ಶೇ. 60ರಷ್ಟು ಕನ್ನಡ ನಾಮಫಲಕಗಳನ್ನು ಅಂಗಡಿ ಮುಂಗಟ್ಟುಗಳ ಮುಂದೆ ಹಾಕಿದಂತೆ ಕಾಣಿಸುವುದಿಲ್ಲ, ಇದರಿಂದ ಸರ್ಕಾರದ ಆದೇಶಕ್ಕೆ ಬೆಲೆಯಿಲ್ಲವೆನ್ನುವುದು ಗೊತ್ತಾಗುತ್ತದೆ ಎಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗ ನಗರದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆ ಶೇ. 60ರಷ್ಟು ಕನ್ನಡ ನಾಮಫಲಕಗಳಿರಬೇಕೆಂದು ಆದೇಶ ಜಾರಿಗಾಗಿ ನಡೆಸಿದ ಪ್ರತಿಭಟನೆ ವೇಳೆ ಅವರು ಮಾತನಾಡಿದರು, ಸರ್ಕಾರದ ಆದೇಶದ ಬಗ್ಗೆ ಜಿಲ್ಲಾಡಳಿತವಾಗಲಿ, ನಗರ ಸಭೆಯಾಗಲಿ, ಕನ್ನಡ ಸಂಸ್ಕೃತಿ ಇಲಾಖೆಯಾಗಲಿ ಆಸಕ್ತಿತೋರಿಸುತ್ತಿಲ್ಲ. ಕೂಡಲೇ ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಗಳನ್ನು ಅಳವಡಿಸುವಂತೆ ಸೂಚಿಸಬೇಕು, ಇಲ್ಲವಾದಲ್ಲಿ ಮಾರ್ಚ್ 4ರಂದು ಕರುನಾಡ ವಿಜಯ ಸೇನೆ ವತಿಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ಇಂಗ್ಲಿಷ್ ನಾಮಫಲಕಗಳನ್ನು ಕಿತ್ತೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿ ಅಂಗಡಿ ಮುಂಗಟ್ಟು, ಶಾಲೆ, ಕಂಪನಿಗಳು ಹಾಗೂ ವ್ಯಾಪಾರ ವಹಿವಾಟು ನಡೆಸುವ ಸ್ಥಳಗಳಲ್ಲಿ ಶೇಕಡ 60 ರಷ್ಟು ಕನ್ನಡದಲ್ಲಿ ನಾಮಫಲಕಗಳಿರಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿ ಫೆಬ್ರವರಿ 28 ರ ಗಡುವು ನೀಡಿದ್ದರು. ಆದರೆ ಇದುವರೆಗೂ ಆದೇಶ ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಮ್ಮೆ ಆದೇಶ ಪಾಲನೆ ಮಾಡುವ ಬಗ್ಗೆ ತಿಳಿಸಿ ಕನ್ನಡ ಪ್ರೇಮ ಬೆಳೆಸುವ ಸಲುವಾಗಿ ಗಾಂಧಿ ವೃತ್ತದಿಂದ ರಸ್ತೆಯ ಎರಡು ಬದಿಗಳಲ್ಲಿರುವ ಅಂಗಡಿಯವರಿಗೆ ಗುಲಾಬಿ ಹೂವು ನೀಡುವ ಮೂಲಕ ಕರುನಾಡ ವಿಜಯ ಸೇನೆ ಸಂಘಟನೆ ಪ್ರತಿಭಟನಾಕಾರರು ಆಂಗ್ಲ ಭಾಷೆಯ ಬದಲು ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಮನವೊಲಿಸಲು ಪ್ರಯತ್ನಿಸಿದರು.
ನಂತರ, ಕರ್ನಾಟಕ ರಾಜ್ಯ ಸರ್ಕಾರ ನಾಡಿನಾದ್ಯಂತ ಶೇ.60ರಷ್ಟು ಕನ್ನಡ ನಾಮಫಲಕಗಳಿರಬೇಕೆಂದು ಆದೇಶ ಹೊರಡಿಸಿದ್ದರೂ ಯಾರು ಪಾಲನೆ ಮಾಡುತ್ತಿಲ್ಲದಿರುವುದನ್ನು ಖಂಡಿಸಿ ಕನ್ನಡ ವಿಜಯ ಸೇನೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ್ಯೆ ವೀಣಾ ಗೌರಣ್ಣ, ಉಪಾಧ್ಯಕ್ಷ್ಯೆ ರತ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು, ಕಾರ್ಯದರ್ಶಿಗಳಾದ ಅಣ್ಣಪ್ಪ, ಜಗದೀಶ್ ಸಿ, ನಗರಾಧ್ಯಕ್ಷ ಅವಿನಾಶ್, ತಾಲೂಕು ಅಧ್ಯಕ್ಷ ಎನ್.ಸಂತೋಷ್, ರಾಜಣ್ಣ, ಹರೀಶ್ ಕುಮಾರ್, ಅಖಿಲೇಶ್, ಕಮಲಮ್ಮ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.