ಆಡಳಿತ ಸುವ್ಯವಸ್ಥೆ ಕಾಪಾಡಲು ವಿಫಲವಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ನಿಂದ ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
“ಎಸ್ಸಿ/ಎಸ್ಟಿ ವಸತಿ ನಿಲಯಗಳು ಶೋಷಿತ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಬಲೀಕರಣದ ಹಿತದೃಷ್ಟಿಯಿಂದ ಸಂವಿಧಾನ ಬದ್ದವಾಗಿ ಸಾಗಿವೆ. ಅವುಗಳ ನಿರ್ವಹಣೆಗೆ ಮಂತ್ರಿಯಿಂದ ಹಿಡಿದು ಕಾವಲುಗಾರನವರೆಗೂ ಒಂದು ಇಲಾಖೆಯನ್ನೇ ಸಂವಿಧಾನಾತ್ಮಕವಾಗಿ ನೀಡಲಾಗಿದೆ” ಎಂದು ಹೇಳಿದರು.
“ವಿಪರ್ಯಾಸವೆಂದರೆ ವಿಜಯಪುರ ಜಿಲ್ಲೆಯಲ್ಲಿ ಅದನ್ನು ನೋಡಿಕೊಳ್ಳಲು ಇರುವ ಸರ್ಕಾರಿ ಅಧಿಕಾರಿ ವೃಂದದ ನಿರ್ಲಕ್ಷ್ಯದಿಂದ ವಸತಿನಿಲಯ ನಿರ್ವಹಣೆ ಹಾಳಾಗಿ ಹೋಗುತ್ತಿರುವುದು ಖೇದಕರ ಸಂಗತಿ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಳಕು ನೀಡಬೇಕಾದ ಕೆಲ ವಸತಿನಿಲಯಗಳು ಆರೋಪಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ” ಎಂದು ಆರೋಪಿಸಿದರು.
“ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿರ್ಮಿಸಿರುವ ವಸತಿ ನಿಲಯದಲ್ಲಿ ಗಂಭೀರ ಆರೋಪಕ್ಕೆ ಒಳಗಾದ ಆರೋಪಿ ಒಬ್ಬನಿಗೆ ಆಶ್ರಯ ನೀಡಿದ ಘಟನೆ ನಗರದ ಭೂತನಾಳ ವಸತಿ ನಿಲಯದಲ್ಲಿ ನಡೆದಿದೆ. ಮಹಾರಾಷ್ಟ್ರ ರಾಜ್ಯದ ಪೊಲೀಸರು ಆರೋಪಿಯನ್ನು ಸದರಿ ವಸತಿ ನಿಲಯದಿಂದ ಬಂಧಿಸಿರುವುದು ಅಂತಕಕಾರಿ ಸಂಗತಿಯಾಗಿದೆ. ಈ ಘಟನೆ ಇದೇ ತಿಂಗಳ 9, 1ರಂದು ಮಧ್ಯರಾತ್ರಿ 12ರಿಂದ 1 ಗಂಟೆಯ ನಡುವೆ ನಡೆದಿದೆ. ಇಲ್ಲಿ ಬಂಧಿಸಲ್ಪಟ ಆರೋಪಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವವನು ಎಂದು ಮಾಹಿತಿ ಇದ್ದು, ಈ ಆಡಳಿತ ವೈಫಲ್ಯದ ಸೂಕ್ತ ತನಿಖೆಗೆ ನಿಮ್ಮ ನೇತೃತ್ವದಲ್ಲಿ ನಡೆದರೆ ಮಾತ್ರ ಸತ್ಯಾಸತ್ಯತೆ ಹೊರಬರಲು ಸಾಧ್ಯವಾಗಲಿದೆ” ಎಂದು ಹೇಳಿದರು.
“ಇಂತಹ ಘಟನೆ ನಡೆಯಲು ಆಡಳಿತ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಆಡಳಿತ ವೈಫಲ್ಯ ಕುಸಿತಕ್ಕೆ ಇಲಾಖೆಯ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಅಲ್ಲದೇ ತಾಲೂಕಾಧಿಕಾರಿಗಳು, ವಸತಿ ನಿಲಯದ ನಿಲಯ ಪಾಲಕರು ನೇರ ಹೊಣೆಗಾರರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸ್ಥಳೀಯರ ಬೇಡಿಕೆಗೆ ಮಣಿದ ಎಂಸಿಸಿ; ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಕಾರ್ಯಾರಂಭ
“ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಾವು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಡಳಿತ ವೈಫಲ್ಯಕ್ಕೆ ಕಾರಣವಾಗಿರುವ ಅಧಿಕಾರಿಗಳಿಗೆ ಬೇರೆಡೆ ವರ್ಗಾವಣೆ ಮಾಡಿ, ಇಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಇವರ ಹುದ್ದೆಗೆ ನಿಯೋಜಿಸುವ ಮೂಲಕ ಇಲಾಖೆ ಆಡಳಿತ ವ್ಯವಸ್ಥೆಯನ್ನು ಕಾಪಾಡಬೇಕು. ತಾವು ವಿಳಂಬ ನೀತಿ ಅನುಸರಿಸದೆ ಗಂಭೀರವಾಗಿ ಪರಿಗಣಿಸಿ ಕಾನೂನಾತ್ಮಕ ಶಿಕ್ಷೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ದವಳಗಿ, ಸಂತೋಷ್ ಪೂಜಾರಿ, ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಸೇರಿದಂತೆ ಇತರರು ಇದ್ದರು.

5