ಮಾರುಕಟ್ಟೆಯಲ್ಲಿ ಕಲ್ಲಂಗಡಿ ದರ ದಿಢೀರ್ ಕುಸಿದಿದ್ದು, ಕಲ್ಲಂಗಡಿ ಬೆಳೆಗಾರರು ಕಂಗಾಲಾಗಿದ್ದಾರೆ. ಹಾಕಿದ ಖರ್ಚು ಮೈ ಮೇಲೆ ಬಂದಿದ್ದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಕೆಲವರು ಹಣ್ಣುಗಳನ್ನು ಹೊಲದಲ್ಲಿಯೇ ಕೊಳೆಯಲು ಬಿಟ್ಟಿದ್ದಾರೆ.
ರಾಜ್ಯಕ್ಕೆ ಮಹಾರಾಷ್ಟ್ರದ ಕಲ್ಲಂಗಡಿ ಲಗ್ಗೆ ಇಟ್ಟಿದ್ದರಿಂದ ಸ್ಥಳೀಯ ಬೆಳೆಗಾರರ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ ನಾಲತವಾಡ, ಮುದ್ದೇಬಿಹಾಳ, ತಾಳಿಕೋಟೆ ಸೇರಿದಂತೆ ವಿಜಯಪುರ ಜಿಲ್ಲೆಯ ಇತರ ಭಾಗಗಳಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆದಿದ್ದರಿಂದ ರೈತರಿಗೆ ಮಾರುಕಟ್ಟೆ ಸಮಸ್ಯೆ ಉಂಟಾಗಿದೆ.
“ಕಲ್ಲಂಗಡಿ ಬೆಳೆದು ಹೆಚ್ಚು ಆದಾಯ ಗಳಿಸಬೇಕು ಎನ್ನುತ್ತಿದ್ದ ನಿರೀಕ್ಷೆ ಹುಸಿಯಾಗಿದೆ. ಪಟ್ಟಣಕ್ಕೆ ಕಳೆದ ಒಂದು ವಾರದಿಂದ ನಾನಾ ಕಡೆಗಳಿಂದ ಕಲ್ಲಂಗಡಿ ಆವಕ ಹೆಚ್ಚಾಗಿದ್ದು, ಸ್ಥಳೀಯ ರೈತರಿಗೆ ಸಮಸ್ಯೆಯಾಗಿದೆ. ನಿತ್ಯ ಟ್ರಾಕ್ಟರ್, ಟಂಟಂ ಹಾಗೂ ತಳ್ಳುಗಾಡಿ ಮೂಲಕ ಮಾರುಕಟ್ಟೆಗಳು ಮತ್ತು ಗಲ್ಲಿಗಲ್ಲಿಗಳಲ್ಲಿ ಅಲೆದರೂ ಅಂದುಕೊಂಡಷ್ಟು ಹಣ್ಣುಗಳು ಮಾರಾಟವಾಗುತ್ತಿಲ್ಲ. ಇದರಿಂದ ಮತ್ತಷ್ಟು ಸಂಕಷ್ಟ ಅನುಭವಿಸುವಂಥಾಗಿದೆ” ಎನ್ನುತ್ತಾರೆ ರೈತರು.

“ವ್ಯಾಪಾರವಾಗದೆ ಉಳಿದಿರುವ ಕಲ್ಲಂಗಡಿ ಹಣ್ಣುಗಳು ಬಿಸಿಲಿನ ತಾಪಕ್ಕೆ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತಿವೆ. ರೈತರು ಕಟಾವು ಮಾಡದೆ ಹಾಗೇ ಬಿಟ್ಟಿರುವ ಕಾರಣ ಹಣ್ಣುಗಳು ಹೊಲದಲ್ಲಿಯೇ ಕೊಳೆಯುತ್ತಿವೆ. ಒಂದು ಹಣ್ಣನ್ನು ₹10 ರಿಂದ ₹15ಕ್ಕೆ ಒತ್ತಾಯವಾಗಿ ಗ್ರಾಹಕರಿಗೆ ಮಾರುವ ಸ್ಥಿತಿ ಬಂದಿದೆ. ಕಳೆದ ವರ್ಷ ಕೆಜಿಗೆ ₹16 ರಿಂದ ₹20 ಇತ್ತು. ಈ ಬಾರಿ ಕೆಜಿಗೆ ₹6 ರಿಂದ ₹7ಕ್ಕೆ ಕುಸಿದಿದೆ. ಜತೆಗೆ ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ರೈತರ ಮಾಲನ್ನು ನಾವು ಹೇಗೆ ಖರೀದಿಸಬೇಕು ಹೇಳಿ” ಎನ್ನುತ್ತಾರೆ ವ್ಯಾಪಾರಿಗಳು.
“ಮುದ್ದೇಬಿಹಾಳ ತಾಲೂಕಿನಲ್ಲಿ 85 ಹೆಕ್ಟೇರ್, ತಾಳಿಕೋಟೆ 50, ನಾಲತವಾಡ 25, ದವಳಗಿ 15 ಹೆಕ್ಟೇರ್ ಸೇರಿದಂತೆ ಒಟ್ಟು 175 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ನಿತ್ಯ ಮಹಾರಾಷ್ಟ್ರದಿಂದ ಮುದ್ದೇಬಿಹಾಳ ಮಾರುಕಟ್ಟೆಗೆ ಗರಿಷ್ಠ ಮಟ್ಟದಲ್ಲಿ ಕರಿ ಕಲ್ಲಂಗಡಿ ಆವಕವಾಗುತ್ತಿದೆ. ಇದರಿಂದ ಮುದ್ದೇಬಿಹಾಳ ತಾಲೂಕಿನ ರೈತರಿಗೆ ಪೆಟ್ಟು ಬಿದ್ದಿದೆ.

ಕಲ್ಲಂಗಡಿ ಬೆಳೆಗಾರ ಮಲ್ಲಪ್ಪ ಗಂಗನಗೌಡರ ಈ ದಿನ.ಕಾಮ್ನೊಂದಿಗೆ ಮಾತನಾಡಿ, “3 ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಎಕರೆಗೆ ₹70,000 ಖರ್ಚು ಮಾಡಿರುವೆ. ಸದ್ಯ ಪ್ರತಿ ಎಕರೆಗೆ 15ರಿಂದ 20 ಟನ್ ಬೆಳೆ ಬಂದಿದೆ. ಆದರೆ ಬೆಲೆ ಇಲ್ಲದಿರುವ ಕಾರಣ ಬಿತ್ತನೆಯ ಖರ್ಚೂ ಕೂಡಾ ಕೈಗೆ ಸಿಗದಂತಾಗಿದ್ದು, ನಷ್ಟ ಅನುಭವಿಸುವಂತಾಗಿದೆ. ಹೊರ ರಾಜ್ಯದ ಕಲ್ಲಂಗಡಿಗೆ ಕಡಿವಾಣ ಹಾಕಬೇಕು. ಆಗ ಮಾತ್ರ ಸ್ಥಳೀಯ ರೈತರಿಗೆ ಸ್ವಲ್ಪವಾದರೂ ಆದಾಯ ಸಿಗಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಹವಾಮಾನದಲ್ಲಿ ತಾಪಮಾನ ಹೆಚ್ಚಳ; ಮುಂಜಾಗೃತೆ ಕ್ರಮಕ್ಕೆ ಆರೋಗ್ಯ ಇಲಾಖೆ ಸೂಚನೆ
ಈ ದಿನ.ಕಾಮ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಫಿಕ್ ಬವೂರು ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ರೈತರು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಲ್ಲಂಗಡಿ ಬೆಳೆದಿದ್ದಾರೆ. ಕಳೆದ ವಾರ ಕೆಜಿಗೆ ₹8 ರಿಂದ ₹10ಕ್ಕೆ ಮಾರಾಟ ಮಾಡಿದ್ದಾರೆ. ಈ ವಾರ ಕೆಜಿಗೆ ₹7ರವರೆಗೆ ಮಾರುತ್ತಿದ್ದಾರೆ. ಬೆಳೆಯ ನಿರ್ವಹಣೆ ಕೊರತೆಯಿಂದ ಗಾತ್ರದಲ್ಲಿ ಕುಂಠಿತ ಕಂಡುಬಂದಿದೆ. ಹೊರ ರಾಜ್ಯದಿಂದಲೂ ಹಣ್ಣು ಮಾರಾಟಕ್ಕೆ ಬರುತ್ತಿರುವ ಪರಿಣಾಮ ಈ ಬಾರಿ ರೈತರಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ” ಎಂದು ಮಾಹಿತಿ ನೀಡಿದರು.
“ತೋಟಗಾರಿಕೆ ಇಲಾಖೆ ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕಲ್ಲಂಗಡಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಕಲ್ಲಂಗಡಿ ಹಣ್ಣಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸುವ ಮೂಲಕ ರೈತರಿಗೆ ನೆರವಾಗಬೇಕು” ಎಂಬುದು ರೈತರ ಆಗ್ರಹವಾಗಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು