ಒಂದು ಕಾಲದಲ್ಲಿ ವಿದ್ಯಾರ್ಥಿಗಳ ಗದ್ದಲದಿಂದ ಮೊಳಗುತ್ತಿದ್ದ, ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ವಿಜಯಪುರದ ಸರಕಾರಿ ಗಂಡು ಮಕ್ಕಳ ಶಾಲಾ ಕಟ್ಟಡವೊಂದು ಇಂದು ದಿವ್ಯ ಸ್ಮಾರಕವಾಗಿ ಮಾತ್ರ ಉಳಿದಿದೆ. ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದ ಈ ಶಾಲೆ ಈಗ ಪಾಳುಬಿದ್ದು ಮರೆಯಾಗುವ ಅಂಚಿಗೆ ತಲುಪಿದೆ.
ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ, 1860ರ ಏಪ್ರಿಲ್ 1ರಂದು ಸ್ಥಾಪಿತಗೊಂಡ ದೇವರ ಹಿಪ್ಪರಗಿಯ ಸರಕಾರಿ ಗಂಡು ಮಕ್ಕಳ ಶಾಲೆ ಇಂದು ಪಾಳು ಬಿದ್ದು ನಶಿಸುತ್ತಿರುವ ಸ್ಥಿತಿಯಲ್ಲಿದೆ. ಸುಮಾರು 165 ವರ್ಷಗಳ ಇತಿಹಾಸ ಹೊಂದಿರುವ ಈ ಐತಿಹಾಸಿಕ ಕಟ್ಟಡ, ಕಲ್ಲು ಮತ್ತು ಗಾರೆಗಳಿಂದ ಬಲಿಷ್ಠವಾಗಿ ನಿರ್ಮಿಸಲ್ಪಟ್ಟಿದೆ. ಸಂಪೂರ್ಣ ಕಲ್ಲಿನ ಚಾವಣಿ ಹೊಂದಿರುವುದು ಈ ಕಟ್ಟಡವನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.
ಈ ಪ್ರದೇಶವು ಸ್ವಾತಂತ್ರ್ಯ ಪೂರ್ವದಲ್ಲಿ ಕಲಾದಗಿ ಜಿಲ್ಲೆಯ ಭಾಗವಾಗಿದ್ದು, ದೇವರ ಹಿಪ್ಪರಗಿ ಎಂಬುದು ತಾಲೂಕು ಕೇಂದ್ರವಾಗಿತ್ತು. ಅದೇ ಸಂದರ್ಭದಲ್ಲಿ ಈ ಕಟ್ಟಡ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಾಗಿ ಕಾರ್ಯ ನಿರ್ವಹಿಸಿತ್ತು ಎನ್ನಲಾಗುತ್ತದೆ. ನಂತರದಲ್ಲಿ ಸರಕಾರಿ ಪ್ರಾಥಮಿಕ ವಿದ್ಯಾ ಕೇಂದ್ರವಾಗಿ ಅನೇಕ ಬಡ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿದೆ.

ಸಂಜೆಯಾದರೆ ಸಾಕು ಕಿಡಿಗೇಡಿಗಳಿಗೆ, ಮದ್ಯ ವ್ಯಸನಿಗಳಿಗೆ, ಪಾನ್ ಬೀಡ ಜಗಿಯುವವರಿಗೆ ಹಾಗೂ ಅನೈತಿಕ ಕೆಲಸಗಳಿಗೆ ಪ್ರಶಸ್ತ ಸ್ತಳವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತಲೂ ಶೌಚ ಹಾಗೂ ಮೂತ್ರ ವಿಸರ್ಜನೆಯ ದುರ್ವಾಸನೆ. ಒಂದು ಕಾಲದಲ್ಲಿ ಅಕ್ಷರ ದಾಸೋಹ ಮಾಡಿದ ಶಾಲೆಯ ಸ್ಥಿತಿ ಕಂಡು ಹಳೆಯ ವಿದ್ಯಾರ್ಥಿಗಳು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಐತಿಹಾಸಿಕ ಕಟ್ಟಡಕ್ಕೆ ಪುನರ್ ಜೀವ ಕೊಡುವ ಕೆಲಸ ಮಾಡಬೇಕು ಎಂದು ಪಿಕೆಪಿಎಸ್ ನಿರ್ದೇಶಕ ರಾಘವೇಂದ್ರ ಭಾವಿಮನಿ, ಸುನೀಲ ಪಾಟೀಲ, ಅನಿಲ ಕೋಟಿನ, ಸೋಮಶೇಖರ ಸೊನ್ನದ, ಶಿವಾನಂದ ರುದ್ರಗೌಡರ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಇಒ ಎಂ ಬಿ ಯಡ್ರಾಮಿ, “ಕಟ್ಟಡವು ಶಿಕ್ಷಣ ಇಲಾಖೆ ಅಡಿಯಲ್ಲಿದೆ. ನೂತನ ತಾಲೂಕು ಘೋಷಣೆಯಾದ ನಂತರದಲ್ಲಿ ನ್ಯಾಯಾಲಯಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿತ್ತು. ನಂತರದಲ್ಲಿ ಏಕೆ ಕೈ ಬಿಡಲಾಯಿತು ಎಂಬುದು ಗೊತ್ತಿಲ್ಲ. ಪ್ರತ್ಯಕ್ಷ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಮಸಬಿನಾಳ ಮಾತನಾಡಿ, “ಬಾಲ್ಯದ ಶಿಕ್ಷಣವನ್ನು ಇದೇ ಶಾಲೆಯಲ್ಲಿ ಪೂರೈಸಿದ್ದೇನೆ. ಅಂದು ಆಡಿ ಬೆಳೆದ ಶಾಲೆ ಎಂದು ಹಾಳು ಕೊಂಪೆಯಾಗಿರುವುದು ಕಂಡು ಮನಸ್ಸಿಗೆ ನೋವಾಗುತ್ತದೆ. ಕಟ್ಟಡದ ಸಂಪೂರ್ಣ ಸದುಪಯೋಗಕ್ಕೆ ನನ್ನ ಮಿತಿ ಒಳಗೆ ಹಾಗೂ ಸಂಬಂಧಿಸಿದ ಅಧಿಕಾರಿ ವರ್ಗದೊಡನೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವೆ” ಎಂದರು.
ಶಾಲೆಯ ಹಳೆ ವಿದ್ಯಾರ್ಥಿ ಪ್ರಕಾಶ್ ಗುಡಮನಿ ಮಾತನಾಡಿ, “ಈ ಶಾಲೆಯಲ್ಲಿ ಕಲಿತ ನಾವು ಪುಣ್ಯವಂತರು. ಆದರೆ ಈಗ ಶಾಲೆ ಪರಸ್ಥಿತಿ ನೋಡಿದರೆ ನೋವಾಗುತ್ತಿದೆ. ಈ ಬಿಲ್ಡಿಂಗ್ ಪೋಸ್ಟ್ ಆಫೀಸ್ ಗೆ ಕೊಟ್ಟರೆ ಒಳ್ಳೆಯದಾಗಬಹುದು. ಮತ್ತೆ ಶಾಲೆ ಪ್ರಾರಂಭ ಮಾಡಲು ಸಾಧ್ಯವಿಲ್ಲ. ಈಗಾಗ್ಲೇ ಈ ಶಾಲೆ ಸ್ಥಳಾಂತರ ಮಾಡಲಾಗಿದೆ. ಇದು ಬೇರೆ ಕಚೇರಿ ಮಾಡಲು ಸೂಕ್ತವಾದ ಸ್ಥಳವಾಗಿದೆ” ಎಂದರು.
“ಅಂಗನವಾಡಿ ಕೇಂದ್ರವಾಗಿ ಈಗ ಒಂದು ವರ್ಷ ಕಳೆಗಿದೆ. ಈ ಶಾಲೆಯ ಹತ್ತಿರವಿರುವ ಕೇಂದ್ರದ ಮಕ್ಕಳು ಸಂಡಾಸ್ ಮತ್ತು ಮೂತ್ರ ವಿಸರ್ಜನೆ ವಾಸನೆಯಿಂದ ಹಲವು ರೋಗಗಳಿಗೆ ತುತ್ತಾಗುತ್ತಿರುವುದು ಬಹಳ ಬೇಸರದ ಸಂಗತಿ. ಸಮಸ್ಯೆಯನ್ನ ವಾರ್ಡ್ ಸದಸ್ಯರಿಗೆ ಮತ್ತು ಅಂಗನವಾಡಿ ಮೇಲ್ವಿಚಾರಕರಿಗೆ ತಿಳಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ” ಎನ್ನುತ್ತಾರೆ ಅಂಗನವಾಡಿ ಸಹಾಯಕಿ

ಶತಮಾನಕ್ಕಿಂತ ಹೆಚ್ಚು ಕಾಲ ಅಧ್ಯಯನದ ಪವಿತ್ರ ಆವರಣವಾಗಿ, ಅಕ್ಷರ ದಾಸೋಹದ ಸಾನ್ನಿಧ್ಯವಾಗಿ ಇದ್ದ ದೇವರ ಹಿಪ್ಪರಗಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯ ಐತಿಹಾಸಿಕ ಕಟ್ಟಡ ಇಂದು ಮರೆಯಾಗುತ್ತಿರುವ ವಿಳಾಸವಾಗಿ ಮಾರ್ಪಡುತ್ತಿದೆ. ಸಂಸ್ಕೃತಿಯ ಸಮೃದ್ಧ ಪಾಠ ಹೇಳಿದ ಈ ಕಟ್ಟಡ ಇಂದು ಪಾಪದ ಪಾಠ ಕೇಳುತ್ತಿದೆ ಎಂಬುದು ದುರಂತದ ವಾಸ್ತವ. ಒಂದು ಕಾಲದಲ್ಲಿ ನ್ಯಾಯಾಲಯ, ಪೊಲೀಸ್ ಠಾಣೆ, ಶಾಲೆ.. ಎಲ್ಲವೂ ಆಗಿ ಕೆಲಸಮಾಡಿದೆ.
ಸರ್ಕಾರ, ಸ್ಥಳೀಯ ಸಂಸ್ಥೆಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಿ, ಪುನರ್ಜೀವನ ನೀಡಿ, ಮುಂದಿನ ತಲೆಮಾರಿಗೆ ದಾರಿ ತೋರಿಸಬೇಕಾಗಿದೆ. ಒಂದು ಕಾಲದಲ್ಲಿ ಅಕ್ಷರದ ಬೆಳಕು ಹರಡಿದ ಈ ಸ್ಥಳ ಮತ್ತೆ ವಿದ್ಯೆಯ ದೀಪವಾಗಿ ಹೊಳೆಯಬೇಕಿದೆ. ಎಲ್ಲರೂ ಕೈಜೋಡಿಸಿದರೆ ಇತಿಹಾಸವನ್ನು ಉಳಿಸಬಹುದು ಎಂಬುದು ಗ್ರಾಮಸ್ಥರ, ಹಳೆಯ ವಿದ್ಯಾರ್ಥಿಗಳ ಆಶಯ.