ. ಸಮಾಜದ ಮಿತ್ಗಳನ್ನು ಒಪ್ಪಿಕೊಳ್ಳದವನಿಗೆ ಆ ಸಮಾಜದಲ್ಲಿ ಬದುಕುವ ಅರ್ಹತೆಯಿಲ್ಲ. ಅವನು ಕೇವಲ ಶಿಕ್ಷೆಗೆ ಮಾತ್ರ ಅರ್ಹ ಎಂದು ಕಾದಂಬರಿಯಲ್ಲಿ ನಿರೂಪಿಸಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ವಿಜಯನಗರ | ಮುಕ್ತ ಚಿಂತನೆಗೆ ಅಪಾಯವಿದೆ: ಎಸ್. ಸಿರಾಜ್ ಅಹಮದ್
ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಬಾಳಿ, ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಮಾಧವ, ರೆಬೆಕ್ಕ, ಬರ್ಗಿ ಜಯಶ್ರೀ, ವಿನೀತ, ವಿಭಾಗದ ವಿದಾರ್ಥಿಗಳು ಹಾಗೂ ಇತರರು ಇದ್ದರು.