ಕೋಮುವಾದಿಗಳ ಕಪಿಮುಷ್ಟಿಯಲ್ಲಿರುವ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ವಿದ್ಯಾರ್ಥಿ ಯುವಜನರ ಮೇಲಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಹೇಳಿದರು.
ವಿಜಯಪುರ ನಗರದ ನೌಭಾಗ್ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಮೆಟ್ರಿಕ್ ನಂತರದ ಎಸ್ಸಿ/ಎಸ್ಟಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪ್ರಸ್ತುತ ದಿನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಮರೆಯದ ದಿನ ಸಂವಿಧಾನದ ದಿನವಾಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ ಸಮಾನತೆ ಸಿಕ್ಕಿರಲಿಲ್ಲ. ಅದೂ ಸಿಕ್ಕಿದ್ದು ಬಾಬಾಸಾಹೇಬರು ಬರೆದ ಸಂವಿದಾನದ ಮೂಲಕ. ಅದಕ್ಕಾಗಿ ನಾವು ಈ ದಿನವನ್ನು ಪ್ರಜಾಪ್ರಭುತ್ವದ ಸಮಾನತೆಯ ದಿನವೆಂದು ಆಚರಿಸಬೇಕಾಗಿದೆ” ಎಂದು ಹೇಳಿದರು.
“ಬಾಬಾಸಾಹೇಬರು ಸಂವಿಧಾನಾತ್ಮಕವಾಗಿ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ ಕೋಮುವಾದಿಗಳ ದುರುದ್ದೇಶದಿಂದ ಶೋಷಿತ ಜನರಿಗೆ ಸಂವಿಧಾನದ ಆಶಯಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಸಂವಿಧಾನವನ್ನು ಜಾರಿ ಮಾಡುತ್ತಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು. ಸಂವಿಧಾನ ಜಾರಿಯಾಗುವ ಜಾಗದಲ್ಲಿ ನಾವಿರಬೇಕು” ಎಂದರು.
ಅತಿಥಿ ಸಂಗಮೇಶ್ ಗೌರವರ್ ಮಾತನಾಡಿ, “ಪ್ರಸ್ತುತದಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಶಿಕ್ಷಣ ಸಂವಿಧಾನದ ಮೂಲಕವೇ ಹೊರತು ಮತ್ಯಾವ ಅವಶೇಷಗಳಿಂದ ಅಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂವಿಧಾನ ದಿನ; ಪೀಠಿಕೆ ಓದುವ ಮೂಲಕ ಆಚರಣೆ
ಕಾರ್ಯಕ್ರಮದ ನಿರೂಪಣೆ ಮಾಡಿದ ವಸತಿ ನಿಲಯದ ಮೇಲ್ವಿಚಾರಕ ಅಶೋಕ್ ಕಲಶೆಟ್ಟಿ ಮಾತನಾಡಿ, “ಸಮಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ” ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಆನಂದ ಮುದೂರ, ಸತೀಶ್ ಅಂಜುಟಗಿ, ಸಾಲೋಟಗಿ, ಋಷಿಕೇಶ್ ಕಟ್ಟಿ, ಸಚಿನ್ ಚಲವಾದಿ, ಶರಣು, ಸಂಜು, ವಿಕಾಸ, ರಾವಣ, ನವೀನ್ ಸೇರಿದಂತೆ ಬಹುತೇಕ ವಿದ್ಯಾರ್ಥಿಗಳು ಇದ್ದರು.