ಹಾಳಾಗಿರುವ ತೊಗರಿ ಬೆಳೆಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ರೈತ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811 ತೊಗರಿ ಬೀಜ ಸಂಪೂರ್ಣ ಕಳಪೆ ಮಟ್ಟದಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಈ ಕುರಿತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಕೃಷಿ ಇಲಾಖೆ ಹಾಗೂ ಧಾರವಾಡದ ಕೃಷಿ ವಿದ್ಯಾಲಯದ ವಿಜ್ಞಾನಿಗಳು ತೊಗರಿ ಬೆಳೆ ಪರಿಶೀಲನೆ ನಡೆಸಿ, ಜಿ.ಆರ್.ಜಿ 152 ಹಾಗೂ 811 ಬೀಜ ಕಳಪೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಸರ್ಕಾರಕ್ಕೆ; ತೊಗರಿ ಬೀಜ ಉತ್ತಮವಾಗಿದೆ. ರೈತರು ದಟ್ಟಣೆಯಾಗಿ ಬಿತ್ತನೆ ಮಾಡಿದ್ದರಿಂದ ಕಾಯಿ ಹಿಡಿದಿಲ್ಲ ಎಂದು ತಪ್ಪು ವರದಿ ಸಲ್ಲಿಸಿದ್ದಾರೆ. ಇದರಿಂದ ರೈತರಿಗೆ ಆಘಾತವಾಗಿದ್ದು, ಬೆಂಗಳೂರಿನಿಂದ ಬೇರೆ ತಂಡ ಕಳುಹಿಸಿ ಮತ್ತೊಮ್ಮೆ ತೊಗರಿ ಬೆಳೆ ಪರಿಶೀಲನೆ ಮಾಡಿ ಸೂಕ್ತ ವರದಿ ಪಡೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು. ರೈತರಿಗೆ ಪ್ರತಿ ಎಕರೆಗೆ ಕನಿಷ್ಟ 25000 ಪರಿಹಾರ ಒದಗಿಸಬೇಕು. ರೈತರ ವಿಮೆಗೆ ಪರಿಹಾರ ಒದಗಿಸಿ ರೈತರನ್ನು ಬದುಕಿಸಬೇಕೆಂದು ಒತ್ತಾಯಿಸಿದರು.
ಈ ವರದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಪದವಿ ಕಾಲೇಜು ಮಂಜೂರಿಗೆ ದಲಿತ ವಿದ್ಯಾರ್ಥಿ ಪರಿಷತ್ತು ಆಗ್ರಹ
ಈ ಸಂದರ್ಭದಲ್ಲಿ ಬಸವರಾಜ ಚೌಧರಿ, ಮಹಾಂತೇಶ ಪಡಗಾನೂರು, ಶಿವಾನಂದ ಹಡಪದ, ಸಂತೋಷ ಪಡಗಾನೂರ, ಶಿವಾನಂದ ಪಡಗಾನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.