ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಹುಯೋಗಿ ತಳ್ಳೋಳ್ಳಿ ಮಾತನಾಡಿ, “ಸಂವಿಧಾನದ 93ನೇ ತಿದ್ದುಪಡಿಯನ್ವಯ ಎಲ್ಲ ಉನ್ನತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಒದಗಿಸಬೇಕು.
ಹಾಸ್ಟೆಲ್ಗಳಿಗೆ ಪೀಠೋಪಕರಣಗಳು ಸಮರ್ಪಕವಾಗಿ ಪೂರೈಕೆಯಾಗಬೇಕು. ನಿರಂತರವಾಗಿ ಪಾಠಗಳು ನಡೆಯಬೇಕು. ಹಾಸ್ಟೆಲ್ಗಳಿಗೆ ವಿದ್ಯಾರ್ಥಿಗಳು ಸಲ್ಲಿಸುವ ಎಲ್ಲ ರಾಜ್ಯಗಳಿಗೂ ಪ್ರವೇಶ ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು.
“ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ, ದೌರ್ಜನ ತಡೆ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಅಪರಾಧಗಳ ಪತ್ತೆ ಹಾಗೂ ವಿಚಾರಣೆಗೆ ಪ್ರತ್ಯೇಕ ಸಮಿತಿ ಸ್ಥಾಪಿಸಬೇಕು. ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ಥಕಗೊಳಿಸಬೇಕು. ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗಗೊಳಿಸಬೇಕು” ಎಂದು ಅಗ್ರಹಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಂದ್ರಕಾಂತ್ ಸಿಂಗೆ ಮಾತನಾಡಿ, “ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ 2020, ಎನ್ಇಟಿ 2020 ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಬೇಕು.
ಎಸ್ಇಪಿ ಆಯೋಗವು ಸಮಾಜದ ವಂಚಿತ ಸಮುದಾಯಗಳ ಶೈಕ್ಷಣಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನೀತಿ ರೂಪಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸಂತ ಜೆರೋಸಾ ಶಾಲೆಗೆ ಸಮಾನ ಮನಸ್ಕರ ನಿಯೋಗ ಭೇಟಿ; ಉನ್ನತ ಮಟ್ಟದ ತನಿಖೆಗೆ ಆಗ್ರಹ
“ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆ ಮೀಸಲಾತಿಯನ್ನು ಜಾರಿಗೊಳಿಸಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮ್ಯಾನೇಜ್ಮೆಂಟ್ ಕೋಟಾದಡಿ ಪ್ರವೇಶ ಪಡೆದ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ಅದೀನದಲ್ಲಿ ಬರುವ ಎಲ್ಲ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ, ವಾಸಿಮ ಇನಾಮಧಾರ, ಸಲೀಂ ಕಲಾದಗಿ, ಅಶೋಕ್ ಭಜಂತ್ರಿ, ಸಾಧಿಕ್ ಹೊನ್ನಟಗಿ, ಶಿವರಾಜ್ ಕಟ್ಟಿಮನಿ, ಬಸವರಾಜ್ ಭಜಂತ್ರಿ, ಹನುಮಂತ ತಳಕೇರಿ, ಮಹೇಶ್ ಜವಳಿ, ಬಸು ತಳಕೇರಿ, ಶಿವು ವಾಲಿಕಾರ ಸೇರಿದಂತೆ ಇತರರು ಇದ್ದರು.