ಕೌದಿಯ ಸೌಂದರ್ಯ ಎಲ್ಲರಿಗೂ ಗೋಚರಿಸುತ್ತದೆ. ಆದರೆ, ಸೂಕ್ಷ್ಮ ಕಲಾ ಪ್ರಕಾರದ ಹಿಂದಿನ ಶ್ರಮ ಕಣ್ಣಿಗೆ ಕಾಣುವುದಿಲ್ಲ. ಕೌದಿ ಒಂದು ರೀತಿ ಭಾರತದ ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಟ್ಟೆಯಾಗಿದೆ ಎಂದು ರಂಗಕಲಾವಿದೆ ಬಿ ಜಯಶ್ರೀ ಹೇಳಿದರು.
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಗೀತಾಂಜಲಿ ಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭ ಹಾಗೂ ಸಬಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
“ಕಸೂತಿ ಕಲೆ, ಲಂಬಾಣಿ ಉಡುಪುಗಳ ವಿನ್ಯಾಸ, ಕೌದಿಯಲ್ಲಿರುವ ಸೂಕ್ಷ್ಮ ಕಲಾ ಪ್ರಕಾರಗಳ ಹಿಂದೆ ಮಹಿಳೆಯ ಶ್ರಮ ಅಡಗಿದೆ. ಸೂಕ್ಷ್ಮ ಕಲಾ ವಿನ್ಯಾಸವನ್ನು ಕಣ್ಣಲ್ಲಿ ಕಣ್ಣಿಟ್ಟು ಮಾಡಬೇಕಾಗುತ್ತದೆ. ಅದರ ಹಿಂದಿನ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ ಇಲ್ಲ” ಎಂದರು.
“ಕಷ್ಟ-ಕಾರ್ಪಣ್ಯಗಳು ಬದುಕಿನಲ್ಲಿ ಎದುರಾಗುವುದು ಸಹಜ. ಆದರೆ, ಅದನ್ನು ಮೆಟ್ಟಿ ನಿಲ್ಲಬೇಕು, ಸಾಧನೆಯ ಹಿಂದೆ ನೋವಿನ ಕಥೆ ಇದ್ದೇ ಇರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು. ಉತ್ತಮ ಶಿಕ್ಷಣವನ್ನು ಕೊಡಿಸಬೇಕು” ಎಂದು ಹೇಳಿದರು.
ಸಕಲ ಸಂಸ್ಥೆಯ ಅಧ್ಯಕ್ಷ ಮಲ್ಲಮ್ಮ ಯಳವಾರ ಮಾತನಾಡಿ, “ಸಬಲ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 37 ವರ್ಷಗಳಿಂದ ಶ್ರಮಿಸುತ್ತದೆ. ಅದರ ಅಡಿಯಲ್ಲಿ ಆರಂಭವಾದ ಗೀತಾಂಜಲಿ ಶಾಲೆ ಕಳೆದ 25 ವರ್ಷಗಳಿಂದ ವಿದ್ಯಾರ್ಜನೆ ಕಾರ್ಯ ಮಾಡುತ್ತದೆ” ಎಂದರು.
“ಸಬಲ ಸಂಸ್ಥೆಯ ಸಹೋದರ ಸಂಸ್ಥೆಯಾಗಿರುವ ಚೈತನ್ಯ ಮಹಿಳಾ ಬ್ಯಾಂಕ್ 25ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಸಾಧಕ ಮಹಿಳೆಯನ್ನು ಗುರುತಿಸಿ ಪ್ರತಿ ವರ್ಷ ಸಬಲ ಪುರಸ್ಕಾರ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಈ ಪರಂಪರೆ ಮುಂದೆಯೂ ನಡೆಯಲಿ ಎಂಬ ಅಭಿಲಾಶೆಯೊಂದಿಗೆ ಈ ಕಾರ್ಯಕ್ಕಾಗಿ ₹8 ಲಕ್ಷ ಠೇವಣಿ ಇರಿಸಿ ಅದರ ಲಾಭಾಂಶದಲ್ಲಿ ಪ್ರಶಸ್ತಿಯ ನಗದು ಪುರಸ್ಕಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನಮಗೆ ಗೌರವ ಇದೆ, ಕೂಲಿಗೆ ಕನಿಷ್ಠ ವೇತನ ಕೊಡಿ; ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ
ಈ ಸಂದರ್ಭದಲ್ಲಿ ಸಬಲ ಸಂಸ್ಥೆಯಿಂದ ರಾಯಚೂರು ಜಿಲ್ಲೆಯ ಪೊಟ್ನಾಳ್ ಗ್ರಾಮದ ಚಿನ್ನಮ್ಮ ಮುದ್ದೇನಗುಡಿ ಹಾಗೂ ಚಿಕ್ಕಮಗಳೂರು ಜಿಲ್ಲೆ ಮುಗಳಿ ಗ್ರಾಮದ ಜಾನಪದ ಕಲಾವಿದ ಎಸ್ ಎಸ್ ಸಿ ಲಕ್ಷ್ಮೀದೇವಮ್ಮ ಅವರಿಗೆ ಸಬಲ ಪುರಸ್ಕಾರ ನೀಡಿ ಗೌರವಿಸಿದರು.
ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ, ಆರ್ ಸುನಂದಮ್ಮ, ವೈದ್ಯ ಡಾ.ಮಯೂರ್ ಕಾಕು, ವಿಶ್ರಾಂತ ಸಿಪಿಐ ಬಾಗೇವಾಡಿ, ಚೈತನ್ಯ ಬ್ಯಾಂಕ್, ಸಬಲಾ ಸಂಸ್ಥೆ ಹಾಗೂ ಗೀತಾಂಜಲಿ ಶಾಲೆಯ ಸಿಬ್ಬಂದಿ ಇದ್ದರು.